Bengaluru-Mumbai Train: 30 ವರ್ಷಗಳ ಬಳಿಕ ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು
ಬೆಂಗಳೂರು ಹಾಗೂ ಮುಂಬೈ ನಡುವೆ ಸಂಚರಿಸುವವರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭರ್ಜರಿ ಗುಡ್ನ್ಯೂಸ್ ನೀಡಿದ್ದಾರೆ. ಕಳೆದ 30 ವರ್ಷಗಳ ಬಳಿಕ ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು ಸೇವೆ ಘೋಷಣೆಯಾಗಿದ್ದು, ಈ ಬಗ್ಗೆ ತೇಜಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ. ಸಂಸದರಾದ ಬಳಿಕ ತೇಜಸ್ವಿ ಸೂರ್ಯ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಕೂಡ ಸಲ್ಲಿಸಿದ್ದರು. ಕೊನೆಗೂ ಆ ಬೇಡಿಕೆ ಈಡೇರಿದ್ದು, ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು ಸದ್ಯದಲ್ಲೇ ಆರಂಭವಾಗಲಿದೆ.
ಬೆಂಗಳೂರು ಮತ್ತು ಮುಂಬೈ ಜನರಿಗೆ ನನ್ನಲ್ಲಿ ಒಂದು ಒಳ್ಳೆಯ ಸುದ್ದಿ ಇದೆ. ಕಳೆದ 30 ವರ್ಷಗಳಿಂದ, ನಮ್ಮ ಎರಡು ಮಹಾ ನಗರಗಳನ್ನು ಉದ್ಯಾನ್ ಎಕ್ಸ್ಪ್ರೆಸ್ ಎಂಬ ಒಂದೇ ಒಂದು ಸೂಪರ್ ಫಾಸ್ಟ್ ರೈಲು ಮೂಲಕ ಸಂಪರ್ಕಿಸಲಾಗುತ್ತಿತ್ತು. ಆ ರೈಲು ತಲುಪಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ ಹೆಚ್ಚಿನ ಜನರು ಅನಿವಾರ್ಯವಾಗಿ ಬಸ್ ಅಥವಾ ವಿಮಾನಗಳನ್ನು ಬಳಸಬೇಕಾಗಿತ್ತು. ಇದರಿಂದ ಪ್ರಯಾಣ ದುಬಾರಿ ಮಾತ್ರವಲ್ಲದೆ ಮತ್ತು ಅನಾನುಕೂಲಕರವಾಗಿತ್ತು ಎಂದು ತೇಜಸ್ವಿ ಹೇಳಿದ್ದಾರೆ.

ಹೆಚ್ಚಿನ ರೈಲು ಸೇವೆಗಳನ್ನು ಪ್ರಾರಂಭಿಸಲು ಎರಡೂ ನಗರಗಳ ಜನರಿಂದ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಸಂಸತ್ತಿನಲ್ಲಿ ಪಿಎಸಿ ಸಭೆಗಳಲ್ಲಿ, ರೈಲ್ವೆ ಮಂಡಳಿ ಅಧ್ಯಕ್ಷರೊಂದಿಗೆ ಮತ್ತು ರೈಲ್ವೆ ಸಚಿವರೊಂದಿಗೆ ಈ ವಿಷಯವನ್ನು ಹಲವು ಬಾರಿ ಚರ್ಚೆ ಮಾಡಿದ್ದೆ. ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ಆರ್ಥಿಕ ಕೇಂದ್ರಗಳು ಬಹಳ ಹಿಂದಿನಿಂದಲೂ ಒಂದಕ್ಕಿಂತ ಹೆಚ್ಚು ನೇರ ಸೂಪರ್ ಫಾಸ್ಟ್ ರೈಲುಗಳನ್ನು ಹೊಂದಿಲ್ಲ ಎಂಬುದು ನಿಜಕ್ಕೂ ಅಚ್ಚರಿಯ ಪಡುವ ಸಂಗತಿ ಎಂದಿದ್ದಾರೆ.
ಧನ್ಯವಾದ ತಿಳಿಸಿದ ತೇಜಸ್ವಿ
ಅಂತಿಮವಾಗಿ ಬಿಜೆಪಿ ಸರ್ಕಾರ ರಾಷ್ಟ್ರಕ್ಕೆ ಅನೇಕ ಪ್ರಮುಖ ಭರವಸೆಗಳನ್ನು ನೀಡುತ್ತಿರುವಂತೆ, ನಮ್ಮ ಅತ್ಯಂತ ಕ್ರಿಯಾತ್ಮಕ ಮತ್ತು ಪಾಂಡಿತ್ಯಪೂರ್ಣ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಜಿ ಅವರು ಬೆಂಗಳೂರು ಮತ್ತು ಮುಂಬೈ ರೈಲು ನಿಲ್ದಾಣಗಳಲ್ಲಿ ಲೇನ್ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಹೆಚ್ಚು ಸೂಪರ್ ಫಾಸ್ಟ್ ರೈಲುಗಳ ಬೇಡಿಕೆಯನ್ನು ಸಾಧ್ಯವಾಗಿಸಿದ್ದಾರೆ. ನಮ್ಮದೇ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರ ಎಲ್ಲ ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹೊಸ ಸೇವೆಯಿಂದ ಮುಂಬರುವ ದಿನಗಳಲ್ಲಿ ಎರಡೂ ನಗರಗಳ ನಡುವಿನ ರೈಲು ಪ್ರಯಾಣ ಹೆಚ್ಚಾಗಲಿದ್ದು, ಲಕ್ಷಾಂತರ ಜನರಿಗೆ ಪ್ರಯೋಜನವಾಗಲಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಶ್ವಿನಿ ಅವರಿಗೆ ಧನ್ಯವಾದಗಳು ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications