ಬೆಂಗಳೂರು, ಕರ್ನಾಟಕದಲ್ಲಿ ತಾಪಮಾನ ಭಾರೀ ಏರಿಕೆ, ಹಿಂದಿನ ಮಳೆಯೇ ಆಸರೆ: ಹವಾಮಾನ ತಜ್ಞರು ಹೇಳಿದ್ದೇನು? ತಿಳಿಯಿರಿ
ಫೆಬ್ರುವರಿ ಮೊದಲ ವಾರದಲ್ಲಿಯೇ ತಾಪಮಾನ ಏರಿಕೆಯಾಗಿದ್ದರೂ, ಈ ಬೇಸಿಗೆಯಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 09: ಫೆಬ್ರುವರಿ ಮೊದಲ ವಾರದಲ್ಲಿಯೇ ತಾಪಮಾನ ಏರಿಕೆಯಾಗಿದ್ದರೂ, ಈ ಬೇಸಿಗೆಯಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಮಾನ್ಸೂನ್ ಸಮಯದಲ್ಲಿ ಉತ್ತಮ ಮಳೆಯಿಂದಾಗಿ ಕೆರೆ ಮತ್ತು ಇತರ ಜಲಮೂಲಗಳಲ್ಲಿ ನೀರು ತುಂಬಿದೆ. ಇದು ಮಣ್ಣಿನ ತೇವಾಂಶವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ವಾತಾವರಣವು ತಂಪಾಗಿರಿಸಲು ಸಹಾಯವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಹವಾಮಾನ ತಜ್ಞರ ಪ್ರಕಾರ, ಜನವರಿ ಕೊನೆಯ ವಾರದಲ್ಲಿ, ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನವು 27-28 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು, ಅದು ಈಗ ದಾಖಲಾದ 31 ಡಿಗ್ರಿ ಸೆಲ್ಸಿಯಸ್ಗೆ ಏರಿದೆ.
ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ಕೆಲವು ದಿನಗಳ ಹಿಂದೆ ಉತ್ತರ ಭಾರತದಲ್ಲಿ ಶೀತದ ಅಲೆ ಇತ್ತು, ಅದರ ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣದಲ್ಲಿಯೂ ಕಂಡುಬಂದಿದೆ. ಇದು ಚಳಿಗೆ ಕಾರಣವಾಯಿತು. ಈಗ, ಹವಾಮಾನವು ಸಾಮಾನ್ಯವಾಗಿದೆ ಮತ್ತು ನಾವು ತಾಪಮಾನ ಏರಿಕೆಯನ್ನು ಎದುರಿಸುತ್ತಿದ್ದೇವೆ. ಇದಲ್ಲದೆ, ಶ್ರೀಲಂಕಾದಲ್ಲಿನ ತಾಪನವೂ ಕೂಡ ಈಗ ಬಿಸಿಯಾಗಲು ಕಾರಣವಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮತ್ತು IMD ಯ ತಜ್ಞರು ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಕೆಲವು ಪ್ರದೇಶಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಅನ್ನು ಸಹ ಮುಟ್ಟಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ತಾಪಮಾನ ಹೆಚ್ಚಾಗಲಾರಂಭಿಸಿದ್ದು, ಫೆಬ್ರವರಿ 15ರ ವೇಳೆಗೆ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಲಿದೆ.

'ಕಳೆದ ಕೆಲವು ವರ್ಷಗಳಿಂದ ಬೇಸಿಗೆಯು ಸ್ವಲ್ಪ ಹೆಚ್ಚಿನ ತಾಪಮಾನಕ್ಕೆ ಸಾಕ್ಷಿಯಾಗುತ್ತಿದೆ. ಈ ವರ್ಷವೂ ಇದೇ ರೀತಿಯ ಪ್ರವೃತ್ತಿಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಯಾವುದೇ ಶಾಖದ ಅಲೆ ಇರುವುದಿಲ್ಲ' ಎಂದು IMD ಮೂಲಗಳು ತಿಳಿಸಿವೆ.
ಅದೇ ರೀತಿ, ಕರ್ನಾಟಕವು ಮುಂಗಾರು ಅವಧಿಯಲ್ಲಿ ಭಾರೀ ಮಳೆಯನ್ನು ಕಂಡಿದೆ ಎಂದು ಕೆಎಸ್ಎನ್ಡಿಎಂಸಿ ಮೂಲಗಳು ತಿಳಿಸಿವೆ. 839 ಮಿಮೀ ವಾಡಿಕೆಯ ಮಳೆಯು 1,009 ಮಿಮೀ ಸುರಿದಿದೆ. ಒಳ್ಳೆಯ ಬೆಳವಣಿಗೆ ಎಂದರೆ, ಕಳೆದೆರಡು ವರ್ಷಗಳಿಂದ ಕರ್ನಾಟಕವು ಉತ್ತಮ ಮಳೆಯನ್ನು ಪಡೆಯುತ್ತಿದೆ. ಇದರಿಂದಾಗಿ ಹೆಚ್ಚಿನ ಜಲಮೂಲಗಳು ತುಂಬಿವೆ. ಇದು ಅಂತರ್ಜಲವನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ. ಮಣ್ಣಿನ ತೇವಾಂಶವನ್ನು ಅಧಿಕವಾಗಿರಿಸುತ್ತದೆ. ಈ ಬಾರಿಯ ಮುಂಗಾರು ಮಳೆಯಿಂದ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಕಡಿಮೆಯಾಗುವ ನಿರೀಕ್ಷೆ ಇದೆ. ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಅಲ್ಲದೆ, ಇದೇ ಕಾರಣಕ್ಕೆ ವಿದ್ಯುತ್ ಉತ್ಪಾದನೆಗೆ ತೊಂದರೆಯಾಗುವುದಿಲ್ಲ ಎಂದು ವರದಿಯಾಗಿದೆ.












Click it and Unblock the Notifications