'ಟಿಪ್ಪು ನಿಜ ಕನಸುಗಳು' ಕೃತಿ ಮಾರಾಟಕ್ಕಿದ್ದ ತಡೆ ತೆರವು
ಬೆಂಗಳೂರು, ಡಿಸೆಂಬರ್ 09; ತೀವ್ರ ವಿವಾದಕ್ಕೆ ಕಾರಣವಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚಿತ ವಿವಾದಾತ್ಮಕ 'ಟಿಪ್ಪು ನಿಜ ಕನಸುಗಳು' ಕೃತಿ ಇನ್ನು ಮಾರಾಟಕ್ಕೆ ಸಿಗಲಿದೆ.
ಆ ಕೃತಿಯ ಮಾರಾಟಕ್ಕೆ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ನಗರದ 28ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಗುರುವಾರ ತೆರವುಗೊಳಿಸಿದೆ. ಹಾಗಾಗಿ ಇನ್ನು ಕೃತಿಯನ್ನು ಎಲ್ಲಾ ಕಡೆ ಮಾರಾಟ ಮಾಡಲು ಅನುಕೂಲವಾಗಲಿದೆ.
ಜಿಲ್ಲಾ ಬೋರ್ಡ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಬೆಂಗಳೂರಿನ ಬಿ. ಎಸ್. ರಫೀವುಲ್ಲಾ ಸಲ್ಲಿಸಿರುವ ಅರ್ಜಿ ಸಂಬಂಧ ಈ ಆದೇಶವನ್ನು ನೀಡಲಾಗಿದೆ.

ಕಳೆದ ನವೆಂಬರ್ 21ರಂದು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿರುವ ನ್ಯಾಯಾಲಯ ಲಿಖಿತ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಲುವಾಗಿ ವಿಚಾರಣೆಯನ್ನು 2023ರ ಜನವರಿ 24ಕ್ಕೆ ಮುಂದೂಡಿದೆ.
ಕಳೆದ ನವೆಂಬರ್ 21ರಂದು ಕೃತಿಯನ್ನು ಎಲ್ಲೂ ಮಾರಾಟ ಮಾಡಬಾರದು. ಆನ್ಲೈನ್ ತಾಣಗಳಲ್ಲಿಯೂ ವಿತರಣೆ ಅಥವಾ ಮಾರಾಟ ಮಾಡಬಾರದು ಎಂದು ಆದೇಶ ನೀಡಲಾಗಿತ್ತು. ಪ್ರತಿವಾದಿಗಳಾದ ಕೃತಿಯ ಕರ್ತೃ ಅಡ್ಡಂಡ ಸಿ. ಕಾರ್ಯಪ್ಪ, ಪ್ರಕಾಶಕರಾದ ಅಯೋಧ್ಯಾ ಪ್ರಕಾಶನ ಹಾಗೂ ಮುದ್ರಣಕಾರರಾದ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಸಮನ್ಸ್ ಜಾರಿಗೊಳಿಸಿತ್ತು.
ಅರ್ಜಿದಾರರು, ಈ ಪುಸ್ತಕದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ತಪ್ಪು ಮಾಹಿತಿ ಒಳಗೊಂಡಿದ್ದು, ಮುಸ್ಲಿಮರನ್ನು ತುರುಕರೆಂದು ಅವಹೇಳನಕಾರಿಯಾಗಿ ಕರೆಯಲಾಗಿದೆ. ಅದರಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಇತಿಹಾಸದ ಸಮರ್ಥನೆ ಅಥವಾ ಆಧಾರಗಳಿಲ್ಲ. ಇತಿಹಾಸದ ತಿಳಿವಳಿಕೆಯಿಲ್ಲದೆ ಕೃತಿ ರಚಿಸಲಾಗಿದೆ. ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿಆಜಾನ್ ಅನ್ನು ಚಿತ್ರಿಸಲಾಗಿದೆ ಆರೋಪಿಸಿದ್ದಾರೆ.
ಅಲ್ಲದೆ, ಕೃತಿಯ ಸತ್ಯಾಂಶಗಳನ್ನು ಆಧರಿಸಿ ರಚಿಸಲಾಗಿದೆ ಎಂದು ಮುನ್ನಡಿ ಬರೆಯಲಾಗಿದೆ. ಆದರೆ ಶಾಲೆಗಳಲ್ಲಿ ಕಲಿಸುವ ಪಠ್ಯಪುಸ್ತಕಗಳಲ್ಲಿ ಟಿಪ್ಪು ಬಗ್ಗೆ ವಿವರಿಸುವ ಅಂಶಗಳು ಸುಳ್ಳು ಎಂದು ಪ್ರತಿಪಾದಿಸಲಾಗಿದೆ.
ಟಿಪ್ಪು ಸುಲ್ತಾನನ ವ್ಯಕ್ತಿತ್ವದ ನೈಜ ಅನಾವರಣ ಈ ಕೃತಿಯಲ್ಲಿದೆ ಎಂದು ಹೇಳಲಾಗಿದೆ. ಕೃತಿಕಾರರು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕೃತಿ ಸಾರ್ವಜನಿಕ ಶಾಂತಿಯನ್ನು ಕದಡಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.












Click it and Unblock the Notifications