ಖರ್ಗೆ ಅಧ್ಯಕ್ಷರಾದರೆ ಕರ್ನಾಟಕ ಕಾಂಗ್ರೆಸ್ಗೆ ಆಗುವ ಲಾಭಗಳು!
ಬೆಂಗಳೂರು, ಅಕ್ಟೋಬರ್ 03; ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಕಣ ಅಂತಿಮಗೊಂಡಿದೆ. ಮಾಜಿ ಸಚಿವ ಶಶಿ ತರೂರ್ ಮತ್ತು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಣದಲ್ಲಿ ಉಳಿದಿದ್ದಾರೆ. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾರ್ಖಂಡ್ನ ಮಾಜಿ ಸಚಿವ ಕೆ. ಎನ್. ತ್ರಿಪಾಠಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದೆ. ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕಣದಲ್ಲಿ ಉಳಿದಿದ್ದು, ನಾಮಪತ್ರಗಳನ್ನು ವಾಪಸ್ ಪಡೆಯಲು ಅಕ್ಟೋಬರ್ 8ರ ತನಕ ಅವಕಾಶವಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ; ತರೂರ್, ಖರ್ಗೆ ಭಿನ್ನ ಹಾದಿ?
ಅಕ್ಟೋಬರ್ 17ರಂದು ಅಗತ್ಯವಿದ್ದರೆ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 19ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ. ಕಣದಲ್ಲಿರುವ ಇಬ್ಬರೂ ನಾಯಕರು ಈಗಾಗಲೇ ಪ್ರಚಾರವನ್ನು ಆರಂಭಿಸಿದ್ದಾರೆ.
ಖರ್ಗೆ ಬಹುತೇಕ ಎಐಸಿಸಿ ಬಾಸ್: ದೆಹಲಿಯಲ್ಲಿ 5 ಕನ್ನಡಿಗರ ಕಲರವ
ಕರ್ನಾಟಕ ಮೂಲದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ರಾಜ್ಯ ಕಾಂಗ್ರೆಸ್ಗೆ ಆಗುವ ಉಪಯೋಗವೇನು?. ಅದರಲ್ಲೂ ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಖರ್ಗೆ ಪಕ್ಷದ ಪ್ರಮುಖ ಹುದ್ದೆಗೆ ಏರಿದರೆ ರಾಜ್ಯಕ್ಕೂ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಹಾಗಾದರೆ ರಾಜ್ಯಕ್ಕೆ ಆಗುವ ಉಪಯೋಗವೇನು?....
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಖಚಿತ ?
ದಲಿತ ಸಮುದಾಯದ ಪ್ರಭಾವಿ ನಾಯಕ
ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ದಲಿತ ಸಮುದಾಯದ ಪ್ರಭಾವಿ ನಾಯಕ. ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕರ್ನಾಟಕದ ರಾಜಕೀಯದಲ್ಲಿಯೂ ಸಾಕಷ್ಟು ಪ್ರಭಾವ ಹೊಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ರಾಜ್ಯದಲ್ಲಿ ಪಕ್ಷದ ಮತಗಳಿಕೆಗೆ ಸಹಾಯಕವಾಗಲಿದೆ. ಹೈದರಾಬಾದ್-ಕರ್ನಾಟಕ ಭಾಗದ ಸಾಕಷ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬೆಂಬಲ ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ.
ಟಿಕೆಟ್ ಹಂಚಿಕೆ ಕಸರತ್ತು
ಕರ್ನಾಟಕ ಕಾಂಗ್ರೆಸ್ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವಾಗ ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಪಾತ್ರ ವಹಿಸಬಹುದಾಗಿದೆ. ರಾಜ್ಯ ರಾಜಕೀಯದ ಬಗ್ಗೆ ತಿಳಿದಿರುವವರು ನಿರ್ಣಾಯಕ ಸ್ಥಾನದಲ್ಲಿ ಇದ್ದಾಗ ಟಿಕೆಟ್ ಹಂಚಿಕೆ ಕಗ್ಗಂಟಾಗುವುದಿಲ್ಲ.
ಈಗಾಗಲೇ ರಾಜ್ಯದ ಹಲವು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಭಾರೀ ಪೈಪೋಟಿ ಇದೆ. ಚುನಾವಣೆ ಸಮೀಪವಾದಾಗ ಆಕಾಂಕ್ಷಿಗಳ ಪಟ್ಟಿ ಇನ್ನೂ ದೊಡ್ಡದಾಗಿ ವಿವಿಧ ಕಡೆಗಳಿಂದ ಲಾಬಿ ನಡೆಯುವ ನಿರೀಕ್ಷೆ ಇದೆ. ಇಂತಹ ಸಮಯದಲ್ಲಿ ರಾಜ್ಯ ರಾಜಕೀಯ ತಿಳಿದವರು ಟಿಕೆಟ್ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಉತ್ತಮವಾಗಿದೆ.
ಎದುರಾಳಿಗಳ ಲೆಕ್ಕಾಚಾರ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ಎದುರಾಳಿಗಳ ಲೆಕ್ಕಾಚಾರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲಿದ್ದಾರೆ. ಕರ್ನಾಟಕದ ರಾಜಕೀಯದ ಬಗ್ಗೆ ಅರಿತವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎದುರಾಳಿಗಳಿಗೆ ಎದಿರೇಟು ನೀಡುವ ಕಾರ್ಯತಂತ್ರವನ್ನು ರಚನೆ ಮಾಡಿ, ಅದನ್ನು ರಾಜ್ಯ ನಾಯಕರಿಗೆ ತಲುಪಿಸಲು ಸಹಕಾರಿಯಾಗುತ್ತದೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಒಟ್ಟಾಗಿ ತಂತ್ರ ರೂಪಿಸಿದರೆ ಪಕ್ಷದ ಗೆಲುವಿಗೆ ಅನುಕೂಲವಾಗುತ್ತದೆ ಎಂಬುದರಲ್ಲಿ ಅನುಮಾನವೇ ಉಳಿದಿಲ್ಲ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಲ
8 ಬಾರಿ ಶಾಸಕರಾಗಿ ರಾಜ್ಯದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ ಮಲ್ಲಿಕಾರ್ಜುನ ಖರ್ಗೆ ಸದ್ಯ ರಾಜ್ಯಸಭಾ ಸದಸ್ಯರು. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವರ ಪ್ರಭಾವ ಹೆಚ್ಚಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ಆ ಭಾಗದ ಜನರು ಖರ್ಗೆ, ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲಲಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ತನ್ನ ಗುರಿಯನ್ನು ತಲುಪಲು ಕಲ್ಯಾಣ ಕರ್ನಾಟಕ ಭಾಗದ ಸಹಾಯ ಸಿಗಲಿದೆ.
ಎರಡನೇ ಕನ್ನಡಿಗರು
ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸದಾ ಗಾಂಧಿ ಕುಟುಂಬದವರ ಕೈಯಲ್ಲಿಯೇ ಇತ್ತು. ಈಗ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿರುವ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಅಧ್ಯಕ್ಷರಾಗುತ್ತಿರುವ ಎರಡನೇ ಕನ್ನಡಿಗರು ಮಲ್ಲಿಕಾರ್ಜುನ ಖರ್ಗೆ.
1968ರಲ್ಲಿ ಎಸ್. ನಿಜಲಿಂಗಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಬಳಿಕ ಪಕ್ಷದ ಉನ್ನತ ಹುದ್ದೆ ಏರುವ ಅವಕಾಶ ಕರ್ನಾಟಕದ ಯಾವುದೇ ನಾಯಕರಿಗೆ ಸಿಕ್ಕಿರಲಿಲ್ಲ. ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಕನ್ನಡಿಗರು ಪಕ್ಷವನ್ನು ಹೇಗೆ ಮುನ್ನಡೆಸಲಿದ್ದಾರೆ? ಎಂದು ಕಾದು ನೋಡಬೇಕಿದೆ.