ಶಾಸಕ ಸೈಲ್ ಜೈಲ್, ಇನ್ನಿಬ್ಬರು ಇಂದು ಸಂಜೆ ಬಂಧನ

ಈ ಮಧ್ಯೆ, ನಿಮ್ಮನ್ನೂ ಬಂಧಿಸುತ್ತೇವೆ. ಶನಿವಾರ ಸಂಜೆಯೊಳಗೆ ನಮ್ಮನ್ನು ಭೇಟಿ ತುರ್ತಾಗಿ ಭೇಟಿಯಾಗಿ ಎಂದು ಇನ್ನಿಬ್ಬರು ಶಾಸಕರಾದ ನಾಗೇಂದ್ರ ಮತ್ತು ಆನಂದ್ ಸಿಂಗ್ ಅವರಿಗೂ ಸಿಬಿಐ ಆಮಂತ್ರಣ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಬಳಿಯಿರುವ ಬೇಲೇಕೇರಿ ಬಂದರು ಪ್ರದೇಶದಲ್ಲಿ ಅದಿರು ನಾಪತ್ತೆ ಹಾಗೂ ವಿದೇಶಗಳಿಗೆ ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಇವರನ್ನೆಲ್ಲಾ ವಿಚಾರಿಸಿಕೊಳ್ಳುತ್ತಿದೆ.
ಸತೀಶ್ ಸೈಲ್ ಅವರನ್ನು ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಸಿಬಿಐ ಪೊಲೀಸರು, ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯು ಅದಿರು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು, ಅಕ್ರಮ ಅದಿರು ಸಾಗಣೆಯಲ್ಲಿ ಸತೀಶ್ ಸೈಲ್ನ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಾದ ಅಗತ್ಯ ಇರುವ ಕಾರಣ ಸಿಬಿಐ ಪೊಲೀಸರು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಸತೀಶ್ ಸೈಲ್ ತಮ್ಮ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ಹಡಗುಗಳ ಮೂಲಕ ಕಳ್ಳತನ ಮಾಡಲಾಗಿದ್ದ ಅದಿರು ಮತ್ತು ಬಳ್ಳಾರಿ ಗಣಿಧಣಿಗಳ ಅಕ್ರಮ ಅದಿರನ್ನು ವಿದೇಶಕ್ಕೆ ರಫ್ತು ಮಾಡಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 458 ಕೋಟಿ ರೂ. ನಷ್ಟವಾಗಿತ್ತು. ಅಲ್ಲದೇ, ಬೇಲೆಕೇರಿ ಬಂದರಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅದಿರನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ವೇಳೆ ನಕಲಿ ಪರವಾನಗಿ ಬಳಸಿಕೊಂಡು 2010ರಲ್ಲಿ 2.57 ಸಾವಿರ ಟನ್ ಅದಿರನ್ನು ವಿದೇಶಕ್ಕೆ ರಫ್ತು ಮಾಡಲಾಗಿತ್ತು ಎಂದು ಸಿಬಿಐ ಪೊಲೀಸರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಬಿಐ ಪೊಲೀಸರು ಸತೀಶ್ ಸೈಲ್ ವಿರುದ್ಧ ಐಪಿಸಿ 120 ಬಿ ಅನ್ವಯ ಕ್ರಿಮಿನಲ್ ಒಳಸಂಚು, ಕಳ್ಳತನಮೂಲಕ ಅದಿರು ಪಡೆಯುವಿಕೆ, ಅರಣ್ಯ ಸಂಪತ್ತು ನಾಶ, ಲೂಟಿ ,ವಂಚನೆ ಮತ್ತು ಐಪಿಸಿ 379, 411, 447 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸುರೇಶ್ ಬಾಬು 26 ರವರೆಗೆ ಸಿಬಿಐಗೆ:
ಬೆಂಗಳೂರು : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಸಂಬಂಧ ಬಂಧಿತ ಕಂಪ್ಲಿ ಶಾಸಕ ಸುರೇಶ್ ಬಾಬು ಅವರನ್ನು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸೆಪ್ಟೆಂಬರ್ 26 ರ ವರೆಗೆ ಸಿಬಿಐ ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮುಂದಿನ ಬಂಧನ ಆನಂದ್ಸಿಂಗ್?
ಬಳ್ಳಾರಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಂಪ್ಲಿ ಶಾಸಕ ಸುರೇಶ್ ಬಾಬು, ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಬಂಧನವಾಗುತ್ತಿದ್ದಂತೆ ಮುಂದಿನ ಬಂಧನ ಯಾರದ್ದು ಎಂಬ ಕುತೂಹಲ ಪ್ರಶ್ನೆ ಎದುರಾಗಿದೆ. ಬಂಧನವಾಗುವ ಸಾಧ್ಯತೆಯಲ್ಲಿ ಎಸ್ಬಿ ಮಿನರಲ್ಸ್ ಮಾಲಿಕ, ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್. ಆನಂದ್ ಸಿಂಗ್ ಹೆಸರು ಮುಂಚೂಣಿಯಲ್ಲಿದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ 17ನೇ ಆರೋಪಿಯಾಗಿರುವ ಆನಂದ್ ಸಿಂಗ್ ಗೆ ಈಗ ಬಂಧನ ಭೀತಿ ಎದುರಿಸುತ್ತಿದ್ದಾರೆ. ಮಧ್ಯಂತರ ಜಾಮೀನು ಪಡೆಯಲು ಪ್ರಯತ್ನಿಸುತ್ತಿರುವ ಅವರನ್ನು ಇಂದು ಬಂಧಿಸುವ ಸಾಧ್ಯತೆಗಳಿವೆ.
ಏನಿದು ಆರೋಪ?: ಶಾಸಕ ಆನಂದ್ ಸಿಂಗ್ ಒಡೆತನದ ಎಸ್ಬಿ ಮಿನರಲ್ಸ್ನ (ಲೀಸ್ ನಂ. 2515ರಲ್ಲಿ) 2009ರ ಅ. 26ರಿಂದ ನ. 12ರವರೆಗೆ ಒಟ್ಟು 410.5 ಮೆಟ್ರಿಕ್ ಟನ್ ಅದಿರು ಎಸ್ಎಂಎಸ್ಪಿಎಲ್ ಪ್ಲಾಟ್ನ ಬೇಲೆಕೇರಿ ಬಂದರಿಗೆ ರಫ್ತಾಗಿದೆ. 2009ರ ಅ. 27 ರಿಂದ 2010ರ ಫೆ. 17ರವರೆಗೆ 13,684.22 ಮೆಟ್ರಿಕ್ ಟನ್ ಅದಿರು ರಫ್ತು ಮಾಡಲಾಗಿದೆ. ಅದೇ ರೀತಿ ಎಸ್ಬಿ ಮಿನರಲ್ಸ್ನ ಲೀಸ್ ನಂ. 2550ನಿಂದ 2009 ನ. 13ರಿಂದ 2010ರ ಫೆ. 18ರವರೆಗೆ ಬೇಲೆಕೇರಿಯ ಎಸ್ಎಂಎಸ್ಪಿಎಲ್ ಪ್ಲಾಟ್ಗೆ 16,683.9 ಮೆಟ್ರಿಕ್ ಟನ್ ಅದಿರು ರಫ್ತು ಮಾಡಿದೆ. ಇದರಲ್ಲಿ ಪರವಾನಿಗೆ ಇಲ್ಲದೆ ರಫ್ತು ಮಾಡಿರುವುದು ಸೇರಿದಂತೆ ಇತರೆ ಆರೋಪಗಳನ್ನು ಸಿಬಿಐ ಅಧಿಕಾರಿಗಳು ದೂರಿನಲ್ಲಿ ದಾಖಲಿಸಿದ್ದರು.
16 ಆರೋಪಿಗಳ ಬಂಧನ:
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಈಗಾಗಲೇ ಸಿಬಿಐ ಐಜಿಪಿ ಹಿತೇಂದ್ರ ಅವರ ನಿರ್ದೇಶನದಂತೆ ಬೆಂಗಳೂರು ಸಿಬಿಐ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್ ತಂಡ ಕಳೆದ ಸೆ.7ರಂದು 146 ವ್ಯಕ್ತಿಗಳು ಹಾಗೂ 73 ಎಕ್ಸ್ಪೋರ್ಟ್ರ್ಗಳ ವಿರುದ್ಧ ಮೂರು ಪ್ರತ್ಯೇಕ ದೂರು ದಾಖಲಿಸಿದ್ದರು. ಶಾಸಕ ಸುರೇಶ್ ಬಾಬು ಸೇರಿದಂತೆ 16 ಆರೋಪಿಗಳನ್ನು ಬಂಧಿಸಲಾಗಿದೆ.












Click it and Unblock the Notifications