ಬೆಳಗಾವಿ: ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ, ಆಸ್ಪತ್ರೆ-ಘಟನಾ ಸ್ಥಳಕ್ಕೆ ಗೃಹ ಸಚಿವರ ಭೇಟಿ, ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 11: ಬೆಳಗಾವಿಯಲ್ಲಿ ಮಾನವ ಕುಲವೇ ತಲೆ ತಗ್ಗಿಸುವ ಕೆಲಸವೊಂದು ನಡೆದಿದೆ. ತಮ್ಮ ಮನೆಯ ಯುವತಿ ಯುವಕನನ್ನು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದಕ್ಕೆ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಸದ್ಯ ತಾಯಿ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿದ್ದಾರೆ.
ಬೆಳಗಾವಿಯ ಒಂಟಮೋರಿ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದೆ. ಹಲ್ಲೆ ಬಳಿಕೆ ಯುವಕನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಜಿ.ಪರಮೇಶ್ವರ ಅವರು, ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ್ದಾರೆ. ಈ ಕೃತ್ಯ ಖಂಡನೀಯ ಎಂದಿದ್ದಾರೆ.

ಈ ವೇಳೆ ಸಂತ್ರಸ್ತೆಯು ತಡರಾತ್ರಿ ನಡೆದ ಘಟನೆಯನ್ನು ನೆನೆದು ಸಚಿವರ ಮುಂದೆ ಕಣ್ಣೀರು ಹಾಕಿದರು. 'ನಿಮ್ಮ ಕುಟುಂಬದ ರಕ್ಷಣೆಗೆ ಹಾಗೂ ನೆರವಿಗೆ ನಾವಿದ್ದೇವೆ. ಎದೆಗುಂದಬೇಡಿ' ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಖುದ್ದಾಗಿ ಸಂತ್ರಸ್ತೆಗೆ ಧೈರ್ಯ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಖುದ್ದು ಗೃಹ ಸಚಿವರ ಭೇಟಿ
ಬಳಿಕ ಒಂಟಮೋರಿ ಗ್ರಾಮದ ಘಟನೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಜತೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಿದರು. ಈ ವೇಳೆ ಮನೆಯಲ್ಲಿದ್ದ ಸಂತ್ರಸ್ತೆಯ ತಾಯಿಯನ್ನು ಖುದ್ದಾಗಿ ಮಾತನಾಡಿಸಿ ಘಟನೆಯ ಕುರಿತು ಮಾಹಿತಿ ಪಡೆದರು. 'ರಾತ್ರಿ ಮೂರು ಗಂಟೆಯ ಸುಮಾರಿಗೆ ಮನೆಗೆ ನುಗ್ಗಿದ್ದರು. ಮಗಳನ್ನು ಕಂಬಕ್ಕೆ ಕಟ್ಟಿಹಾಕಿ ವಿವಸ್ತ್ರಗೊಳಿಸಿ ಥಳಿಸಿದರು. ಮನೆಬಿಟ್ಟು ಹೋಗಬೇಕೆಂದುಕೊಂಡಿದ್ದೇವೆ' ಎಂದು ನೋವು ತೋಡಿಕೊಂಡರು. ಸಚಿವರು ಅವರನ್ನು ಸಮಾಧಾನ ಮಾಡಿದರು.

ಅಗೌರವದ ಕೃತ್ಯ, ಅಕ್ಷಮ್ಯ ಅಪರಾಧ, ಮುಲಾಜಿಲ್ಲದೇ ಕ್ರಮ
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವರು, ಯುವತಿಯ ಸಂಬಂಧಿಕರು ಯುವಕನ ಮನೆಗೆ ನುಗ್ಗಿ, ಆತನ ತಾಯಿಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಅಮಾನುಷ ಕೃತ್ಯ. ಇದು ಸಮಾಜಕ್ಕೆ ಗೌರವ ತರುವುದಿಲ್ಲ. ಊರಿನ ಜನ ಹೇಗೆ ಸಹಿಸಿದ್ದರೋ ಗೊತ್ತಿಲ್ಲ ಎಂದು ಹೇಳಿದರು.
ಘಟನೆಯನ್ನು ತೀವ್ರವಾಗಿ ಖಂಡಿಸಿದದ ಸಚಿವರು ಇಂತಹ ಅಕ್ಷ್ಯಮ್ಯ ಅಪರಾಧಗಳನ್ನು ಯಾವುದೇ ಕಾರಣಕ್ಕು ಸಹಿಸುವುದಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರು ಮುಲಾಜಿಲ್ಲದೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಂತ್ರಸ್ತರಿಗೆ ಪೊಲೀಸ್ ಭದ್ರತೆ, ನಿಗಾಗೆ ಸೂಚನೆ
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಸದ್ಯ ಬಗ್ಗೆ ತೀವ್ರ ನಿಗಾವಹಿಸುವಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಯುವಕ-ಯುವತಿಯನ್ನು ಪತ್ತೆಹಚ್ಚಿ ಇಲಾಖೆಯ ರಕ್ಷಣೆ ನೀಡಲಾಗುವುದು ಎಂದು ಅವರು ಹೇಳಿದರು.












Click it and Unblock the Notifications