ಅಧಿಕಾರಕ್ಕಾಗಿ ದೇಶ, ಜನಾಂಗ ಒಡೆಯುವ ಕಾರ್ಯ ಕಾಂಗ್ರೆಸ್ಸಿಗರದು
ಬೆಳಗಾವಿ, ನವೆಂಬರ್ 9: ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಕಾಲ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಬುಧವಾರ ನಡೆದ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದೆಡೆ ಶಿವಕುಮಾರ್- ಸಿದ್ರಾಮಣ್ಣನ ಜಗಳ ಮುಗಿದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಮುಳುಗುವ ಹಡಗಾದ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಅಧ್ಯಕ್ಷರಾದ ಬಳಿಕ ಸತೀಶ್ ಜಾರಕಿಹೊಳಿ ಹಿಂದೂ ಎಂದರೆ ಹೊಲಸು ಶಬ್ದ ಎಂದು ಹೇಳಿದ್ದಾರೆ. ಹಿಂದೂ ಸಂಸ್ಕೃತಿ ಬಗ್ಗೆ ಅವಹೇಳನ ಮಾಡಿದ ಜಾರಕಿಹೊಳಿ ಚರ್ಚೆಗೆ ಬನ್ನಿ ಎನ್ನುತ್ತಾರೆ ಎಂದು ಆಕ್ಷೇಪಿಸಿದರು.
Recommended Video

ಹಲವು ವಿಕೃತ ಮನಸ್ಸುಗಳು ವಿಕೃತ ಪುಸ್ತಕ ಬರೆದಿರುತ್ತಾರೆ. ಪ್ರಾಂಜಲ ಮನಸ್ಸಿನಿಂದ ಸತ್ಯ ಹೊರಬರುತ್ತದೆ. ಸನಾತನ ಧರ್ಮ ಹಿಂದೂ ಧರ್ಮ. ಅದು ಇಡೀ ಜಗತ್ತಿಗೆ ಬೆಳಕು ತೋರುವ, ಮಾನವೀಯತೆ ಸಾರುತ್ತದೆ. ಇಂಥ ಹಿಂದೂ ಧರ್ಮದ ಬಗ್ಗೆ ಕ್ಷುಲ್ಲಕ ಮಾತನಾಡಿದ್ದಾರೆ ಮತ್ತು ಇದರ ವಿರುದ್ಧ ಕಾಂಗ್ರೆಸ್ಸಿಗರು ಮಾತನಾಡುವುದಿಲ್ಲ ಎಂದಾದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಕಾಲ ಎಂದು ವಿಶ್ಲೇಷಿಸಿದರು.
ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವುದಾಗಿ ಹೇಳುವ ಸಿದ್ದರಾಮಣ್ಣ ಒಂದೆಡೆ ಇದ್ದಾರೆ. ಸತೀಶ್ ಅವರು ತಮ್ಮ ತಂದೆ ತಾಯಿಯ ಮನಸ್ಸನ್ನೇ ನೋಯಿಸುವಂಥ ಮಾತನಾಡಿದ್ದಾರೆ. ಈ ದೇಶದ ಸಂಸ್ಕೃತಿಯ ಆಧಾರವೇ ಧರ್ಮ, ನಂಬಿಕೆ ಮತ್ತು ಮಾನವೀಯ ಗುಣಗಳು. ಅದಕ್ಕಾಗಿಯೇ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಧ್ಯೇಯದೊಂದಿಗೆ ಮೋದಿಜಿ ಮುಂದುವರಿದಿದ್ದಾರೆ, ದೇಶವನ್ನು ಮುನ್ನಡೆಸಿದ್ದಾರೆ ಎಂದು ತಿಳಿಸಿದರು.
ಅಧಿಕಾರಕ್ಕಾಗಿ ದೇಶ, ಜನಾಂಗ ಒಡೆಯುವ ಕಾರ್ಯ ಕಾಂಗ್ರೆಸ್ಸಿಗರದು. ನಕ್ಸಲೈಟರಿಗೆ ಬೆಂಬಲ ಕೊಟ್ಟದ್ದಲ್ಲದೆ ಧರ್ಮ ಒಡೆಯುವ ಯತ್ನವನ್ನು ಕಾಂಗ್ರೆಸ್ ಮಾಡಿತ್ತು. ನಾವು ಮನಸ್ಸನ್ನು ಜೋಡಿಸುವವರು. ಆದರೆ, ದೇಶ ಛಿದ್ರ ಮಾಡುವವರಿಗೆ ಪುಷ್ಟಿ ಕೊಡುವ ಚಿಂತನೆ ಕಾಂಗ್ರೆಸ್ಸಿಗರಲ್ಲಿದೆ ಎಂದು ಟೀಕಿಸಿದರು.

ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿದ್ದರು
ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧತೆ ನಮ್ಮದು. ಜನಸಂಕಲ್ಪ ಯಾತ್ರೆಯ ಪ್ರತಿ ಸಭೆಯಲ್ಲಿ ಜನರ ಸೇರುವಿಕೆ ಹೆಚ್ಚಾಗುತ್ತಿದೆ. ಬಿಜೆಪಿ ಸುನಾಮಿ ಅಲೆ ರಾಜ್ಯದಾದ್ಯಂತ ಎದ್ದಿದೆ. ಈ ಯಾತ್ರೆ ಮುಂದೆ ವಿಜಯಯಾತ್ರೆಯಾಗಿ ಪರಿವರ್ತನೆ ಆಗಲಿದೆ ಎಂದರು. ಭಾರತ ಒಗ್ಗಟ್ಟಾಗಿದೆ. ಕಾಶ್ಮೀರ ಬೇರೆ ಇದ್ದುದನ್ನು ಒಂದುಗೂಡಿಸುವ ಕಾರ್ಯ ಬಿಜೆಪಿಯಿಂದ ಆಗಿದೆ. ಕಾಂಗ್ರೆಸ್ನ ರಾಹುಲ್ ಗಾಂಧಿ ಜೋಡೋ ಮಾಡಲು ಏನಿದೆ ಎಂದರು. ಸತೀಶ್ ಜಾರಕಿಹೊಳಿ ನಾಟಕವನ್ನು ರಾಜ್ಯ ಮತ್ತು ದೇಶ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಜನರ ಜೊತೆ ಕಣ್ಣಾಮುಚ್ಚಾಲೆ ಆಟ ಆಡಿದವರು. ಅನ್ನದಲ್ಲಿ ಕನ್ನ ಹಾಕುವ ಕೆಲಸ ನಡೆದಿತ್ತು. ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿದ್ದರು. ಸಣ್ಣ ನೀರಾವರಿ, ಹಾಸ್ಟೆಲ್ ದಿಂಬು, ಹಾಸಿಗೆ, ಬೆಂಗಳೂರಿನ ಭೂಮಿ, ಮಣ್ಣಿನಲ್ಲೂ ಸೇರಿ ಎಲ್ಲೆಡೆ ಭ್ರಷ್ಟಾಚಾರ ಮಾಡಿದ್ದರು. ಪುರಾವೆ ಇಲ್ಲದೆ ಆರೋಪ ಮಾಡುವ ಜಾಯಮಾನ ಕಾಂಗ್ರೆಸ್ಸಿಗರದು ಎಂದು ಟೀಕಿಸಿದರು.

ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ
ಕಾಂಗ್ರೆಸ್ ದುರಾಡಳಿತವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಅದಕ್ಕಾಗಿಯೇ ಜನರು ಬಿಜೆಪಿಗೆ ಅಧಿಕಾರ ಕೊಡುವ ಸಂಕಲ್ಪ ಮಾಡಿದ್ದಾರೆ. ಇದು ಅಭಿವೃದ್ಧಿಯನ್ನು ಬೆಂಬಲಿಸುವ ಜನರ ಸಂಕಲ್ಪ ಎಂದರು. ಅತಿವೃಷ್ಟಿ ಹಾನಿ ಸಂಬಂಧ ಪರಿಹಾರ ಹೆಚ್ಚಿಸಲಾಗಿದೆ. ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇವೆ. 10 ಲಕ್ಷ ರೈತ ಕುಟುಂಬಕ್ಕೆ ಪ್ರಯೋಜನ ಸಿಕ್ಕಿದೆ. ರೈತ ಕೂಲಿಕಾರರು, ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಕೊಡಲಾಗುತ್ತಿದೆ. ಈ ಯೋಜನೆ ದುಡಿಯುವ ವರ್ಗಕ್ಕೆ ಶಕ್ತಿ ತುಂಬುತ್ತಿದೆ ಎಂದರು.
ಕಾಂಗ್ರೆಸ್ ಸ್ವಾರ್ಥಕ್ಕಾಗಿ ಅಧಿಕಾರವನ್ನು ಬಳಸಿಕೊಂಡಿತ್ತು. ಎಲ್ಲ ವರ್ಗದ ಜನರಿಗಾಗಿ ಬಿಜೆಪಿ ಕೆಲಸ ಮಾಡಿದೆ. ಇದನ್ನು ಗಮನಿಸಿ ಜನರು ಬಿಜೆಪಿಯನ್ನೇ ಆಯ್ಕೆ ಮಾಡುತ್ತಾರೆ ಎಂದ ಅವರು, ಕಾಂಗ್ರೆಸ್ನ 60 ವರ್ಷದ ಆಡಳಿತದಲ್ಲಿ ಯೋಜನೆಗಳು ಸ್ವಾರ್ಥಕ್ಕಾಗಿ ಬಳಕೆಯಾದವು ಎಂದು ವಿವರಿಸಿದರು.

ಸ್ವಯಂ ಉದ್ಯೋಗ ನೀಡುವ ಯೋಜನೆ
5 ಲಕ್ಷ ತಾಯಂದಿರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆ, 5 ಲಕ್ಷ ಯುವಕರಿಗೆ ಕೆಲಸ ನೀಡುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ನಮಗೆ ಬದ್ಧತೆ ಇದೆ. ಜನರು ದುಡಿಮೆಗೆ ಬೆಲೆ ಬರಬೇಕೆಂಬ ಬದ್ಧತೆ ನಮ್ಮದಾಗಿದೆ. ದುಡಿಮೆಯೇ ದೊಡ್ಡಪ್ಪ ಎಂಬ ಮಾತಿನಂತೆ ನಡೆಯುತ್ತಿರುವ ಸರಕಾರ ನಮ್ಮದು ಎಂದು ತಿಳಿಸಿದರು.
ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದ ಯೋಜನೆಗಳ ಅನುಷ್ಠಾನಕ್ಕೆ ಬದ್ಧತೆ ತೋರಿದ್ದೇವೆ. ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇವೆ. ಮೂಲಸೌಕರ್ಯ ಹೆಚ್ಚಳಕ್ಕೆ ಆದ್ಯತೆ ಕೊಡಲಾಗಿದೆ ಎಂದು ತಿಳಿಸಿದರು. ಸಿದ್ದರಾಮಯ್ಯರ ಅವಧಿಯಲ್ಲಿ ಹಿಂದುಳಿದವರು ಹಿಂದೆಯೇ ಉಳಿದರು. ಕಾಂಗ್ರೆಸ್ ನಾಯಕರು ಮುಂದೆ ಹೋದರು. ಆದರೆ, ನಾವು ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯ ನೀಡುತ್ತಿದ್ದೇವೆ. ಎಲ್ಲದಕ್ಕೂ ಅಪಸ್ವರ ಎತ್ತುವ ಸಿದ್ರಾಮಣ್ಣನಿಗೆ ತಮ್ಮ ಆಡಳಿತದ ಅವಧಿಯಲ್ಲಿ ಕುರಿಗಾರರ- ಲಂಬಾಣಿ ಜನಾಂಗದ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಶಶಿಕಲಾ ಜೊಲ್ಲೆ ಅವರು ಮಾತನಾಡಿ
ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಇಲ್ಲಿನ ಸಮಾರಂಭ ವಿಜಯೋತ್ಸವದ ರೀತಿಯಲ್ಲಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ- ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಆಶಯವನ್ನು ಈಡೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಕೊಡುವಂತೆ ಮನವಿ ಮಾಡಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಇಲ್ಲಿ ಸಮಾವೇಶದಲ್ಲಿ ತಾಯಂದಿರ ಸಂಖ್ಯೆಯೂ ಹೆಚ್ಚಾಗಿದೆ. ಇಲ್ಲಿನ ಜನಸಾಗರ ನೋಡಿದರೆ ಬಿಜೆಪಿ ಮತ್ತೆ ಗೆಲ್ಲುವ ವಿಶ್ವಾಸ ವ್ಯಕ್ತವಾಗಿದೆ ಎಂದು ತಿಳಿಸಿದರು. ಯಡಿಯೂರಪ್ಪ, ಬೊಮ್ಮಾಯಿ ಅವರ ಸರಕಾರ ಭಾಗ್ಯಲಕ್ಷ್ಮಿ ಯೋಜನೆ ಮೂಲಕ ಹೆಣ್ಮಕ್ಕಳಿಗೆ ಧೈರ್ಯ ಕೊಟ್ಟಿದೆ. ಬೇಟಿ ಬಚಾವೊ, ಬೇಟಿ ಪಡಾವೊ ಮೂಲಕ ಕೇಂದ್ರ ಸರಕಾರವೂ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಕೊಟ್ಟಿದೆ. ಮನೆ ಮನೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾತನಾಡಿ, 2023ನೇ ಇಸವಿಯಲ್ಲಿ ಸ್ಥಳೀಯ ಮತ್ತು ರಾಜ್ಯದೆಲ್ಲೆಡೆ ಜನರು ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ನುಡಿದರು. ಇಲ್ಲಿ ಜನಸಾಗರವೇ ಸೇರಿದೆ. ಇದು ಬಿಜೆಪಿ ಗೆಲುವಿನ ಬಗ್ಗೆ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದರು. 2023ರಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಲು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಜನತೆ ಸಿದ್ಧರಿದ್ದಾರೆ ಎಂದರು.
ಸಚಿವ ಬೈರತಿ ಬಸವರಾಜ, ಮುಖಂಡ ಪ್ರಭಾಕರ ಕೋರೆ, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications