ಬಿಬಿಎಂಪಿ ಚುನಾವಣೆ : ಸಿದ್ದರಾಮಯ್ಯಗೆ ಗೌಡರ ಪ್ರಶ್ನೆಗಳು
ಬೆಂಗಳೂರು, ಏ. 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲು ದೇವೇಗೌಡರು ತೀರ್ಮಾನಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ರ ಬರೆಯುವ ಕುರಿತು ಮಾಹಿತಿ ನೀಡಿದರು. 'ನಿಮ್ಮ ಪಕ್ಷದವರು ಅಧಿಕಾರದಲ್ಲಿದ್ದಾಗ ತಂದ ಕಾಯ್ದೆಯನ್ನು ಜಾರಿ ಮಾಡಲು ನಿಮ್ಮ ಪಕ್ಷದ ಸರ್ಕಾರವೇ ಹಿಂದೇಟು ಹಾಕುತ್ತಿದೆ' ಎಂದು ಪತ್ರದಲ್ಲಿ ವಿವರಿಸಲಾಗುತ್ತದೆ ಎಂದು ಹೇಳಿದರು. [ಬಿಬಿಎಂಪಿ ವಿಭಜನೆ : 6 ಪ್ರಮುಖ ಬೆಳವಣಿಗೆಗಳು]
'ಸ್ಥಳೀಯ ಸಂಸ್ಥೆಗಳ ಆಡಳಿತ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜೀವ್ ಗಾಂಧಿಯವರು ಕಾಯ್ದೆಯನ್ನು ಜಾರಿಗೆ ತಂದರು. ಆದರೆ, ನಿಮ್ಮದೇ ಸರ್ಕಾರ ಇಲ್ಲಿ ಕಾಯ್ದೆಗೆ ಗೌರವ ಕೊಡುತ್ತಿಲ್ಲ' ಎಂದು ಪತ್ರದಲ್ಲಿ ತಿಳಿಸುತ್ತೇನೆ ಎಂದರು. [ಬಿಬಿಎಂಪಿ ಚುನಾವಣೆ ಘೋಷಣೆಗೆ ಹೈಕೋರ್ಟ್ ತಡೆಯಾಜ್ಞೆ]
'ಪಾಲಿಕೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಹೇಳಿ ಸೂಪರ್ ಸೀಡ್ ಮಾಡುವ ಮುಖ್ಯಮಂತ್ರಿಗಳು ಎರಡು ವರ್ಷ ಏಕೆ ಮೌನವಾಗಿದ್ದರು?, ಬಿಜೆಪಿ ಆಡಳಿತದಲ್ಲಿದ್ದಾಗ ಭ್ರಷ್ಟಾಚಾರ ನಡೆದಿದೆ ಎಂದಾದರೆ ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಏನು ಮಾಡುತ್ತಿದ್ದರು? ಎಂದು ದೇವೇಗೌಡರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.

ರಾಹುಲ್ಗೆ ಪತ್ರ ಬರೆಯಲಿದ್ದಾರೆ ಗೌಡರು
ಬಿಬಿಎಂಪಿ ವಿಭಜನೆ ಪ್ರಸ್ತಾಪವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಮುಂದೂಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಿದ್ದಾರೆ.

ನಿಮ್ಮ ಪಕ್ಷದ ಸರ್ಕಾರವೇ ಗೌರವ ಕೊಡುವುದಿಲ್ಲ
'ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಕಾಲದಲ್ಲಿ ನಡೆಸಲು ಕಾಯ್ದೆಯನ್ನು ಜಾರಿಗೆ ತಂದರು. ಆದರೆ, ನಿಮ್ಮ ಪಕ್ಷದ ಸರ್ಕಾರವೇ ಅದನ್ನು ರಾಜ್ಯದಲ್ಲಿ ಪಾಲಿಸುತ್ತಿಲ್ಲ' ಎಂದು ಆರೋಪಿಸಿ ಗೌಡರು ಪತ್ರ ಬರೆಯಲಿದ್ದಾರೆ.

ಮೊದಲು ಚುನಾವಣೆ ನಡೆಸಲು ಸವಾಲು ಹಾಕಿದ ಗೌಡರು
'ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧ' ಎಂದು ಸದನದಲ್ಲಿ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿರುವ ದೇವೇಗೌಡರು, ಮೊದಲು ಚುನಾವಣೆ ಮಾಡಿ ನಂತರ ಪಾಲಿಕೆ ವಿಭಜನೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.

'ಸಿದ್ದರಾಮಯ್ಯ ಅವರು ದೊಡ್ಡ ವ್ಯಕ್ತಿಯೇನಲ್ಲ'
'ದೇವರಾಜ ಅರಸು ಅವರೊಂದಿಗೆ ಹೋರಾಟ ಮಾಡಿದವನು ನಾನು ಎಂದು ಹೇಳಿರುವ ದೇವೇಗೌಡರು, ಸಿದ್ದರಾಮಯ್ಯ ಅವರು ಅರಸು ಅವರಿಗಿಂತ ದೊಡ್ಡ ವ್ಯಕ್ತಿಯೇನಲ್ಲ. ಪಾಲಿಕೆ ವಿಭಜನೆ ಕುರಿತು ನಡೆದ ವಿಶೇಷ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ಹೇಗೆ? ಮಾತನಾಡಿದರು ಎಂಬುದನ್ನು ನಾನು ನೋಡಿದ್ದೇನೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗ ಸಿದ್ದರಾಮಯ್ಯ ಏನು ಮಾಡುತ್ತಿದ್ದರು?
'ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದಾಗ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳುವ ಮುಖ್ಯಮಂತ್ರಿಗಳು ಆಗ ಪ್ರತಿಪಕ್ಷ ನಾಯಕರಾಗಿ ಏನು ಕೆಲಸ ಮಾಡುತ್ತಿದ್ದರು?' ಎಂದು ದೇವೇಗೌಡರು ಪ್ರಶ್ನೆ ಮಾಡಿದ್ದಾರೆ. ಮುಖ್ಯಮಂತ್ರಿಗಳಾಗಿ ಎರಡು ವರ್ಷಗಳಾದ ಬಳಿಕ ಪಾಲಿಕೆ ವಿಭಜನೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಯಿತೇ? ಎಂದು ಗೌಡರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications