Karnataka: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ, ಆಡಳಿತ, ಜಲ-ವಿದ್ಯುತ್ ಕ್ಷಾಮ: ಬೊಮ್ಮಾಯಿ ಭವಿಷ್ಯ
ವಿಜಯಪುರ, ಜೂನ್ 27: ಗ್ಯಾರಂಟಿ ಮೂಲಕ ಜನರಿಗೆ ಮೋಸ ಮಾಡಿ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡಲು ಸಾಧ್ಯವೇ ಇಲ್ಲ. ಡಿಸೈಲ್ ಇಲ್ಲದೇ ಬಸ್ಗಳು ನಿಲ್ಲುವುದು ಗ್ಯಾರಂಟಿ. ವಿದ್ಯುತ್ ಕ್ಷಾಮ, ನೀರಿನ ಕ್ಷಾಮ ರಾಜ್ಯದಲ್ಲಿ ತಲೆದೂರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಭವಿಷ್ಯದ ಕುರಿತು ಹೇಳಿದ್ದಾರೆ.
ವಿಜಯಪುರದ ಶ್ರೀ ಗುರು ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ನ ಈ ಗ್ಯಾರಂಟಿ, ಆ ಗ್ಯಾರಂಟಿ ಎಂದು ಹೇಳಿ ನೀರಾವರಿಯ ವಿಷಯವನ್ನೇ ಡೈವರ್ಟ್ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಗೆ ಬೇಕಾದ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸುತ್ತಿಲ್ಲ, ಹೀಗಾದರೆ ಮುಂದೆ ನೀರಿಗೂ ದುಸ್ತರ ಸ್ಥಿತಿ ಕಾಂಗ್ರೆಸ್ ಸೃಷ್ಟಿಸಲಿದೆ ಎಂದರು.

ಗುತ್ತಿ ಬಸವಣ್ಣ ಯೋಜನೆ ಅನುಷ್ಠಾನ ಮಾಡುವಾಗ ಅನೇಕ ವಿಘ್ನ ಎದುರಾದವು. ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅನೇಕರು ಹೆದರಿಸಿದರು. ಆದರೆ ವಿಜಯಪುರ ಜಿಲ್ಲೆಯ ಜನತೆಗೆ ನ್ಯಾಯ ಒದಗಿಸಲು ನಾನು ಜೈಲಿಗೆ ಹೋಗಲು ಸಿದ್ಧ, ನೇಣಿಗೆ ಏರಲು ಸಿದ್ಧ ಎಂದು ಗುತ್ತಿ ಬಸವಣ್ಣ ಯೋಜನೆ ಅನುಷ್ಠಾನಕ್ಕೆ ಮುಂದಾದೆ ಎಂದು ಸ್ಮರಿಸಿದರು.
ರೈತರು ಕಳೆದುಕೊಂಡ ಭೂಮಿಗೆ ದರವನ್ನು ನಂತರ ಬಂದ ಕಾಂಗ್ರೆಸ್ ಸರ್ಕಾರ ನಿಗದಿಪಡಿಸಲಿಲ್ಲ. ಏಕರೂಪದ ದರವನ್ನು ರೈತರಿಗೆ ನೀಡಲೇ ಇಲ್ಲ. ಈ ಏಕರೂಪದ ದರವನ್ನು ನೀಡಲು ಪುನ: ನಮ್ಮ ಸರ್ಕಾರವೇ ಬರಬೇಕಾಯಿತು ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದರು.
ವಿಜಯಪುರದಲ್ಲಿ ಬಿಜೆಪಿಗೆ ಬಹುಮತ
ಕಾಂಗ್ರೆಸ್ ಪಕ್ಷವನ್ನು ವಿರೋಧ ಮಾಡಿಕೊಂಡು ಬಂದ ಜಿಲ್ಲೆ ವಿಜಯಪುರ. ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಅಸ್ತಿತ್ವಕ್ಕೆ ಬಂದಾಗ ಅಖಂಡ ವಿಜಯಪುರ ಜಿಲ್ಲೆಯ 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಬಹುಮನಿಯಿಂದ ಹಿಡಿದು ಬ್ರಿಟಿಷ ಆಡಳಿತದವರೆಗೆ ಈ ವಿಜಯಪುರ ಭಾಗಕ್ಕೆ ದೊಡ್ಡ ಅನ್ಯಾಯವಾಗುತ್ತಲೇ ಬಂದಿತ್ತು.

ಆರು ಸಾವಿರ ಕೀಲೋ ಮಿಟರ್ ರಾಷ್ಡ್ರೀಯ ಹೆದ್ದಾರಿ ನಿರ್ಮಾಣ, ಹಲವಾರು ವಿಮಾನ ನಿಲ್ದಾಣಗಳಿಗೆ ಅನುಮತಿ ನೀಡಿದ ಕೀರ್ತಿ ನಮ್ಮ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದರು. ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದ್ದು ನಮ್ಮ ಸರ್ಕಾರ, ಈಗ ಕಾಂಗ್ರೆಸ್ನವರು ಈ ವಿಮಾನ ನಿಲ್ದಾಣವನ್ನೇ ರಿಬ್ಬನ್ ಕತ್ತರಿಸಿ ತಮ್ಮ ಸಾಧನೆ ಎಂದು ಹೇಳಿಕೊಳ್ಳಬಹುದು ಎಂದು ಲೇವಡಿ ಮಾಡಿದರು.
ನೀರಾವರಿಗೆ ಬೇಡಿಕೆ ಇಟ್ಟಿದ್ದ ಜನ
ಜಿಲ್ಲೆಯ ಜನರು ಗುಳೆ ತಪ್ಪಿಸಬೇಕೆಂಬ ಕಾರಣಕ್ಕೆ ಇಲ್ಲಿಗೆ ನೀರಾವರಿ ಮಾಡಿಕೊಡಿ ಎಂದು ಕೇಳಿಕೊಂಡಿದ್ದರು. ಬರದ ಜಿಲ್ಲೆಯಾದರೂ ಸಹ ದಿ.ಇಂದಿರಾ ಗಾಂಧಿ ಹಾಗೂ ನಿಜಲಿಂಗಪ್ಪ ಅವರನ್ನು ಬಂಗಾರದಿಂದ ತೂಗಿದ ಜಿಲ್ಲೆ ಇದು. ಆದರೆ ಜನತೆಯ ನ್ಯಾಯಯುತವಾದ ಬೇಡಿಕೆ ಯುಕೆಪಿ ಅನುಷ್ಠಾನವಾಗಲೇ ಇಲ್ಲ. ಹೀಗಾಗಿ ನ್ಯಾಯಯುತ ಕೂಗಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪಂದನೆ ದೊರಕದ ಸಿಟ್ಟು ವಿಜಯಪುರ ಜಿಲ್ಲೆಯಲ್ಲಿ ಇಂದಿಗೂ ಇದೆ ಎಂದರು ಅವರು ವಿವರಿಸಿದರು.
ಸ್ಮಾರ್ಟ್ ಸಿಟಿಯಾಗಲು ಯತ್ನಾಳರ ಕ್ರೀಯಾಶೀಲತೆ ಕಾರಣ
ವಿಜಯಪುರ ನಗರ ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದೆ, ಇದು ಸಾಧ್ಯವಾಗಿದ್ದು ನೀವು ಈ ಕ್ಷೇತ್ರದಿಂದ ಆಯ್ಕೆ ಮಾಡಿ ಕಳುಹಿಸಿದ ಕ್ರೀಯಾಶೀಲ, ದೂರದೃಷ್ಟಿ ಇರುವ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾರಣ ಎಂದು ಅವರ ಕಾರ್ಯಕ್ಕೆ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಪ್ರತಿನಿಧಿಸುವ ನನ್ನ ಕ್ಷೇತ್ರ ಹಿಂದುಳಿದಿದೆ, ಇದಕ್ಕೆ ಬೆಂಬಲ ಕೊಡಬೇಕು ಎಂದು ಅನೇಕ ಬಾರಿ ನನ್ನನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು, ಸರ್ಕಾರದಿಂದ ಅನುದಾನ ತಂದು ಅದನ್ನು ಕಾರ್ಯಗತಗೊಳಿಸಿ ವಿಜಯಪುರ ನಗರವನ್ನು ಪ್ರಗತಿಗೊಳಿಸಿದರು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ರಮೇಶ ಜಿಗಜಿಣಗಿ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಎಸ್.ಕೆ. ಬೆಳ್ಳುಬ್ಬಿ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಹನಮಂತ ನಿರಾಣಿ, ಮಾಜಿ ಶಾಸಕರಾದ ಅಭಯ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications