ಮಂತ್ರಿ ಸ್ಥಾನಕ್ಕಾಗಿ ಸಿಎಂ ಮೇಲೆ ಮುನಿಸಿಕೊಂಡ ಈಶ್ವರಪ್ಪ, ಮಾಧ್ಯಮಗಳ ಮೇಲೆ ಗರಂ ಆದ ಸಿಎಂ
ಬೆಳಗಾವಿ,ಡಿಸೆಂಬರ್ 19: ಸಚಿವ ಸಂಪುಟಕ್ಕೆ ತಮ್ಮನ್ನು ಸೇರ್ಪಡೆ ಮಾಡಿಕೊಳ್ಳದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಈಶ್ವರಪ್ಪ ರಿಂದ ಸದನ ಬಹಿಷ್ಕಾರ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.ಈಶ್ವರಪ್ಪನವರ ಕುರಿತಾಗಿ ಪ್ರಶ್ನೆ ಕೇಳಿದ ತಕ್ಷಣವೇ, ನೀವು ಅದನ್ನೆಲ್ಲ ಸೃಷ್ಟಿ ಮಾಡಿಕೊಂಡು ಹೇಳಬೇಡಿ. ನಾನು ಈಶ್ವರಪ್ಪ ಜೊತೆ ಮಾತಾಡ್ತೀನಿ ಎಂದು ಮಾಧ್ಯಮಗಳ ಮೇಲೆಯೇ ಗರಂ ಆಗಿದ್ದಾರೆ.
ಇನ್ನೂ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ನೀಡುವ ಬಗ್ಗೆ ಗಡುವು ನಾನೇನು ಕೊಟ್ಟಿಲ್ಲ. ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ವರದಿ ಕೊಡಲು ಹೇಳಿದ್ದೇನೆ. ಅಧಿವೇಶನ ಆರಂಭವಾಗುವ ಮುನ್ನ ವರದಿ ಕೊಡಲು ಹೇಳಿದ್ದೆ. ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದರ ವರದಿ ಇನ್ನೂ ಬಂದಿಲ್ಲ. ಅತಿ ಶ್ರೀಘ್ರದಲ್ಲಿ ಅವರು ವರದಿ ಕೊಡುವ ವಿಶ್ವಾಸವಿದೆ. ಆನಂತರ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಜಿ ಸಚಿವ ಈಶ್ವರಪ್ಪ ಹೇಳಿದ್ದೇನು..?
ನನ್ನ ವಿಚಾರದಲ್ಲಿ ಕ್ಲಿನ್ ಚೀಟ್ ನೀಡಿದರು. ಸಚಿವ ಸಂಪುಟಕ್ಕೆ ತಮ್ಮನ್ನು ಸೇರ್ಪಡೆ ಮಾಡಿಕೊಳ್ಳದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ವಿಚಾರದಲ್ಲಿ ತೀರ್ಪು ಬಂದಾಗಿದೆ. ಕ್ಲಿನ್ ಚಿಟ್ ನೀಡಲಾಗಿದೆ. ನಿಮ್ಮನ್ನ ಮಂತ್ರಿ ಮಾಡುತ್ತೇವೆ ಎಂದು ಸಿಎಂ ಹೇಳ್ತಾನೆ ಬಂದಿದ್ದಾರೆ. ನಿಮ್ಮಂತವರು ಸಂಪುಟಕ್ಕೆ ಬೇಕು ಅಂತಾರೆ.ಆದರೆ ನನ್ನನ್ನ ಸಂಪುಟಕ್ಕೆ ಯಾಕೆ ಸೇರಿಸಿಕೊಳ್ಳುತ್ತಿಲ್ಲ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೂ ನಾನು ಬೆಳಗಾವಿಗೆ ಹೋಗುತ್ತೇನೆ. ಆದರೆ ಅಧಿವೇಶನಕ್ಕೆ ಹೋಗಲ್ಲ. ನನಗೆ ಅಪಮಾನ ಆಗುತ್ತಿದೆ. ಸೌಜನ್ಯ ರೀತಿ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಕ್ಲೀನ್ ಚಿಟ್ ತೆಗೆದುಕೊಂಡು ನಿರಪರಾಧಿ ಅಂತ ತಿರ್ಮಾನ ಆದ ಮೇಲೂ ಇಡೀ ರಾಜ್ಯದ ಜನ ನನ್ನ ಪ್ರಶ್ನೆ ಮಾಡುತ್ತಿರುವ ಸಂದರ್ಭದಲ್ಲಿ ನನಗೆ ಉತ್ತರ ಕೊಡಲು ಬರುವುದಿಲ್ಲ, ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರ ನೀಡಲಿ ಎಂದಿದ್ದಾರೆ.
ನೀವು ರಾಜ್ಯದ ಜನತೆಗೆ ಉತ್ತರ ಕೊಡಿ. ಕೇಂದ್ರ ನಾಯಕರ ತೀರ್ಮಾನ ಎಂದು ಅವರು ಹೇಳಬಹುದು. ಆದರೆ ನನಗೆ ಗೊತ್ತಿಲ್ಲ. ಯಾಕೆಂದರೆ ಮುಖ್ಯಮಂತ್ರಿಯವರಿಗೆ ತಮ್ಮ ಸಂಪುಟದಲ್ಲಿ ಯಾರ್ಯಾರು ಮಂತ್ರಿಗಳನ್ನು ಇಟ್ಟುಕೊಳ್ಳಬೇಕು ಎಂಬ ಅಧಿಕಾರ ಇರುತ್ತದೆ ಎಂದರು.
ಕೇಂದ್ರ ನಾಯಕರು ನನ್ನ ವಿಚಾರದಲ್ಲಿ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕಿತ್ತು ಎಂಬ ಭಾವನೆಯಲ್ಲಿದ್ದಾರೆ ಅಂತ ನಾನಂದುಕೊಡಿದ್ದೇನೆ. ಈ ಬಗ್ಗೆ ಬಹಿರಂಗವಾಗಿ ನಾನು ಯಾಕೆ ಹೇಳುತ್ತಿದ್ದೇನೆ ಅಂದರೆ ಈ ಬಗ್ಗೆ ಮುಖ್ಯಮಂತ್ರಿಯವರು ಗಮನಿಸಬೇಕು. ಇದು ಸೌಜನ್ಯ ಪ್ರತಿಭಟನೆ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯವರ ವಿರುದ್ಧ ನಾನು ಮಾಡುತ್ತಿಲ್ಲ. ಇಡೀ ರಾಜ್ಯದ ಜನ ನನ್ನನ್ನು ಕೇಳುತ್ತಿರುವಾಗ ಏನು ಉತ್ತರ ಕೊಡಬೇಕು ಎಂದು ಗೊತ್ತಿಲ್ಲ. ಅದಕ್ಕೆ ಮಾಧ್ಯಮದ ಮೂಲಕ ಅವರಿಗೆ ನನ್ನ ಉತ್ತರ ತಿಳಿಸುತ್ತಿದ್ದೇನೆ ಎಂದರು.












Click it and Unblock the Notifications