ಬಿಎಸ್ವೈ ಮುಗಿಸಲು ಸಂಘದೊಂದಿಗೆ ಕೈಜೋಡಿಸಿದ ಬೊಮ್ಮಾಯಿ: ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 15: ಒಬ್ಬ ಲಿಂಗಾಯತ ನಾಯಕನನ್ನು ಮುಗಿಸಲು ಮತ್ತೊಬ್ಬ ಲಿಂಗಾಯತ ನಾಯಕನನ್ನೇ ಮುಂದೆ ಬಿಡುವುದು ಸಂಘದ ಕಾರ್ಯತಂತ್ರ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಚಾರವಾಗಿ ಗುರುವಾರ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ಬಸವರಾಜ ಬೊಮ್ಮಾಯಿ ಅವರನ್ನು ವಿರುದ್ಧ ಹರಿಹಾಯ್ದಿದೆ.
'ಬಿ.ಎಸ್.ಯಡಿಯೂರಪ್ಪ ಕೃಪೆಯಿಂದ ಸಿಎಂ ಹುದ್ದೆಗೇರಿದ ಬಸವರಾಜ ಬೊಮ್ಮಾಯಿ ಅವರು ಈಗ ಗುರುವನ್ನೇ ಮೂಲೆಗೆ ತಳ್ಳಲು ಮೀರ್ ಸಾದಿಕ್ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿಎಂ ಸ್ಥಾನ ಗಟ್ಟಿಯಾಗುವವರೆಗೆ ವಾರಕ್ಕೊಮ್ಮೆ ದವಳಗಿರಿಗೆ ಹೋಗಿ ಬರುತ್ತಿದ್ದವರು ಈಗ ಕೇಶವ ಕೃಪಾಗೆ ಹೋಗ್ತಿದಾರೆ. ಬಿ.ಎಲ್. ಸಂತೋಷ್ ಅವರ ಬಿಎಸ್ವೈ ಮುಕ್ತ ಅಭಿಯಾನಕ್ಕೆ ಬೊಮ್ಮಾಯಿಯವರೂ ಕೈಜೋಡಿಸಿದ್ದಾರೆ' ಎಂದು ಕೆಪಿಸಿಸಿ ಆರೋಪಿಸಿದ್ದಾರೆ.

ಲಿಂಗಾಯತ ನಾಯಕನನ್ನು ಮುಗಿಸುವುದು ಸಂಘದ ಕಾರ್ಯತಂತ್ರ
'ಒಬ್ಬ ಲಿಂಗಾಯತ ನಾಯಕನನ್ನು ಮುಗಿಸಲು ಮತ್ತೊಬ್ಬ ಲಿಂಗಾಯತ ನಾಯಕನನ್ನೇ ಮುಂದೆ ಬಿಡುವುದು ಸಂಘದ ಕಾರ್ಯತಂತ್ರ. ಅದರಂತೆಯೇ ಬಿಎಸ್ವೈ ಅವರನ್ನು ಮೂಲೆಗುಂಪು ಮಾಡುವ ಟಾಸ್ಕ್ನ್ನು ಬಸವರಾಜ ಬೊಮ್ಮಾಯಿ ಅವರಿಗೆ ಆರ್ಎಸ್ಎಸ್ ವಹಿಸಿದೆ. ಕುರ್ಚಿ ಉಳಿಸಿಕೊಳ್ಳಲು ಬೊಮ್ಮಾಯಿಯವರು ಗುರುವಿಗೇ ತಿರುಮಂತ್ರ ಹಾಕುತ್ತಿದ್ದಾರೆ' ಎಂದೂ ಕಾಂಗ್ರೆಸ್ ಟೀಕಿಸಿದೆ.

ಜೈಲು, ಕಣ್ಣೀರು, ದ್ರೋಹ: ಬಿಎಸ್ವೈಗೆ ಬಿಜೆಪಿ ನೀಡಿದ ಕೊಡುಗೆ
'ಅನೈತಿಕ ಮಾರ್ಗದಲ್ಲಿಯಾದರೂ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದ್ದು ಬಿ.ಎಸ್.ಯಡಿಯೂರಪ್ಪ. ಆದರೆ ಅದೇ ಬಿಜೆಪಿ ನೀಡಿದ ಕೊಡುಗೆ - ಜೈಲು, ಕಣ್ಣೀರು, ದ್ರೋಹ. ಅಡ್ವಾಣಿಯಂತಹ ನಾಯಕರನ್ನೇ ಮುಗಿಸಿದ ಬಿಜೆಪಿ ಬಿಎಸ್ವೈ ಅವರನ್ನು ಬಿಡುವುದೇ? ಹತ್ತಿದ ಏಣಿಯನ್ನು ಒಡೆಯುವುದು, ತಿಂದ ತಟ್ಟೆಗೆ ಮಣ್ಣು ಹಾಕುವುದು ಬಿಜೆಪಿಯ ಹುಟ್ಟುಗುಣ' ಎಂದೂ ಕೆಪಿಸಿಸಿ ವಾಗ್ದಾಳಿ ನಡೆಸಿದೆ.

ಹೈಕಮಾಂಡ್ ಮೇಲೆ ಮುನಿಸಿಕೊಂಡ ಬಿಎಸ್ವೈ
ಕೊಪ್ಪಳದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕರೆದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಬಿಎಸ್ವೈ ಬಿಜೆಪಿ ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆ.ಪಿ.ನಡ್ಡಾ ಆಗಮಿಸುತ್ತಿರುವ ಈ ಕಾರ್ಯಕ್ರಮಕ್ಕೆ ಬಿಎಸ್ವೈ ಅವರಿಗೆ ಸ್ವಾಗತ ನೀಡದಿರುವುದು ಅವರ ಬೆಂಬಲಿಗರ ಅಸಮಾಧಾನಕ್ಕೂ ಕಾರಣವಾಗಿತ್ತು.
ಬಿಎಸ್ವೈ ಮುನಿಸನ್ನು ಶಮನಗೊಳಿಸಲು ಬಿಜೆಪಿ ನಾಯಕರು ಮುಂದಾಗಿದ್ದರು. ಈ ವೇಳೆ, ಬಿಜೆಪಿ ಹೈಕಮಾಂಡ್ ನಡುವೆ ಪ್ರವೇಶಿಸಿ ಯಡಿಯೂರಪ್ಪ ಅವರ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಮಾಡಿದೆ ಎನ್ನಲಾಗುತ್ತಿದೆ.
ಈ ಎಲ್ಲ ಬೆಳವಣಿಗೆಗಳ ಮೂಲಕ ನೋಡುವುದಾದರೆ, ಬಿಎಸ್ವೈ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಶಂಕೆಗಳು ಮೂಡುತ್ತವೆ. ಬಿಎಸ್ವೈ ಕರ್ನಾಟಕ ಬಿಜೆಪಿ ಮಟ್ಟಿಗೆ ಪ್ರಭಾವಿ ನಾಯಕರು. ಅವರು ಲಿಂಗಾಯತ ಸಮೂದಾಯದ ಅಪಾರ ಬೆಂಬಲ ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ಸಂದೇಹವಿಲ್ಲ. ಆ ಕಾರಣಕ್ಕಾಗಿಯಾದರೂ, ಬಿಜೆಪಿ ಯಡಿಯೂರಪ್ಪನವರನ್ನು ಕಡೆಗಣಿಸಲಾರದು ಎಂಬ ಮಾತಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.

ಉದ್ಯಮಿಗಳ ಸಾಲ ವಸೂಲಿ ಮಾಡದ ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರವು ಉದ್ಯಮಿಗಳ ಸಾಲ ವಸೂಲಿ ಮಾಡುವುದಿಲ್ಲವೆಂದು ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಕಳೆದ 5 ವರ್ಷದಲ್ಲಿ ಸುಮಾರು 10 ಲಕ್ಷ ಕೋಟಿ ರೂಪಾಯಿ ಉದ್ಯಮಿಗಳ ಸಾಲವನ್ನು ರೈಟ್ ಆಫ್ ಮಾಡಲಾಗಿದೆ. 10 ಲಕ್ಷ ಕೋಟಿಗೆ ರೂಪಾಯಿಗೆ ಎಳ್ಳುನೀರು ಬಿಟ್ಟಿದ್ದರೂ ವಸೂಲಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂಬ ಕೇಂದ್ರ ಸರ್ಕಾರದ ಸುಳ್ಳಿನ ಸಮರ್ಥನೆ ಬೇರೆ. ಜನಸಾಮಾನ್ಯರ ಇಎಂಐ ಬಡ್ಡಿ ಏರಿಸುವ ಬಿಜೆಪಿ ಸರ್ಕಾರಕ್ಕೆ ಉದ್ಯಮಿಗಳ ಸಾಲ ವಸೂಲಿಗೆ ಮನಸು ಮಾಡುವುದಿಲ್ಲವೇಕೆ' ಎಂದು ಪ್ರಶ್ನಿಸಿದೆ.
'ಕಳೆದ 5 ವರ್ಷದಲ್ಲಿ ರೈಟಾಫ್ ಮಾಡಿದ 10 ಲಕ್ಷ ಕೋಟಿ ಜನ ಸಾಮಾನ್ಯರನ್ನು ಸುಲಿಗೆ ಮಾಡಿದ ಹಣ ಅಲ್ಲವೇ? ಮೋದಿ ಆಳ್ವಿಕೆಯಲ್ಲಿ ಉದ್ಯಮಿಗಳು ಸಾಲ ಮರುಪಾವತಿ ಮಾಡದಷ್ಟು ದಿವಾಳಿಯಾದರೆ? ಅಥವಾ ಇದು ಯೋಜಿತ ಕಾನೂನಾತ್ಮಕ ಹಗರಣವೇ? ಮೋದಿಯವರು ಜನರನ್ನು ಸುಲಿದು, ಉದ್ಯಮಿಗಳ ಹೊಟ್ಟೆ ತುಂಬಿಸುವ "ಸಿರಿವಂತರ ರಾಬಿನ್ ಹುಡ್" ಆಗಿರುವರೆ' ಎಂದು ಕೇಳಿದೆ.












Click it and Unblock the Notifications