
ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರಿಡಲು ಸಂಪುಟ ಸಭೆ ಅನುಮೋದನೆ
ಬೆಂಗಳೂರು, ಅ.21: ವಿಜಯಪುರ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಸಮಾಜ ಸುಧಾರಕ 'ಬಸವೇಶ್ವರ ವಿಮಾನ ನಿಲ್ದಾಣ' ಎಂದು ನಾಮಕರಣ ಮಾಡುವ ಪ್ರಸ್ತಾವನೆಗೆ ಕರ್ನಾಟಕ ರಾಜ್ಯದ ಸಚಿವ ಸಂಪುಟ ಇಂದು ಅನುಮೋದನೆ ನೀಡಿರುವುದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಎ.ಟಿ.ಆರ್.72 ಮಾದರಿ ವಿಮಾನ ಹಾರಾಟಕ್ಕಾಗಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವನ್ನು ಏರ್ ಬಸ್-320 ಮಾದರಿಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ರೂ.347.92 ಕೋಟಿಗಳ (ಜಿ.ಎಸ್.ಟಿ. ಸೇರಿ) ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಚಿವ ಸಂಪುಟದ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ.
Breaking: ವಿಜಯಪುರ ಪಾಲಿಕೆಗೆ ಅ.28ರಂದು ಚುನಾವಣೆbasa
ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆರ್ಥಿಕ, ವಾಣಿಜ್ಯ, ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ವಿಜಯಪುರ ನಗರದಲ್ಲಿ ಗ್ರೀನ್ ಫೀಲ್ಡ್ ದೇಶೀಯ ವಿಮಾನ ನಿಲ್ದಾಣವನ್ನು ಎ.ಟಿ.ಆರ್.72 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಒಟ್ಟು ರೂ.220.00 ಕೋಟಿಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ 2020ರ ಡಿ.14ರಂದು ಸರ್ಕಾರಿ ಆದೇಶ ಹೊರಡಿಸಲಾಗಿತ್ತು.
ಕಳೆದ ಸೆ.8ರಂದು ಮುಖ್ಯ ಅಭಿಯಂತರರು, ಸಂಪರ್ಕ ಮತ್ತು ಕಟ್ಟಡಗಳು (ದ), ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ತಾಂತ್ರಿಕ ಸಲಹಾ ಮತ್ತು ಅಂದಾಜುಪಟ್ಟಿ ಪರಿಶೀಲನಾ ಸಮಿತಿಯು ಮುಖ್ಯ ಅಭಿಯಂತರರು (ಸಂಪರ್ಕ ಮತ್ತು ಕಟ್ಟಡ) (ಉತ್ತರ), ಲೋಕೋಪಯೋಗಿ ಇಲಾಖೆ, ಧಾರವಾಡರವರು ಸಲ್ಲಿಸಿರುವ ರೂ.120.00 ಕೋಟಿಗಳ ಹೆಚ್ಚುವರಿ ಅಂದಾಜು ಪಟ್ಟಿಯನ್ನು ಪರಿಶೀಲಿಸಿತು.
ಹೆಚ್ಚುವರಿಯಾಗಿ ಮಂಡಿಸಿರುವ ರೂ.120.00 ಕೋಟಿಗಳ ಮೊತ್ತದ ಅಂಶಗಳು ಪ್ಯಾಕೇಜ್-1ರಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ರನ್-ವೇ ಮತ್ತು ಏಪ್ರಾನ್ ಗೆ ಸಂಬಂಧಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕಾಮಗಾರಿಗಳನ್ನು ಪ್ಯಾಕೇಜ್-1ರ ಗುತ್ತಿಗೆದಾರರಿಗೆ ನೀಡುವುದು ಸೂಕ್ತವೆಂದು ಅಭಿಪ್ರಾಯಿಸಿರುತ್ತದೆ. ಸುದೀರ್ಘ ಚರ್ಚೆಯ ನಂತರ ಪರಿಷ್ಕೃತ ಅಂದಾಜನ್ನು ಸರ್ಕಾರದ ಅನುಮೋದನೆಯನ್ನು ಪಡೆಯಲು ಸಮಿತಿಯು ಸಹಮತಿಸಿತ್ತು.
ಒಂದೇ ಬಾರಿಗೆ ಉನ್ನತೀಕರಿಸಿ
ಪ್ರಸ್ತುತ ನಿರ್ಮಾಣ ಹಂತದಲ್ಲಿಯೇ ವಿಜಯಪುರ ವಿಮಾನ ನಿಲ್ದಾಣವನ್ನು ಎ.ಟಿ.ಆರ್.-72ರ ಮಾದರಿಯ ವಿಮಾನಗಳ ಹಾರಾಟದಿಂದ ಎ-320 ವಿಮಾನಗಳ ಹಾರಾಟದ ಸಾಮರ್ಥ್ಯದ ಹಂತಕ್ಕೆ ಒಂದೇ ಬಾರಿಗೆ ಉನ್ನತೀಕರಿಸಿ ನಿರ್ಮಿಸಿದಲ್ಲಿ ಮುಂದೆ ಆಗಬಹುದಾದ ಹೆಚ್ಚುವರಿ ವೆಚ್ಚವನ್ನು ಉಳಿಸಬಹುದಾಗಿದೆ. ಮುಂದುವರೆದು, Airbus-320 ವಿಮಾನಯಾನಕ್ಕೆ ಅನುಕೂಲವಾಗುವಂತೆ Airfield Pavements ನಿರ್ಮಿಸಿದಲ್ಲಿ ಮುಂದಿನ 30 ವರ್ಷಗಳವರೆಗೂ ಯಾವುದೇ ವಿಸ್ತರಣೆಯ ಅಗತ್ಯವಿರುವುದಿಲ್ಲ ಹಾಗೂ ಎಲ್ಲಾ ಮಾದರಿಯ ವಿಮಾನಗಳ ಕಾರ್ಯಾಚರಣೆಯನ್ನು ಈ ವಿಮಾನ ನಿಲ್ದಾಣದಿಂದ ಕೈಗೊಳ್ಳ ಬಹುದಾಗಿರುತ್ತದೆ.
ಮುಂದಿನ ದಿನಗಳಲ್ಲಿ ವಿಮಾನಯಾನ ಸಾಂದ್ರತೆ ಹೆಚ್ಚಾಗುವ ಸಂಭವವಿದ್ದು, ಆಗ ಮೇಲ್ದರ್ಜೆಗೇರಿಸಲು ಕ್ರಮಕೈಗೊಂಡಲ್ಲಿ ರನ್-ವೇ/ಏಪ್ರಾನ್/ಟ್ಯಾಕ್ಸಿ-ವೇ/ಐಸೋಲೇಷನ್-ಬೇ ವಿಸ್ತರಣೆ ಕಾರ್ಯಕಷ್ಟವಾಗುತ್ತದೆ ಹಾಗೂ ವಿಮಾನಗಳ ಕಾರ್ಯಾಚರಣೆಗೆ ಅಡಚಣೆಯಾಗುತ್ತದೆ ಎಂದು ತಾಂತ್ರಿಕ ಅಭಿಪ್ರಾಯ ಗಮನದಲ್ಲಿರಿಸಿಕೊಂಡು ಈ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.