ಬಿಜೆಪಿ ಮುಂದೆ ಮಹತ್ವದ ಬೇಡಿಕೆ ಇಟ್ಟ ಪಂಚಮಸಾಲಿ ಶ್ರೀ
ಬೆಂಗಳೂರು, ಅ. 11: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ರಾಜ್ಯ ಬಿಜೆಪಿ ಎದುರು ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಪಂಚಮಸಾಲಿ ಪೀಠದ ಶ್ರೀಗಳು ಸುದ್ದಿಗೋಷ್ಠಿ ನಡೆಸಿದರು. ಇದೇ ಅಕ್ಟೋಬರ್ 28 ರಂದು ಬೆಳಗಾವಿಯ ಸುವರ್ಣಸೌಧದ ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಲಿಂಗಾಯತ ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರದ ಪ್ರವರ್ಗ 2Aಗೆ ಸೇರಿಸಬೇಕೆಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ಕೇಂದ್ರ ಸರ್ಕಾರದ OBC ಪಟ್ಟಿಯಲ್ಲಿ ಪಂಚಮಸಾಲಿ ಸಮಾಜವನ್ನು ಸೇರಿಸಬೇಕು. ಪ್ರವರ್ಗ 3Bನಲ್ಲಿರುವ ನಮ್ಮ ಸಮಾಜಕ್ಕೆ ಈಗ ಪ್ರತ್ಯೇಕ ಮೀಸಲಾತಿ ಅಗತ್ಯವಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಪ್ರವರ್ಗ 2A ಮೀಸಲಾತಿ ಬೇಕಾಗಿದೆ. ಅದಕ್ಕಾಗಿ ಹೋರಾಟ ಮಾಡಲು ತಿರ್ಮಾನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಭೂಸುಧಾರಣೆ ಕಾಯ್ದೆ: ಮೋದಿ ವಿರುದ್ಧ ಸಂಘ ಪರಿವಾರದ ಅಸಮಾಧಾನ!
ಜೊತೆಗೆ ಮತ್ತೊಂದು ಮಹತ್ವದ ರಾಜಕೀಯ ಬೇಡಿಕೆಯನ್ನು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮಿ ಅವರು ರಾಜ್ಯ ಬಿಜೆಪಿ ಎದುರು ಇಟ್ಟಿದ್ದಾರೆ. ಅದೇನು? ಮುಂದಿದೆ ಮಾಹಿತಿ.
ಸಮುದಾಯದ ಶೇಕಡಾ 70 ರಷ್ಟು ಬೆಂಬಲ
ಪಂಚಮಸಾಲಿ ಸಮುದಾಯದ ಶೇಕಡಾ 70ರಷ್ಟು ಜನರು ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಸಮುದಾಯಕ್ಕೆ ಸಿಗಬೇಕಾದ ಮನ್ನಣೆ ಮಾತ್ರ ಸಿಕ್ಕಿಲ್ಲ. ಸಮುದಾಯದ ಶಾಸಕ ಮಹೇಶ್ ಕುಮಟಹಳ್ಳಿ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಬೇಕಾಗಿತ್ತು. ಆಗ ಕೊಡದಿದ್ದು ನಮಗೆ ಅಸಮಾಧಾನ ಇದೆ. ಆದರೆ ಈಗ ಸಚಿವ ಸ್ಥಾನಕ್ಕಿಂತಲೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂಬ ಹೋರಾಟವೇ ಮುಖ್ಯ ಎಂದಿದ್ದಾರೆ.
ಬಿಜೆಪಿಯಲ್ಲಿ ಪಂಚಮಸಾಲಿ ಶಾಸಕರು
ಪಂಚಮಸಾಲಿ ಸಮಾಜದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದೆ. ಹೀಗಾಗಿ ಬಿಜೆಪಿಯಲ್ಲಿ ಪಂಚಮಸಾಲಿ ಸಮುದಾಯದ 16 ಶಾಸಕರು ಹಾಗೂ 3 ಸಂಸದರು ಇದ್ದಾರೆ. ನಮ್ಮ ಸಮುದಾಯದ ಶಾಸಕರ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಮೂವರು ಶಾಸಕರನ್ನಾದರೂ ಸಚಿವರನ್ನಾಗಿ ಮಾಡಬೇಕಿತ್ತು, ಆದರೆ ಬಿಜೆಪಿಯಲ್ಲಿ ಮಾಡಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹತ್ವದ ಬೇಡಿಕೆ ಇಟ್ಟ ಶ್ರೀಗಳು
ಸಮುದಾಯ ಬಿಜೆಪಿಯನ್ನು ಬೆಂಬಲಿಸಿಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಅವಧಿ ಮುಗಿದ ಬಳಿಕ ಸಿಎಂ ಸ್ಥಾನವನ್ನು ಪಂಚಮಸಾಲಿ ಸಮುದಾಯಕ್ಕೆ ಕೊಡಬೇಕು ಎಂಬ ಮಹತ್ವದ ಬೇಡಿಕೆಯನ್ನು ರಾಜ್ಯ ಬಿಜೆಪಿ ಎದುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಟ್ಟಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ಆದರೆ ಯಡಿಯೂರಪ್ಪ ಅವರ ಅವಧಿ ಮೂರು ವರ್ಷ ಇರುತ್ತದೆಯೊ? ಇಲ್ಲ, ಮುಂದೆಯೂ ಅವರೇ ಮುಖ್ಯಮಂತ್ರಿ ಆಗುತ್ತಾರೋ ಗೊತ್ತಿಲ್ಲ. ಆದರೆ ಅವರ ಅವಧಿ ಮುಗಿದ ಬಳಿಕ ನಮ್ಮ ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ಕೊಡಿ ಅಂತ ಒತ್ತಾಯ ಮಾಡುತ್ತೇವೆ. ನಮ್ಮ ಸಮಾಜದಲ್ಲೂ ಅರ್ಹತೆ ಇರುವ ಅನೇಕರು ಇದ್ದಾರೆ ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಉಪವಾಸ ಸತ್ಯಾಗ್ರಹ
ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜ ದೊಡ್ಡದು. ಆದರೆ ಕರ್ನಾಟಕ ಜಾತಿಪಟ್ಟಿಯಲ್ಲಿ ಪಂಚಮಸಾಲಿ ಸಮೂದಾಯದ ಪ್ರಸ್ತಾಪವೇ ಇಲ್ಲ. ಕೃಷಿ ಆಧಾರಿತ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ. ಹಿಂದೆ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರಿಗೆ ಮೀಸಲಾತಿಗಾಗಿ ಮನವಿ ಸಲ್ಲಿಸಲಾಗಿತ್ತು.
ಅದೇ ಬೇಡಿಕೆ ಇಟ್ಟುಕೊಂಡು ಅ. 28 ರಂದು ಕೋರೋನಾ ಕಾರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬೆಳಗಾವಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.
Recommended Video