ಸಾಮಾಜಿಕ ಭದ್ರತಾ ಯೋಜನೆ; ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ
ಬೆಂಗಳೂರು, ಜೂನ್ 22: ಕರ್ನಾಟಕದ ಕಂದಾಯ ಇಲಾಖೆಯಿಂದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಿಕ ಪಿಂಚಣಿ ಮತ್ತು ಸಹಾಯಧನವನ್ನು ನೀಡಲಾಗುತ್ತದೆ. ಇದನ್ನು ಪಡೆಯುವ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ತಮ್ಮ ಬ್ಯಾಂಕ್, ಅಂಚೆ ಉಳಿತಾಯ ಖಾತೆಗೆ ಜೋಡಣೆ ಮಾಡಬೇಕಿದೆ.
ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ರೈತನ ಪತ್ನಿಗೆ ನೀಡುವ ವಿಧವಾ ವೇತನ, ಆಸಿಡ್ ಪ್ರಕರಣಗಳಡಿ ನೀಡುವ ವೇತನ, ಅಂಗವಿಕಲರ ವೇತನ, ಮನಸ್ವಿನಿ, ಮೈತ್ರಿ ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಳಡಿ ಜೂನ್ನಿಂದ ಆಧಾರ್ ಆಧಾರಿತ ನೇರವಾಗಿ ಹಣ ಪಾವತಿ ಮಾಡಲಾಗುತ್ತಿದೆ.

ಆದ್ದರಿಂದ ವಿವಿಧ ಫಲಾನುಭವಿಗಳು ಬ್ಯಾಂಕ್, ಅಂಚೆ ಕಚೇರಿಗೆ ತೆರಳಿ ತಮ್ಮ ಆಧಾರ್ ನಂಬರ್ ಅನ್ನು ಉಳಿತಾಯ ಖಾತೆಗೆ ಎನ್.ಪಿ.ಸಿ.ಐ ಜೋಡಣೆ ಮಾಡಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಮಾಸಿಕ ಪಿಂಚಣಿ ಮತ್ತು ಸಹಾಯಧನ ಪಡೆಯಲು ತೊಂದರೆಯಾಗುತ್ತದೆ.
ಕಂದಾಯ ಇಲಾಖೆಯ ಅಡಿಯಲ್ಲಿ ಬರುತ್ತದೆ; ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಹಿರಿಯ ಅಸಹಾಯಕ, ಅಶಕ್ತ ವ್ಯಕ್ತಿಗಳಿಗಾಗಿ ನಿರ್ಗತಿಕ ವಿಧವೆಯರಿಗೆ, ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ, ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ, ಆತ್ಮಹತ್ಯೆ ಮಾಡಿಕೊಂಡ ರೈತ ಪತ್ನಿಗೆ ವಿಧವಾ ವೇತನ ಮತ್ತು ಅಂಗವಿಕಲರಿಗೆ ಹೀಗೆ ಸಾಮಾಜಿಕ ಭದ್ರತೆ ಯೋಜನೆಗಳನ್ನು ಕಂದಾಯ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
ಸದರಿ ಯೋಜನೆಯನ್ನು ಉತ್ತಮ ರೀತಿಯಲ್ಲಿ ಜಾರಿಗೆ ತರಲು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವನ್ನು ಕಂದಾಯ ಇಲಾಖೆ ಯಡಿಯಲ್ಲಿ ಸೃಜಿಸಲಾಗಿದೆ. ರಾಜ್ಯ ಮಟ್ಟದಲ್ಲಿ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ನಿರ್ದೇಶನಾಲಯದ ಉಪ ನಿರ್ದೇಶಕರುಗಳ ಸಹಾಯದೊಂದಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಾರೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ವಿಚಾರಣಾ ಅಧಿಕಾರಿಯಾಗಿರುತ್ತಾರೆ. ತಾಲ್ಲೂಕಿನ ತಹಶೀಲ್ದಾರರು ಮೇಲ್ಕಂಡ ಎಲ್ಲಾ ಯೋಜನೆಗಳ ಮಂಜೂರಾತಿ, ಉಸ್ತುವಾರಿ/ ಹಣ ಸೆಳೆಯುವ ಹಾಗೂ ಬಟವಾಡೆ ಅಧಿಕಾರಿಯಾಗಿರುತ್ತಾರೆ. ನಾಢ ಕಛೇರಿ/ ಅಟಲ್ಜೀ ಜನಸ್ನೇಹಿ ಕೇಂದ್ರದ ಉಪ ತಹಶೀಲ್ದಾರರು ಮಂಜೂರಾತಿ ಪ್ರಾಧಿಕಾರಿಗಳಾಗಿರುತ್ತಾರೆ.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಈ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಮಾಡುತ್ತದೆ. ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯ ಸಂಸ್ಕಾರ ಯೋಜನೆ, ಆದರ್ಶ ವಿವಾಹ ಯೋಜನೆ, ಆಮ್ ಆದ್ಮಿ ಭೀಮಾ ಯೋಜನೆ, ಮನಸ್ವಿನಿ, ಮೈತ್ರಿ, ಸಾಲದ ಭಾದೆಯಿಂದ ಮೃತರಾದ ರೈತರ ಪತ್ನಿಗೆ ಮಾಸಾಶನ, ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಮಾಸಾಶನ, ಎಂಡೋಸಲ್ಪಾನ್ ಪೀಡಿತರಿಗೆ ಮಾಸಾಶನ.
ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ಆಮ್ ಆದ್ಮಿ ಯೋಜನೆಗಳಿಗೆ ಸಂಬಂಧಿಸಿದಂತೆ ಯೋಜನೆಗಳ ಮಾಹಿತಿ ಹಾಗೂ ಸರ್ಕಾರದ ಆದೇಶ, ಸುತ್ತೋಲೆಗಳನ್ನು ನಿರ್ದೇಶನಾಲಯದ ವೆಬ್ಸೈಟ್ನಲ್ಲಿ ಪಡೆಯಬಹುದಾಗಿದೆ. ವಿಳಾಸ dssp.kar.nic.in












Click it and Unblock the Notifications