ಅತ್ಯಾಚಾರ ಪ್ರಕರಣ : ಯಾರು, ಏನು ಹೇಳಿದರು?
ಬೆಂಗಳೂರು, ಜು. 17 : ಚಲಿಸುವ ಕಾರಿನಲ್ಲಿ ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ವಿಧಾನಸಭೆಯಲ್ಲಿ ಬುಧವಾರ ಭಾರೀ ಗದ್ದಲಕ್ಕೆ ಕಾರಣವಾಯಿತು. ಪ್ರತಿಪಕ್ಷ ಬಿಜೆಪಿ ಗೃಹ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ ಅತ್ಯಾಚಾರ, ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಹತ್ತಿಕ್ಕಲು ತಜ್ಞರ ತಂಡ ರಚಿಸುವುದಾಗಿ ಭರವಸೆ ನೀಡಿದರು.
ಬುಧವಾರದ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ, ಪ್ರತಿಪಕ್ಷ ಬಿಜೆಪಿ ಅತ್ಯಾಚಾರದ ವಿಷಯವನ್ನು ಪ್ರಸ್ತಾಪಿಸಿತು. ಸರ್ಕಾರ ನೊಂದವರಿಗೆ ಸಾಂತ್ವನ ಹೇಳಬೇಕು. ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಆಗ್ರಹಿಸಿತು. [ಅತ್ಯಾಚಾರ ಪ್ರಕರಣ : ಯುವತಿ ನೀಡಿದ ದೂರಿನಲ್ಲೇನಿದೆ?]
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಶಾಸಕ ಸುರೇಶ್ ಕುಮಾರ್ ಅವರು ''ಗೃಹ ಸಚಿವ ಜಾರ್ಜ್ ಕ್ಷೇತ್ರದಲ್ಲೇ ಅಪರಾಧ ಕೃತ್ಯಗಳು ಜರುಗುತ್ತಿವೆ. ಅವರು ಅಸಮರ್ಥರಾಗಿದ್ದು, ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದರು. ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ಕ್ರಮದ ಭರವಸೆ ನೀಡಿದ ಬಳಿಕ ಸದನದಲ್ಲಿ ಗದ್ದಲನಿಂತಿತು. ಸದನದಲ್ಲಿ ಯಾರು, ಏನು ಹೇಳಿದರು?

ತಜ್ಞರ ತಂಡ ರಚಿಸುತ್ತೇವೆ
ಸದನದಲ್ಲಿ ಬಿಜೆಪಿ ಸದಸ್ಯರ ಗದ್ದಲಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಕರಣ ಗಮನಕ್ಕೆ ಬಂದ ಕೂಡಲೇ ಕ್ರಮ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಮಾಜದಲ್ಲಿ ವಿಶ್ವಾಸ ಮೂಡಿಸುವ ಯತ್ನ ಮಾಡುತ್ತೇವೆ. ತಜ್ಞರ ತಂಡ ರಚಿಸಿ ಅತ್ಯಾಚಾರ, ಮಹಿಳಾ ದೌರ್ಜನ್ಯ ಪ್ರಕರಣಗಳ ಅಧ್ಯಯನ ನಡೆಸಿ, ಅಪರಾಧ ತಡೆಯವ ಕ್ರಮಗಳನ್ನು ಜಾರಿಗೊಳಿಸುತ್ತೇವೆ ಎಂದು ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಗೃಹ ಸಚಿವ ಜಾರ್ಜ್ ಹೇಳುವುದೇನು?
ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ. ಸರ್ಕಾರ ಪ್ರಕರಣದಲ್ಲಿ ಯಾವುದೇ ಲೋಪ ಮಾಡಿಲ್ಲ. ಅಧಿಕಾರಿಯನ್ನು ರಕ್ಷಿಸಲು ಯಾವುದೇ ಒತ್ತಡವೂ ಇಲ್ಲ. ಪ್ರಕರಣವನ್ನು ಲಘುವಾಗಿ ಪರಿಗಣಿಸಿಲ್ಲ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಗೃಹ ಸಚಿವರು ರಾಜೀನಾಮೆ ನೀಡಲಿ
ಬುಧವಾರ ವಿಧಾನಸಭೆಯಲ್ಲಿ ಮಾತನಾಡಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಗೃಹ ಸಚಿವರ ಕ್ಷೇತ್ರದಲ್ಲೇ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಅತ್ಯಾಚಾರ ಪ್ರಕರಣ ದುರದೃಷ್ಟಕರ. ಗೃಹ ಸಚಿವರು ಇಂತಹ ಪ್ರಕರಣಗಳನ್ನು ನಿಬಾಯಿಸಲು ಅಸಮರ್ಥರಾಗಿದ್ದು, ತಕ್ಷಣ ಅವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಸರ್ಕಾರಕ್ಕೆ ಚಾಟಿ ಏಟು ಕೊಟ್ಟ ಸ್ಪೀಕರ್
ವಿಧಾನಸಭೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿ ಏಟು ನೀಡಿದರು. ಬೆಂಗಳೂರಿನಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಗೂಟ ಹೊಡೆದುಕೊಂಡು ಕುಳಿತಿದ್ದಾರೆ. ಅವರನ್ನೆಲ್ಲಾ ಹೊರಗೆ ಅಟ್ಟಿರಿ. ಎಲ್ಲಾ ಪಕ್ಷಗಳಲ್ಲೂ ಅವರಿಗೆ ಗಾಡ್ ಫಾದರ್ ಗಳು ಇದ್ದಾರೆ. ಗೂಟ ಹೊಡೆದುಕೊಂಡವರನ್ನು ಒದ್ದು ಓಡೀಸ್ರಿ. ಆಗ ಎಲ್ಲವೂ ಸರಿಯಾಗುತ್ತೆ ಎಂದು ಸ್ಪೀಕರ್ ಹೇಳಿದರು.

ಗೂಂಡಾ ಕಾಯ್ದೆಯಡಿ ಬಂಧಿಸಿ
ಗೆಳೆಯನ ಜತೆ ಇದ್ದ ಯುವತಿಯನ್ನು ಮನೆಯ ಬಳಿಯಿಂದಲೇ ಅಪಹರಿಸಿ ದುಷ್ಕೃತ್ಯ ನಡೆಸಿರುವುದು ಆಘಾತಕಾರಿ. ಈ ಅಪರಾಧಿಗಳು ಇದೊಂದೇ ಕೃತ್ಯಕ್ಕೆ ಸೀಮಿತರಲ್ಲ ಎಂಬ ಮಾಹಿತಿಯಿದೆ. ಇಂತಹ ಕೆಲ ದುಷ್ಕರ್ಮಿಗಳ ತಂಡ ಯುವಜೋಡಿಗಳನ್ನು ಗುರಿ ಮಾಡಿಕೊಂಡು ದರೋಡೆ ಮತ್ತು ಅತ್ಯಾಚಾರ ನಡೆಸುತ್ತಿದೆ. ಇವರನ್ನು ಬಂಧಿಸಿ ಗೂಂಡಾ ಕಾಯಿದೆಯಡಿ ಶಿಕ್ಷಿಸಬೇಕಿದೆ ಎಂದು ಮಾಜಿ ಗೃಹ ಸಚಿವ ಆರ್.ಅಶೋಕ್ ಹೇಳಿದರು.

ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಿ
ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿರುವ ಶ್ರೀನಿವಾರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ರಾಜ್ಯ ಉಳಿಯಬೇಕು, ಮಾನ ಮರ್ಯಾದೆಯಿಂದ ನಮ್ಮ ಹೆಣ್ಣುಮಕ್ಕಳು ಬದುಕಬೇಕು ಎಂದಾದರೆ ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ತಿಳಿಸಿದರು.

ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು
ಅತ್ಯಚಾರ ಪ್ರಕರಣದ ಕುರಿತು ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು, ಇದೊಂದು ಅಸಹ್ಯ, ಹೇಯ ಕೃತ್ಯ ಇದಾಗಿದ್ದು, ನಿಗದಿತ ಸಮಯದೊಳಗೆ ಶಿಕ್ಷೆ ವಿಧಿಸಲು ಅನುವಾಗುವಂತೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು, ರಾತ್ರಿ ಗಸ್ತು ಹೆಚ್ಚಿಸಬೇಕು. ನಿರ್ಜನ ಪ್ರದೇಶಗಳಲ್ಲಿ ವಿಶೇಷ ಸಂಚಾರಿ ಗಸ್ತು ಪಡೆ ನಿಯೋಜಿಸಬೇಕು ಎಂದು ಹೇಳಿದ್ದಾರೆ.











Click it and Unblock the Notifications