ಚುನಾವಣೆಗೂ ಮುನ್ನ ಪೀಣ್ಯ ಬಸ್ ನಿಲ್ದಾಣ ಆರಂಭ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ನಿರ್ಮಾಣಗೊಂಡಿರುವ ಈ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೆಜಿಸ್ಟಿಕ್ ಭಾಗದಲ್ಲಿನ ಸಂಚಾರದಟ್ಟಣೆಗೆ ದೊಡ್ಡ ಮುಕ್ತಿ ಸಿಗಲಿದೆ ಎಂದು ಆಶಿಸಲಾಗಿದೆ.
ಉತ್ತರ ಕರ್ನಾಟಕ ಮತ್ತು ಮಂಗಳೂರು ಭಾಗಗಳಿಂದ ತುಮಕೂರು ರಸ್ತೆ ಮಾರ್ಗವಾಗಿ ಮೆಜಿಸ್ಟಿಕ್ ಪ್ರವೇಶಿಸುತ್ತಿದ್ದ KSRTC ಬಸ್ಸುಗಳು ಇನ್ನು ಮುಂದೆ ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯೇ ಸಂಚಾರವನ್ನು ಸ್ಥಗಿತಗೊಳ್ಳಿಸಲಿವೆ. BMTC ಬಸ್ಸುಗಳೂ ಈ ನಿಲ್ದಾಣವನ್ನು ಬಳಸಿಕೊಂಡು ಸಂಚರಿಸಲಿವೆ. ಆದರೆ ಖಾಸಗಿ ಬಸ್ಸುಗಳು ಎಂದಿನಂತೆ ಮೆಜಿಸ್ಟಿಕ್ ಮತ್ತು ಕೆಆರ್ ಮಾರುಕಟ್ಟೆವರೆಗೂ ಸಂಚರಿಸಲಿವೆ.
ಮುಂಬೈ, ಗೋವಾ, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ, ವಿಜಾಪುರ, ಬೀದರ್, ಮಂಗಳೂರು, ಉಡುಪಿ, ಧರ್ಮಸ್ಥಳ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ಕಡೆ ಸಂಚರಿಸುತ್ತಿದ್ದ 1,300 ಬಸ್ಸುಗಳು ಇನ್ಮುಂದೆ ಪೀಣ್ಯದಿಂದಲೇ ಸಂಚಾರ ಆರಂಭಸಲಿವೆ.
ಅಲ್ಲಿಂದ ಮುಂದಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣದಿಂದ 'ಸಂಪರ್ಕ ಸಾರಿಗೆ ಬಸ್ ಸೇವೆ' ಕಲ್ಪಿಸಲಾಗುವುದು. ಸುಮಾರು 30 ಬಸ್ಸುಗಳು ಪ್ರತಿ 5 ನಿಮಿಷಕ್ಕೊಂದರಂತೆ ಸಂಚರಿಸಲಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರು ನಾಲ್ಕೂ ದಿಕ್ಕುಗಳಲ್ಲೂ ವ್ಯಾಪಕವಾಗಿ ವಿಸ್ತರಿಸುತ್ತಿದೆ. ಸಂಚಾರ ದಟ್ಟಣೆ ಒತ್ತಡ ವಿಪರೀತವೆನಿಸುವಷ್ಟು ರಾಜಧಾನಿಯನ್ನು ಕಾಡತೊಡಗಿದೆ. ಈ ಸಮಸ್ಯೆಯನ್ನು ನೀಗಿಸಲು ಈಗಾಗಲೇ ಮೈಸೂರು ದಿಕ್ಕಿನಲ್ಲಿ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಚಿಕ್ಕ ಪ್ರಮಾಣದಲ್ಲಿ ಕಾರ್ಯಗತವಾಗಿದೆ.
ಇದರ ಜತೆಗೆ ನೈಸ್ ರಸ್ತೆಗೆ ಸಮೀಪದಲ್ಲಿ 40 ಎಕರೆ ಪ್ರದೇಶದಲ್ಲಿ ಮತ್ತು ಕನಕಪುರ ಮಾರ್ಗದಲ್ಲಿಯೂ ಮತ್ತೊಂದು ಬೃಹತ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ/ಯೋಚನೆಯೂ ಇದೆ. ಇದರ ಹೊರತಾಗಿ ಭವಿಷ್ಯದಲ್ಲಿ ಕೋಲಾರ ಮತ್ತು ಹೊಸೂರು ದಿಕ್ಕಿನಲ್ಲಿಯೂ ಸ್ಯಾಟಲೈಟ್ ಬಸ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.
ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಶಾಪಿಂಗ್ ಮಾಲ್, 4 ಸಿನಿಮಾ ಮಂದಿರ, ರೆಸ್ಟೋರೆಂಟ್, ಹೋಟೆಲುಗಳು, ವಸತಿಗೃಹಗಳು ಸೇವೆಗೆ ಸಿದ್ಧವಾಗಲಿವೆ.












Click it and Unblock the Notifications