ನರಹಂತಕ ವೀರಪ್ಪನ್ ಗುಂಡಿಗೆ ಪೊಲೀಸ್ ಅಧಿಕಾರಿ ಬಲಿ

ಹೌದು ಈ 23 ವರ್ಷಗಳಿಂದ ಜೀವನ್ಮರಣದ ಹೋರಾಟ ನಡೆಸಿದ್ದ ಪೊಲೀಸ್ ಅಧಿಕಾರಿ ಜಯನಗರ ವಿಭಾಗದ ಎಸಿಪಿ ಎನ್ ಚಂದ್ರಪ್ಪ (57) ಅವರು ನಿನ್ನೆ ವಿಧಿವಶರಾಗಿದ್ದಾರೆ. ವಾರದ ಹಿಂದೆ ಕ್ಯಾನ್ಸರ್ ಬಾಧೆ ಹೆಚ್ಚಾಗಿ ಬೆಂಗಳೂರಿನ ಎಚ್ಸಿಜಿ ಆಸ್ಪತ್ರೆಗೆ ದಾಖಲಾಗಿದ್ದ ಚಂದ್ರಪ್ಪ ಅವರು ಬುಧವಾರ ಸಂಜೆ ಮೃತಪಟ್ಟಿದ್ದಾರೆ.
ಚಂದ್ರಪ್ಪ ಅವರ ಎರಡನೇ ಪುತ್ರಿಗೆ ಮದುವೆ ತಯಾರಿ ನಡೆದಿತ್ತು. ಮೂವರು ಪುತ್ರಿಯರಲ್ಲಿ ಒಬ್ಬರಿಗೆ ವಿವಾಹವಾಗಿದೆ. ಇಬ್ಬರು ಪುತ್ರಿಯರು, ಒಬ್ಬ ಪುತ್ರ ವ್ಯಾಸಂಗ ಮಾಡುತ್ತಿದ್ದಾರೆ.
ವೀರಪ್ಪನ್ ಗುಂಡಿನಿಂದ ಮೂಳೆ ಕ್ಯಾನ್ಸರ್ ಅಂಟಿಕೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಆ ಅಧಿಕಾರಿಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೊದಲು ಎಂಆರ್ ಐ ಸ್ಕ್ಯಾನ್ ಮಾಡಬೇಕಿತ್ತು. ಆದರೆ ಸ್ಕ್ಯಾನ್ ಮಾಡಿದರೆ, ದೇಹ, ಮತ್ತು ತಲೆಯ ಒಂದು ಭಾಗದಲ್ಲಿದ್ದ ಬುಲೆಟ್ ಮತ್ತು ಸೀಸದ ಅಂಶ ಸಿಡಿದರೆ ಜೀವ ಹೋಗಬಹುದು ಎಂಬ ಆತಂಕದಿಂದ ಸ್ಕ್ಯಾನಿಂಗ್ ಮಾಡದೆಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆ ಅಧಿಕಾರಿಯ ಜೀವ ಉಳಿಸುವ ವೈದ್ಯರ ಹೋರಾಟ ಕೊನೆಗೂ ಫಲಿಸಲಿಲ್ಲ.
ಚಂದ್ರಪ್ಪ ಅವರು ಕಳೆದ ಗುರುವಾರ ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಗೆ ತಲುಪಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು.
'ಅವರಿಗೆ ಯಾವುದೇ ಔಷಧ ನೀಡಿದರೂ ಪ್ರಯೋಜನ ಆಗುತ್ತಿರಲಿಲ್ಲ. ಎಂಆರ್ ಐ ಸ್ಕಾನ್ ಗೆ ಒಳಪಡಿಸಿದ ನಂತರವೇ ಶಸ್ತ್ರ ಚಿಕಿತ್ಸೆ ನಡೆಸಬೇಕಿತ್ತು. 1990ರಲ್ಲಿ ಅವರ ತಲೆ ಸೇರಿದಂತೆ ಹಲವು ಜಾಗಗಳಲ್ಲಿ ಹೊಕ್ಕಿದ್ದ ಗುಂಡುಗಳನ್ನು ಹೊರ ತೆಗೆಯಲಾಗಿರಲಿಲ್ಲ. ತಲೆಯಲ್ಲಿ ಒಂದು ಗುಂಡು ಇರುವುದು ಎಕ್ಸ್ ರೇ ಯಿಂದ ತಿಳಿದುಬಂದಿತ್ತು' ಎಂದು ವೈದ್ಯರು ಹೇಳಿದ್ದರು.
ಗುಂಡೇಟು ಹೇಗೆ?
1990ರ ಏಪ್ರಿಲ್ ತಿಂಗಳಲ್ಲಿ ಹೋಗೇನಕಲ್ ಸಮೀಪ ವೀರಪ್ಪನ್ ಮತ್ತು ಸಹಚರರು ಬೀಡು ಬಿಟ್ಟಿರುವ ಮಾಹಿತಿಯನ್ನು ಎಂಎಂ ಹಿಲ್ಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ದಿನೇಶ್ ಸಂಗ್ರಹಿಸಿದ್ದರು. ಏ. 9ರಂದು ಪೊಲೀಸ್ ಅಧಿಕಾರಿಗಳಾದ ಕೃಷ್ಣೇ ಅರಸ್, ರಾಮಲಿಂಗು, ಜಗನ್ನಾಥ್, ಆಗ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಚಂದ್ರಪ್ಪ, ವೈರ್ ಲೆಸ್ ಅಧಿಕಾರಿ ಶಂಕರ್ ರಾವ್ ಜೀಪಿನಲ್ಲಿ ವೀರಪ್ಪನ್ ಹುಟ್ಟೂರಾದ ಗೋಪಿನಾಥಂನಿಂದ ಹೊಗೇನಕಲ್ ವರೆಗೂ ಕೂಂಬಿಂಗ್ ನಡೆಸಿದ್ದರು.
ಸಂಜೆ 6.30ರ ಸುಮಾರಿನಲ್ಲಿ ಗೋಪಿನಾಥಂಗೆ 2 ಕಿ.ಮೀ. ದೂರದಲ್ಲಿ ಬರುವ ಹೇರ್ ಪಿನ್ ತಿರುವಿನಲ್ಲಿ ಬರುವಾಗ ಕಡಿದಾದ ರಸ್ತೆಗೆ ಕಲ್ಲು ಅಡ್ಡಹಾಕಲಾಗಿತ್ತು. ಪೊಲೀಸ್ ಅಧಿಕಾರಿಗಳಿದ್ದ ಜೀಪು ನಿಲ್ಲಿಸುತ್ತಿದ್ದಂತೆ ಬಂಡೆಯ ಹಿಂದೆ ಅಡಗಿದ್ದ ವೀರಪ್ಪನ್ ಮತ್ತು ಸಹಚರರು ಗುಂಡು ಹಾರಿಸಿದ್ದರು. ಜೀಪಿನಲ್ಲಿದ್ದ ರಾಮಲಿಂಗು, ಜಗನ್ನಾಥ್, ದಿನೇಶ್, ಶಂಕರ್ ರಾವ್ ಸ್ಥಳದಲ್ಲೇ ಹತ್ಯೆಯಾಗಿದ್ದರು. ಚಂದ್ರಪ್ಪ ಅವರಿಗೆ ಗುಂಡೇಟು ತಾಗಿ ಕುಸಿದು ಬಿದ್ದಿದ್ದರು.
ಗಾಯಗೊಂಡಿದ್ದ ಕೃಷ್ಣೇ ಅರಸ್ ಅವರು ಮೃತಪಟ್ಟಿದ್ದ ನಾಲ್ವರನ್ನು ಮತ್ತು ಚಂದ್ರಪ್ಪ ಅವರನ್ನು ಜೀಪಿನಲ್ಲಿ ಹಾಕಿಕೊಂಡು ವಾಪಸ್ ಹೊಗೇನಕಲ್ ಗೆ ಬಂದಿದ್ದರು. ತೆಪ್ಪದಲ್ಲಿ ಹೊಳೆ ದಾಟಿಸಿ ಧರ್ಮಪುರಿ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಬದುಕುಳಿದಿದ್ದ ಚಂದ್ರಪ್ಪ ಅವರನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೊಕ್ಕಿದ್ದ ಸೀಸ, ಗುಂಡುಗಳನ್ನು ತೆಗೆದರೆ ಪ್ರಾಣಕ್ಕೆ ಅಪಾಯವಾದೀತು ಎನ್ನುವ ಕಾರಣಕ್ಕೆ ಹಾಗೇಯೇ ಬಿಡಲಾಗಿತ್ತು. ಕೃಷ್ಣೇ ಅರಸ್ ಮತ್ತು ಚಂದ್ರಪ್ಪ ಅವರಿಗೆ 'ರಾಷ್ಟ್ರಪತಿ ಶೌರ್ಯ ಪದಕ' ಸಂದಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ರೇವಣ್ಣ, ಎಸಿಪಿ ವೆಂಕಟಸ್ವಾಮಿ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿಬಿ ಅಶೋಕ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಚಂದ್ರಪ್ಪ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.












Click it and Unblock the Notifications