ಭೋವಿ ಸಮಾಜದಿಂದ ಬುಧವಾರ ಬೆಂಗಳೂರಲ್ಲಿ ಪ್ರತಿಭಟನೆ
ಬೆಂಗಳೂರು, ಜೂನ್ 28 : ಭೋವಿ ಸಮಾಜದ ಮುಖಂಡ ಶಿವರಾಜ ತಂಗಡಗಿ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ಜೂನ್. 29ರಂದು ಭೋವಿ ಸಮುದಾಯ 'ಬೆಂಗಳೂರು ಚಲೋ' ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಬುಧವಾರ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ 50 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಭೋವಿ ಸಮಾಜದ ಅಧ್ಯಕ್ಷ ರವಿ ಮಾಕಳಿ ಮತ್ತು ಪ್ರಧಾನ ಕಾರ್ಯದರ್ಶಿ ಜಯರಾಮ್ ಹೇಳಿದ್ದಾರೆ. [ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]

ಶಿವರಾಜ್ ತಂಗಡಗಿ ಅವರು ಸಚಿವರಾಗಿದ್ದಾಗ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಲಾಖೆಯ ಸಾಧನೆಯನ್ನು ನೋಡಿದರೆ ಮುಖ್ಯಮಂತ್ರಿಗಳಿಗೆ ಗೊತ್ತಾಗುತ್ತದೆ. ಇಷ್ಟು ಕೆಲಸ ಮಾಡಿದರೂ ಸಹ ಭೋವಿ ಸಮಾಜದ ಮುಖಂಡರಾದ ಶಿವರಾಜ ತಂಗಡಗಿ ಅವರನ್ನು ಸಂಪುಟದಿಂದ ಕೈ ಬಿಟ್ಟು ಇಡೀ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. [ಮೊದಲ ಬಾರಿ ಸಚಿವರಾದ 7 ಶಾಸಕರ ಪರಿಚಯ]
ಶಿವರಾಜ ತಂಗಡಗಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭೋವಿಗಳಿಗೆ ಅನ್ಯಾಯ ಮಾಡಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಭೋವಿ ಸಮಾಜ ಈಗ ಒಬ್ಬ ಮಂತ್ರಿಯಿಲ್ಲದೇ ಪಡಿಪಾಟಲು ಅನುಭವಿಸುವ ಸ್ಥಿತಿ ಎದುರಾಗಿದೆ.
ಆದ್ದರಿಂದ, ಭೋವಿಗಳೆಲ್ಲರೂ ಪಕ್ಷಭೇದ ಮರೆತು ಒಂದಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಬೇಕು. ರಾಜ್ಯದ ಎಲ್ಲ ಭಾಗದಲ್ಲಿರುವ ಭೋವಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮಗಾದ ಅನ್ಯಾಯವನ್ನು ಪ್ರತಿಭಟಿಸಬೇಕು ಎಂದು ಮುಖಂಡರು ಕರೆ ನೀಡಿದ್ದಾರೆ.
ಬುಧವಾರ ಫ್ರೀಡಂ ಪಾರ್ಕ್ನಲ್ಲಿ ಆರಂಭಗೊಳ್ಳುವ ಪ್ರತಿಭಟನಾ ಜಾಥಾ ಮುಖ್ಯಮಂತ್ರಿ ಅವರ ನಿವಾಸದ ಮುಂದೆ ಸೇರಲಿದೆ. ಅಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಭೋವಿ ಸಮಾಜಕ್ಕೆ ಪ್ರಾತಿನಿಧ್ಯ ನೀಡುವಂತೆ ಕೋರಲಾಗುತ್ತದೆ.
ಅಂದಹಾಗೆ ಜೂನ್ 19ರಂದು ಸಂಪುಟ ಪುನಾರಚನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನಕಗಿರಿ ಶಾಸಕ ಮತ್ತು ಸಣ್ಣ ನೀರಾವರಿ ಸಚಿವರಾಗಿದ್ದ ಶಿವರಾಜ ತಂಗಡಗಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರು.












Click it and Unblock the Notifications