ಮೇ 4ರಂದು ಏಕಕಾಲಕ್ಕೆ ಎಲ್ಲ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣ; ಕಾಂಗ್ರೆಸ್ ಪ್ರಣಾಳಿಕೆಗೆ ತಿರುಗೇಟು
2023ರ ಕರ್ನಾಟಕ ವಿಧಾನಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಒಂದು ಕಡೆಯಾದರೆ, ಮೇ 10ರಂದು ನಡೆಯುವ ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ ಎಲ್ಲ ಮೂರು ಪಕ್ಷಗಳು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿವೆ.
ಇದೇ ವೇಳೆ ಮೇ 2ರಂದು ಬಿಡುಗಡೆಯಾದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪಿಎಫ್ಐ ಮತ್ತು ಬಜರಂಗ ದಳದಂತಹ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಉಲ್ಲೇಖಿಸಿದ್ದಾರೆ, ಇದಕ್ಕೆ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಕರ್ನಾಟಕ ಕುರುಕ್ಷೇತ್ರದ ಮತದಾನಕ್ಕೆ ಒಂದು ವಾರ ಬಾಕಿ ಇರುವಾಗಲೇ ವಿಪಕ್ಷ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ನಿರ್ಧಾರವನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿ ಇಲ್ಲದ ವಿವಾದವನ್ನು ಮೈಮೇಲೆಳೆದುಕೊಂಡಿದೆ. ಇದೀಗ ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳು ಕಾಂಗ್ರೆಸ್ಗೆ ತಿರುಗೇಟು ನೀಡಲು ಮುಂದಾಗಿವೆ.
ಗುರುವಾರ (ಮೇ 4)ರಂದು ಏಕಕಾಲಕ್ಕೆ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಿಸಲು ಬಜರಂಗದಳ ನಿರ್ಧರಿಸಿದೆ. ಸಂಜೆ 7 ಗಂಟೆಗೆ ಹನುಮಾನ್ ಚಾಲೀಸಾ ಪಠಣ ಆಯೋಜನೆಗೆ ಸಿದ್ಧತೆ ಮಾಡಿಕೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ""ಬಜರಂಗದಳ ನಾಳೆ ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ. ಇದು ಹಿಂದೂ ಧರ್ಮಕ್ಕೆ ಸಂಕಟ ಒದಗಿ ಬಂದಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಬದಿಗಿಟ್ಟು ಧರ್ಮ ರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ,'' ಎಂದು ಬರೆದುಕೊಂಡಿದ್ದಾರೆ.
ವಿವಾದ ಎಬ್ಬಿಸಿದ ಕಾಂಗ್ರೆಸ್ ಪ್ರಣಾಳಿಕೆ
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ತಿಳಿಸಿದೆ.
ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿ ಮತ್ತು ಸಂಘಟನೆಗಳಾದ ಬಜರಂಗದಳ ಮತ್ತು ಪಿಎಫ್ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿಕೊಂಡಿದ್ದಾರೆ.
ಆಂಜನೇಯನಿಗೂ, ಬಜರಂಗದಳಕ್ಕೂ ಏನ್ ಸಂಬಂಧ?; ಡಿಕೆಶಿ
"ಬಜರಂಗದಳ ನಿಷೇಧ ಮಾಡ್ತೀವಿ ಅಂದಿದ್ದಕ್ಕೆ ಯಾಕೆ ಅವರು ಗಾಬರಿ ಆಗುತ್ತಿದ್ದಾರೆ. ಆಂಜನೇಯನಿಗೂ, ಬಜರಂಗದಳಕ್ಕೂ ಏನ್ ಸಂಬಂಧ? ಬಹಳ ಪ್ರಚೋದನೆ ಉಂಟು ಮಾಡುತ್ತಿದ್ದಾರೆ. ಜನಕ್ಕೆ ಇದೆಲ್ಲ ಅರ್ಥವಾಗಿದೆ. ನಾವೂ ಹನುಮನ ಭಕ್ತರು, ಆಂಜನೇಯನ ಪ್ರವೃತ್ತಿಯವರು, ಆಂಜನೇಯ ಬೇರೆ, ಬಜರಂಗದಳ ಬೇರೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಏಪ್ರಿಲ್ 4ರಂದು ಹನುಮಾನ್ ಚಾಲೀಸಾ ಪಠಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, "ನಾನೂ ಹನುಮಾನ್ ಚಾಲೀಸಾ ದಿನಾ ಪಠಿಸ್ತೀವಿ. ಹಿಂದಿನ ಆರ್ಎಸ್ಎಸ್ ಬೇರೆ, ಈಗಿನ ಆರ್ಎಸ್ಎಸ್ ಬೇರೆ. ಕುಂಬಳಕಾಯಿ ಕಳ್ಳ ಅಂದರೆ, ಹೆಗಲು ಮುಟ್ಟಿ ಯಾಕೆ ನೋಡಿಕೊಳ್ಳೊದ್ಯಾಕೆ? ಮೊದಲು ನೀವು ದೇಶ ಉಳಿಸಿ," ಎಂದು ತಿಳಿಸಿದರು.
"ಬಜರಂಗಿ ಅಂತಾ ಕ್ಯಾಂಪೇನ್ ಮಾಡುವವರು ಜನರ ಹೊಟ್ಟೆಗೆ ಏನು ಕೊಟ್ರಿ? ಎಷ್ಟು ಜನರಿಗೆ ಉದ್ಯೋಗ ಕೊಟ್ರಿ? ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಣಾಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಲ್ಲ. ಮೇ 13ರಂದು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪಕ್ಕಾ," ಎಂದು ಹೇಳಿದ್ದಾರೆ.












Click it and Unblock the Notifications