ಜೂನ್ನಲ್ಲಿ ನಮ್ಮ ಮೆಟ್ರೋ 2 ಕಿ. ಮೀ. ಮಾರ್ಗ ಸಂಚಾರಕ್ಕೆ ಮುಕ್ತ
ಬೆಂಗಳೂರು, ಮೇ 16; ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವಿನ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಜೂನ್ನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ವೈಟ್ಫೀಲ್ಡ್-ಬೆನ್ನಿಗಾನಹಳ್ಳಿ ನಡುವಿನ ನೇರಳೆ ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಸಹಾಯಕವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ವೈಟ್ಫೀಲ್ಡ್ ಮತ್ತು ಕೆ. ಆರ್. ಪುರ ನಡುವಿನ ನಮ್ಮ ಮೆಟ್ರೋ ನೇರಳೆ ಮಾರ್ಗವನ್ನು ಲೋಕಾರ್ಪಣೆ ಮಾಡಿದರು. ಆದರೆ ಬೆನ್ನಿಗಾನಹಳ್ಳಿ ತನಕ ಮೆಟ್ರೋ ಸೇವೆ ವಿಸ್ತರಣೆಗೆ ಕಾಮಗಾರಿ ಅಡ್ಡಿಯಾಗಿತ್ತು. ಈಗ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ.

ಬೆನ್ನಿಗಾನಹಳ್ಳಿ ಬಳಿ ಹಾದು ಹೋಗಿರುವ ಬೆಂಗಳೂರು-ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿ ತೆರೆದ ವೆಬ್ ಗರ್ಡರ್ ಅಳವಡಿಕೆ ಸವಾಲಿನ ಕೆಲಸವಾಗಿತ್ತು. ಇದನ್ನು ಪೂರ್ಣಗೊಳಿಸಲಾಗಿದ್ದು, ವಯಡಕ್ಟ್ ಕಾಮಗಾಡಿ ಅಳವಡಿಕೆ ಕಾರ್ಯ ಕೈಗೊಳ್ಳಲಾಗಿತ್ತು. ಈ ಕಾಮಗಾರಿಯೂ ಪೂರ್ಣಗೊಂಡು ಮೆಟ್ರೋ ರೈಲು ಸಾಗಲು ಹಳಿ ಅಳವಡಿಕೆ ನಡೆಯುತ್ತಿದೆ.
ಅತಿ ಉದ್ದದ ವೆಬ್ ಗರ್ಡರ್; ಬೆಂಗಳೂರು-ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿ 8.45 ಮೀಟರ್ ಎತ್ತರದಲ್ಲಿ 65 ಮೀಟರ್ ಉದ್ದ, 550 ಟನ್ ತೂಕದ ವೆಬ್ ಗರ್ಡರ್ ಅಳವಡಿಕೆ ಮಾಡಲಾಗಿದೆ. ಬೆಂಗಳೂರು ನಗರದ ನಮ್ಮ ಮೆಟ್ರೋ ಮಾರ್ಗದಲ್ಲಿ ಆಳವಡಿಕೆ ಮಾಡಲಾದ ಅತಿ ಉದ್ದದ ವೆಬ್ ಗರ್ಡರ್ ಇದಾಗಿದೆ.

ವಯಡಕ್ಟ್ ಅಳವಡಿಕೆ ಕಾರ್ಯ ಸಹ ಪೂರ್ಣಗೊಂಡು ಈಗ ಮೆಟ್ರೋ ಹಳಿ ಅಳವಡಿಕೆ, ಬೆನ್ನಿಗಾನಹಳ್ಳಿ ನಿಲ್ದಾಣದಲ್ಲಿ ಟ್ರ್ಯಾಕ್, ಸಿಗ್ನಲಿಂಗ್ ಮತ್ತು ನಿಲ್ದಾಣದ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಜೂನ್ನಲ್ಲಿ ಕೆ. ಆರ್. ಪುರ ಬೆನ್ನಿಗಾನಹಳ್ಳಿ ಮಾರ್ಗದಲ್ಲಿ ರೈಲು ಓಡಿಸಲು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ.
ಕೆ. ಆರ್. ಪುರ-ವೈಟ್ಫೀಲ್ಡ್ ತನಕ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಆದರೆ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಂತೆ ಇಲ್ಲ. ಬಿಎಂಆರ್ಸಿಎಲ್ ಪ್ರತಿದಿನ 1 ಲಕ್ಷ ಜನರು ಸಂಚಾರ ನಡೆಸಬಹುದು ಎಂದು ನಿರೀಕ್ಷೆ ಮಾಡಿತ್ತು. ಆದರೆ ಪ್ರತಿದಿನ ಸುಮಾರು 20 ಸಾವಿರ ಜನರು ಪ್ರಯಾಣ ಮಾಡುತ್ತಿದ್ದಾರೆ.
ಈ ಮಾರ್ಗದಲ್ಲಿ 2 ಕಿ. ಮೀ. ಕಾಮಗಾರಿ ಬಾಕಿ ಇದ್ದು, ಅದು ನಡೆಯುತ್ತಿದೆ. ಈಗ ಎರಡೂ ನಿಲ್ದಾಣಗಳ ನಡುವೆ ಬಸ್ನಲ್ಲಿ ಸಂಚಾರ ನಡೆಸಬೇಕಿದೆ. ಬಸ್, ಮೆಟ್ರೋ ಹೀಗೆ ಬದಲಾವಣೆ ಮಾಡಬೇಕಿರುವುದರಿಂದ ಹೆಚ್ಚು ಜನರು ಸಂಚಾರ ನಡೆಸುತ್ತಿಲ್ಲ. ಕಾಮಗಾರಿ ಪೂರ್ಣಗೊಂಡು ವೈಟ್ಫೀಲ್ಡ್-ಬೆನ್ನಿಗಾನಹಳ್ಳಿ ನಡುವೆ ರೈಲು ಸಂಚಾರ ಆರಂಭವಾದರೆ ಹೆಚ್ಚಿನ ಜನರು ಸಂಚಾರ ನಡೆಸಬಹುದು ಎಂಬ ನಿರೀಕ್ಷೆಯಲ್ಲಿ ಬಿಎಂಆರ್ಸಿಎಲ್ ಇದೆ.
ವೈಟ್ಫೀಲ್ಡ್-ಬೆನ್ನಿಗಾನಹಳ್ಳಿ ನಡುವಿನ ನೇರಳೆ ವಿಸ್ತರಿತ ಮಾರ್ಗದ ಒಟ್ಟು ಉದ್ದ 15.50 ಕಿ. ಮೀ. ಸದ್ಯ 13 ಕಿ. ಮೀ. ಮಾರ್ಗದಲ್ಲಿ ಮಾತ್ರ ರೈಲು ಸಂಚಾರ ನಡೆಸುತ್ತಿದೆ. ಈ ಮಾರ್ಗವನ್ನು ಎರಡು ಹಂತಗಳಾಗಿ ಉದ್ಘಾಟನೆ ಮಾಡಲು ಬಿಎಂಆರ್ಸಿಎಲ್ ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಮೊದಲ ಹಂತದ ವೈಟ್ಫೀಲ್ಡ್-ಕೆ. ಆರ್. ಪುರ ಮಾರ್ಗದಲ್ಲಿ ಸಂಚಾರ ಆರಂಭವಾಗಿದೆ.
ಈಗ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಕೆ. ಆರ್. ಪುರ-ಬೈಯಪ್ಪನಹಳ್ಳಿ ನಡುವೆ ರೈಲುಗಳ ಸಂಚಾರ ಆರಂಭಿಸಲಾಗುತ್ತದೆ. ಬೈಯಪ್ಪನಹಳ್ಳಿ- ಕೆ. ಆರ್. ಪುರ ಮಾರ್ಗದ ಕಾಮಗಾರಿ ಮುಗಿದು ರೈಲು ಸಂಚಾರ ಆರಂಭವಾದರೆ ಈ ಮಾರ್ಗದಲ್ಲಿಯೂ ಹೆಚ್ಚಿನ ಜನರು ಸಂಚಾರ ನಡೆಸುವ ನಿರೀಕ್ಷೆ ಇದೆ.
ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಯೋಜನೆ-2ನೇ ಹಂತದಲ್ಲಿ ನೇರಳೆ ಮಾರ್ಗವನ್ನು ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ತನಕ ವಿಸ್ತರಣೆ ಮಾಡಿದೆ. ಇದರಲ್ಲಿ 13 ಕಿ. ಮೀ. ಮಾರ್ಗ ಈಗಾಗಲೇ ಸಂಚಾರಕ್ಕೆ ಮುಕ್ತವಾಗಿದೆ. ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವಿನ ಮಾರ್ಗವನ್ನು ಮಾತ್ರ ಸಂಚಾರಕ್ಕೆ ಮುಕ್ತಗೊಳಿಸುವುದು ಬಾಕಿ ಇದೆ.












Click it and Unblock the Notifications