ಬಹುಜನ ಕ್ರಾಂತಿ ಮೋರ್ಚಾ ಪ್ರತಿಭಟನೆ; ಉಡುಪಿ, ಭಟ್ಕಳ, ಚಿಕ್ಕಮಗಳೂರಿನಲ್ಲಿ ಭಾಗಶಃ ಬಂದ್
ಪೌರತ್ವ ಕಾಯ್ದೆ ವಿರೋಧಿಸಿ ಇಂದು ಬಹುಜನ ಕ್ರಾಂತಿ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ಸಲುವಾಗಿ ಉಡುಪಿಯ ಹೃದಯ ಭಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಸಿಎಎ ವಿರೋಧಿಸುವ ಕೆಲವು ವ್ಯಾಪಾರಸ್ಥರು ಬಂದ್ ಗೆ ಬೆಂಬಲ ನೀಡಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ.
ಉಡುಪಿ ನಗರದ ಬಹಳಷ್ಟು ಅಂಗಡಿಗಳು ಬಂದ್ ಆಗಿದ್ದು, ಜನರಿಗೆ ಮಾತ್ರ ಯಾವ ಕಾರಣಕ್ಕೆ ಬಂದ್ ಎಂದು ತಿಳಿದಿರಲಿಲ್ಲ. ಕೆಲವು ಅಂಗಡಿಗಳು ಬೆಳಿಗ್ಗೆ ತೆರೆದು ಬಳಿಕ ಬಾಗಿಲು ಹಾಕಿಕೊಂಡವು.
ಇನ್ನು ಜಿಲ್ಲೆಯ ಗಂಗೊಳ್ಳಿ, ಕಂಡ್ಲೂರು ಮತ್ತು ಶೀರೂರಿನಲ್ಲಿ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಉಳಿದೆಡೆಗಳಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ಉಡುಪಿಯಲ್ಲಿ ನಾಳೆ ಸಹಬಾಳ್ವೆ ಸಂಘಟನೆ ವತಿಯಿಂದ ಪೌರತ್ವ ಕಾಯಿದೆ ವಿರೋಧಿಸಿ ಬೃಹತ್ ಪ್ರತಿಭಟನೆ ಆಯೋಜನೆಗೊಂಡಿದೆ.

ಚಿಕ್ಕಮಗಳೂರಿನಲ್ಲಿ 4 ಶಾಲೆಗಳಿಗೆ ರಜೆ
ಪೌರತ್ವ ಮಸೂದೆಗೆ ವಿರೋಧಿಸಿ ದೇಶದಲ್ಲಿ ಕೆಲ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆ, ಎಂ.ಜಿ.ರಸ್ತೆ, ಐ.ಜಿ.ರಸ್ತೆಯ ಕೆಲ ಅಂಗಡಿಗಳು ಬಂದ್ ಆಗಿದ್ದವು. ಸ್ವಯಂಪ್ರೇರಿತವಾಗಿ ಕೆಲ ವರ್ತಕರು ಅಂಗಡಿಗಳನ್ನು ಮುಚ್ಚಿದ್ದರು.
ಮುಸ್ಲಿಂ ಸಮುದಾಯ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದ್ದು, ನಗರದ ನಾಲ್ಕು ಖಾಸಗಿ ಶಾಲೆಗಳಿಗೆ ಸ್ವಯಂಪ್ರೇರಿತವಾಗಿ ರಜೆ ನೀಡಲಾಗಿತ್ತು. ನಗರದ ಯುನಿಟೆಡ್, ಸನ್ ರೈಸ್, ಕೇಂಬ್ರಿಡ್ಜ್, ವಿದ್ಯಾ ಭಾರತಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದೇ ಸಂದರ್ಭ ಯಾವುದೇ ಕಾರಣಕ್ಕೂ ಪೌರತ್ವ ಮಸೂದೆ ಜಾರಿಗೆ ತರದಿರುವಂತೆ ಆಗ್ರಹಿಸಲಾಯಿತು. ನಿನ್ನೆ ಅಂಗಡಿ ಮುಂಗಟ್ಟುಗಳಿಗೆ ಕರಪತ್ರ ಹಂಚಿಕೆ ಮಾಡಿ ಬಂದ್ ಗೆ ಬೆಂಬಲ ನೀಡುವಂತೆ ಕೆಲವರು ಕೋರಿದ್ದರು.

ಭಟ್ಕಳದಲ್ಲೂ ಪ್ರತಿಭಟನೆ ಕಾವು
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಸಿಆರ್) ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಬಹುಜನ ಕ್ರಾಂತಿ ಮೋರ್ಚಾ ಕರೆ ನೀಡಿದ್ದ ಬಂದ್ ಗೆ ಪಟ್ಟಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಹುಜನ ಕ್ರಾಂತಿ ಮೋರ್ಚಾ ಮೂರು ಹಂತದಲ್ಲಿ ರಾಷ್ಟ್ರ ವ್ಯಾಪಿ ಆಂದೋಲನ ನಡೆಸಿದ್ದು, ಇಂದು ಮೂರನೇ ಹಂತದ ಹೋರಾಟವಾಗಿ ಬಂದ್ ಗೆ ಕರೆ ನೀಡಲಾಗಿತ್ತು. ಪಟ್ಟಣದ ಬಹುತೇಕ ಒಂದು ಸಮುದಾಯದ ಅಂಗಡಿ- ಮುಂಗಟ್ಟುಗಳು ಬಂದ್ ಆಗಿದ್ದು, ರಿಕ್ಷಾ ಸಂಚಾರ ಕೂಡ ವಿರಳವಾಗಿದೆ.












Click it and Unblock the Notifications