ಬಾಗಲಕೋಟೆ : ಅತ್ಯಾಚಾರಕ್ಕೆ ಯತ್ನ, ಬಾಲಕಿ ಆತ್ಮಹತ್ಯೆ
ಬಾಗಲಕೋಟೆ, ಅಕ್ಟೋಬರ್ 01 : ತನ್ನ ಮೇಲೆ ನಡೆದ ಅತ್ಯಾಚಾರದ ಯತ್ನದಿಂದ ಅವಮಾನ ತಾಳಲಾರದೆ 16 ವರ್ಷದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅತ್ಯಾಚಾರಕ್ಕೆ ಯತ್ನಿಸಿದ ವೆಂಕಪ್ಪ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತಪಟ್ಟ ಬಾಲಕಿಯನ್ನು ಸರೋಜಿನಿ ಎಂದು ಗುರುತಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಚನ್ನಾಳ ಗ್ರಾಮದಲ್ಲಿ ಈ ಘಟನೆ ನಡೆಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರು ದಿನಗಳ ಹಿಂದೆ ಗ್ರಾಮದ ವೆಂಕಪ್ಪ ಗಡ್ಡಿ (38) ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಸರೋಜಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ.

ಸರೋಜಿನಿ ತಂದೆ ಆಗ ವೆಂಕಪ್ಪನನ್ನು ಥಳಿಸಿ ಮಗಳನ್ನು ಬಚಾವ್ ಮಾಡಿದ್ದ. ಆದರೆ, ಈ ಅವಮಾನ ತಾಳಲಾರದ ಬಾಲಕಿ ಸೆಪ್ಟಂಬರ್ 29 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾತ್ರಿ ಎಲ್ಲರೂ ಮಲಗಿದ ವೇಳೆ ಮನೆಯಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾಳೆ.
ವೆಂಕಪ್ಪ ಮನೆ ಬಾಲಕಿ ಮನೆಯಿಂದ ಕೂಗಳತೆ ದೂರದಲ್ಲಿತ್ತು. ವೆಂಕಪ್ಪ ಸರೋಜಿನಿ ಜೊತೆ ಸಲುಗೆಯಿಂದ ಇದ್ದ. ಬಾಲಕಿಯನ್ನು ಸೊಸೆ ಎಂದು ಸಂಬೋಧಿಸುತ್ತಿದ್ದ. ನಿನ್ನ ಮಗಳನ್ನು ನಾನೇ ಮದುವೆಯಾಗುತ್ತೇನೆ ಒಂದು ಎಕರೆ ಆಸ್ತಿ ನೀಡುತ್ತೇನೆ ಎಂದು ವೆಂಕಪ್ಪ ಸರೋಜಿನಿ ತಂದೆಯ ಬಳಿ ಹೇಳಿದ್ದ.
ಆದರೆ, ಸರೋಜಿನಿ ತಂದೆ ಕುಡಿದ ಮತ್ತಿನಲ್ಲಿ ಹಾಸ್ಯ ಮಾಡುತ್ತಾನೆ ಎಂದು ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ವೆಂಕಪ್ಪ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದರಿಂದ ನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೆಂಕಪ್ಪನನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications