ಬಾಬಾಬುಡನ್ಗಿರಿ ವಿವಾದ ನೀವೇ ಬಗೆಹರಿಸಿಕೊಳ್ಳಿ: ಸುಪ್ರೀಂ
ನವದೆಹಲಿ, ಸೆಪ್ಟೆಂಬರ್.04: ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ಗಿರಿ ವಿವಾದದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಈ ವಿವಾದಕ್ಕೆ ಕರ್ನಾಟಕ ರಾಜ್ಯ ಸರ್ಕಾರವೇ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಧಾರ್ಮಿಕ ಆಚರಣೆ ಹೇಗಿರಬೇಕೆಂಬುದೂ ಸೇರಿದಂತೆ ವಿವಿಧ ಅಂಶಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಸುಪ್ರೀಂ ಕರ್ನಾಟಕ ಸರ್ಕಾರವೇ ನಿಭಾಯಿಸಬೇಕು ಎಂದು ತಿಳಿಸಿದೆ. ವಿವಾದಿತ ಸ್ಥಳದಲ್ಲಿ ಯಾವ ಬಗೆಯ ಆಚರಣೆ ಮಾಡಬೇಕು ಎಂಬುದನ್ನು ಜಿಲ್ಲಾಧಿಕಾರಿ ವರದಿ ಆಧರಿಸಿ ತೀರ್ಮಾನಕ್ಕೆ ಬರಬೇಕು ಎಂದು ತಿಳಿಸಿದೆ.

ರಾಜ್ಯ ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವ ಮುನ್ನ ಎರಡು ಕೋಮಿನ ಅಭಿಪ್ರಾಯ ಮತ್ತು ಆಕ್ಷೇಪ ಆಲಿಸಬೇಕು ಎಂದು ಸೂಚಿಸಿದೆ. ರಾಜ್ಯ ಸರ್ಕಾರ ಪ್ರಕರಣ ಇತ್ಯರ್ಥ ಪಡಿಸುವರೆಗೂ 1989ರಲ್ಲಿ ನೀಡಿರುವ ಆದೇಶದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ತಿಳಿಸಿದೆ.
ಸಿಟಿಜನ್ ಫಾರ್ ಜಸ್ಟಿಸ್ ಆಡ್ ಪೀಸ್ ಸಂಘಟನೆ ಮತ್ತು ಸಯ್ಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ.ರಂಜನ್ ಗೊಗೊಯ್ ಮತ್ತು ನ್ಯಾ.ಎನ್.ವಿ.ರಮಣ ನ್ಯಾಯಪೀಠ ಒಂದು ವೇಳೆ ಯಾವುದೇ ಧರ್ಮದ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರದ ತೀರ್ಮಾನ ಒಪ್ಪಿಗೆಯಾಗದೇ ಇದ್ದರೆ, ನ್ಯಾಯಾಲಯದ ಮೆಟ್ಟಿಲು ಏರಲು ಅವಕಾಶವಿದೆ ಎಂದು ತಿಳಿಸಿದೆ.
ಆದರೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ವಿವಾದಿತ ಸ್ಥಳವು ಹಿಂದೂ-ಮುಸ್ಲಿಮರ ಸೌಹಾರ್ದತೆಯ ಪ್ರತೀಕವಾಗಿದೆ. ಗುಹೆಯಲ್ಲಿ ನಿತ್ಯ ಪೂಜೆಗೆ ಅರ್ಚಕರ ನೇಮಕ ಮಾಡಬೇಕು ಅದರೊಂದಿಗೆ ಶಾಖಾದ್ರಿಯವರ ನೇತೃತ್ವದಲ್ಲಿ ಉರುಸ್ ಸಹ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಬಾಬಾಬುಡನ್ ಗಿರಿ ಎಲ್ಲಿದೆ?
ಚಿಕ್ಕಮಗಳೂರು ಜಿಲ್ಲೆಯಲ್ಲಿನ ಪರ್ವತ ಶ್ರೇಣಿ. ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಪವಿತ್ರ ಸ್ಥಳವಾಗಿ ಕಾಣಿಸಿಕೊಂಡು ಬಂದಿದೆ. ಮುಳ್ಳಯ್ಯನಗಿರಿ ಬಾಬಾ ಬುಡನ್ ಗಿರಿಯ ಸಾಲಿನಲ್ಲಿ ಬರುವ ಪ್ರವಾಸಿ ತಾಣ. ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಅತ್ಯಂತ ಎತ್ತರದ ಶಿಖರವಾಗಿದ್ದು ಚಾರಣಿಗಹರ ಸ್ವರ್ಗ ಎಂದೇ ಕರೆಸಿಕೊಂಡಿದೆ.











Click it and Unblock the Notifications