ಕಾಂಗ್ರೆಸ್ನ ಮತಬ್ಯಾಂಕ್ ಆಧಾರಿತ ಪಕ್ಷಪಾತ ನಡೆ ಕರುನಾಡನ್ನು ದಹಿಸುತ್ತಿದೆ - ಬಿ. ವೈ ವಿಜಯೇಂದ್ರ ಕಿಡಿ
ಮಂಡ್ಯ, ಸೆಪ್ಟೆಂಬರ್ 12: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಯುವಕರ ಗುಂಪೊಂದು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಂಡ್ಯದ ನಾಗಮಂಗಲ ಬದರಿಕೊಪ್ಪಲಿನಲ್ಲಿ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕಲ್ಲು ತೂರಾಟ ಆರಂಭವಾಗುತ್ತಿದ್ದಂತೆ ಹಿಂದೂ-ಮುಸ್ಲಿಂ ಯುವಕರ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ ಹಬ್ಬದ ಆಚರಣೆ ವೇಳೆ ಈ ರೀತಿಯ ಕಿಡಿಗೇಡಿ ಕೃತ್ಯ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಘಟನೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ನಾಗಮಂಗಲದಲ್ಲಿ ಗಣಪತಿ ವಿಸರ್ಜನೆಯ ವೇಳೆ ಕಲ್ಲು ತೂರಾಟ ನಡೆಸಿರುವ ಹಿಂದೂ ವಿರೋಧಿ ಮತಾಂದ ಕಿಡಿಗೇಡಿಗಳ ಅಟ್ಟಹಾಸದಿಂದ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು ಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಈ ಹಿಂದಿನ ವರ್ಷವೂ ಪುಂಡರು ಇದೇ ರೀತಿ ವರ್ತಿಸಿದ್ದ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತೆಯ ಕಟ್ಟೆಚ್ಚರ ವಹಿಸವಲ್ಲಿ ಎಚ್ಚರ ತಪ್ಪಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ನಮಗೆ ರಕ್ಷಣೆ ಸಿಗುತ್ತದೆ ಎಂಬ ದೃಢನಂಬಿಕೆ ವಿದ್ರೋಹಿ ಶಕ್ತಿಗಳು ವಿದ್ವಂಸಕ ಕೃತ್ಯಗಳನ್ನು ನಡೆಸಲು ಪ್ರಚೋದನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜನರ ಧಾರ್ಮಿಕ ಶ್ರದ್ಧೆಯನ್ನು ಘಾಸಿಗೊಳಿಸಲು ಶಾಂತಿಯುತ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ನಡೆದಿರುವ ಈ ಘಟನೆ ಹಿಂದೂ ಸಮುದಾಯವನ್ನು ಪ್ರಚೋದಿಸುವ ಕುಕೃತ್ಯವಾಗಿದೆ. ಸೌಹಾರ್ದತೆಯ ಸಮಾಜದಲ್ಲಿ ದಳ್ಳುರಿ ಹಚ್ಚಲು ಯತ್ನಿಸುತ್ತಿರುವ, ಹಿಂದೂ ಸಮುದಾಯದ ಆಚಾರ ವಿಚಾರಗಳನ್ನು ದಮನ ಮಾಡುವ ರೀತಿಯಲ್ಲಿ ವರ್ತಿಸಿರುವ ಹಾಗೂ ಭಾರತೀಯ ಪರಂಪರೆಯನ್ನು ಸದಾ ಕಾಲಕ್ಕೂ ಅಪಮಾನಿಸಲು ಯತ್ನಿಸುತ್ತಿರುವ ಉಗ್ರ ಮನಸ್ಥಿತಿಯ ವಿದ್ರೋಹಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದ್ದಾರೆ.
ನಾಗಮಂಗಲ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ಹಿಂದೂ ವಿರೋಧಿ ಚಟುವಟಿಕೆಗಳನ್ನು ಸಂಘಟಿಸುತ್ತಿರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸದೇ ಹೋದರೆ ಮುಂದಾಗುವ ಪರಿಣಾಮಗಳ ಹೊಣೆ ಕಾಂಗ್ರೆಸ್ ಸರ್ಕಾರವೇ ಹೊರಬೇಕಾಗುತ್ತದೆ. ಕಾಂಗ್ರೆಸ್ನ ಮತಬ್ಯಾಂಕ್ ಆಧಾರಿತ ಪಕ್ಷಪಾತ ನಡೆ ಕರುನಾಡನ್ನು ದಹಿಸುತ್ತಿದೆ ಎಂದಿದ್ದಾರೆ.












Click it and Unblock the Notifications