ಸಚಿವ ಶ್ರೀರಾಮುಲು ನೀಡಿದ ಮೂರು ಹೇಳಿಕೆ: ಏನಿದರ ಮುನ್ಸೂಚನೆ?
ಕೋವಿಡ್ ಮೊದಲನೇ ಅಲೆಯ ವೇಳೆ ಆರೋಗ್ಯ ಇಲಾಖೆಯನ್ನು ತಮ್ಮ ಕೈಯಿಂದ ಕಿತ್ತು, ಡಾ.ಸುಧಾಕರ್ ಅವರಿಗೆ ವಹಿಸಿದ ನಂತರ, ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ತಾನಾಯಿತು, ತನ್ನ ಕೆಲಸವಾಯಿತು ಎನ್ನುವಷ್ಟರ ಮಟ್ಟಿಗೆ ತಣ್ಣಗಾಗಿದ್ದಾರೆ.
ಬಳ್ಳಾರಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ನಂತರ, ಜಿಲ್ಲೆಯಲ್ಲಿ ಶ್ರೀರಾಮುಲು ಪ್ರಭಾವ ಕಮ್ಮಿಯಾಗುತ್ತಾ ಬರುತ್ತಿದೆ ಎನ್ನುವ ಮಾತೂ ಚಾಲ್ತಿಯಲ್ಲಿತ್ತು.
ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಹಲವು ವಿಷಯಗಳು ರಾಜ್ಯ ಬಿಜೆಪಿಯಲ್ಲಿ ತೀವ್ರ ಸದ್ದು ಮಾಡುತ್ತಿದ್ದ ವೇಳೆಯೂ ಶ್ರೀರಾಮುಲು, ಯಾವುದೆ ಕಾಂಟ್ರವರ್ಸಿಗೆ ತಮ್ಮನ್ನು ಸಿಲುಕಿಸಿಕೊಳ್ಳದೇ, ಜೊತೆಗೆ ಅಂತರವನ್ನೂ ಕಾಯ್ದುಕೊಂಡು ಬರುತ್ತಿರುವುದು ಗೊತ್ತಿರುವ ವಿಚಾರ.
ಒಂದು ದಿನದ ಹಿಂದೆ ಶ್ರೀರಾಮುಲು ಆಡಿರುವ ಮಾತು, ಬಿಜೆಪಿಯಲ್ಲಿ ತಮಗಾಗುತ್ತಿರುವ ಹಿನ್ನಡೆಯ ಹಿನ್ನಲೆ ಸಂಗೀತದಂತಿತ್ತು. ತಾಳಿದವನು ಬಾಳಿಯಾನು ಎನ್ನುವುದು ಒಟ್ಟಾರೆ ಶ್ರೀರಾಮುಲು ಮಾತಿನ ಸಾರಾಂಶ. ಶ್ರೀರಾಮುಲು ಹೇಳಿದ್ದೇನು?

ಕಾಂಗ್ರೆಸ್ಸಿನ ಪ್ರಚಾರ ವಾಹನದಲ್ಲಿ ಸಿದ್ದರಾಮಯ್ಯನವರ ಹೆಸರು/ಭಾವಚಿತ್ರವಿಲ್ಲ
"ಕಾಂಗ್ರೆಸ್ಸಿನ ಪ್ರಚಾರ ವಾಹನದಲ್ಲಿ ಸಿದ್ದರಾಮಯ್ಯನವರ ಹೆಸರು/ಭಾವಚಿತ್ರವನ್ನು ತೆಗೆದು ಹಾಕಿದ್ದಾರೆ ಎನ್ನುವುದು ಗೊತ್ತಾಗಿದೆ. ಅಲ್ಪಸಂಖ್ಯಾತ, ದಲಿತರು, ಹಿಂದುಳಿದ ವರ್ಗಗಳ ಮೇಲೆ ಕಾಳಜಿಯನ್ನು ಹೊಂದಿರುವ ದೊಡ್ಡ ನಾಯಕ ಸಿದ್ದರಾಮಯ್ಯನವರು. ಸಿಎಂ ಹುದ್ದೆಗೆ ಅವರು ಪೈಪೋಟಿ ಆಗುತ್ತಾರೆ ಎನ್ನುವುದಕ್ಕಾಗಿ ಅವರಿಗೆ ಅವಮಾನ ಮಾಡಲಾಗುತ್ತಿದೆ"ಎಂದು ಶ್ರೀರಾಮುಲು ಹೇಳಿದ್ದಾರೆ.

ಕಾರಜೋಳ ಅವರನ್ನು ಡಿಸಿಎಂ ಮಾಡಲಾಗಿದೆ, ನಮ್ಮನ್ನೂ ಮಾಡಬಹುದು
ಬಿಜೆಪಿಯಲ್ಲಿ ಒಂದು ಸಂಸ್ಕೃತಿಯಿದೆ. ಹಿಂದುಳಿದ ವರ್ಗ/ದಲಿತರಿಗೆ ಯಾವತ್ತೂ ನಮ್ಮಲ್ಲಿ ಅನ್ಯಾಯವಾಗಿಲ್ಲ. ಈಗಲೂ ಕೂಡಾ ಕಾಲಾವಕಾಶ ಮೀರಿಲ್ಲ, ಹೈಕಮಾಂಡ್ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೋ ಅಲ್ಲಿಯವರೆಗೆ ಕಾಯುವಂತಹ ಕೆಲಸವಾಗಬೇಕು. ಕಾರಜೋಳ ಅವರನ್ನು ಡಿಸಿಎಂ ಮಾಡಲಾಗಿದೆ, ನಮ್ಮನ್ನೂ ಆ ಹುದ್ದೆಗೆ ತರಲು ಸಮಯಕ್ಕೋಸ್ಕರ ಕಾಯುತ್ತಿರಬಹುದು" ಎಂದು ಶ್ರೀರಾಮುಲು ಹೇಳಿದ್ದಾರೆ.

ನೀಡಿದ ವಾಗ್ದಾನದಂತೆ ಹೈಕಮಾಂಡ್ ನಡೆದುಕೊಳ್ಳುತ್ತದೆ
"ನಮ್ಮ ಸರಕಾರ ಅಧಿಕಾರಕ್ಕೆ ಬರುವ ವೇಳೆ ನೀಡಿದ ವಾಗ್ದಾನದಂತೆ ಹೈಕಮಾಂಡ್ ನಡೆದುಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ. ಆದರೆ, ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ರಾಜಕೀಯದಲ್ಲಿ ಕಾಯುವುದೇ ಒಂದು ಕೆಲಸ. ನಮ್ಮ ಹಿರಿಯರು ನಮಗೆ ಅದನ್ನು ಕಲಿಸಿಕೊಟ್ಟಿದ್ದಾರೆ"ಎಂದು ಶ್ರೀರಾಮುಲು ಹೇಳುವ ಮೂಲಕ ಡಿಸಿಎಂ ಹುದ್ದೆಯನ್ನು ನೀಡಲಾಗುತ್ತದೆ ಎನ್ನುವ ಭರವಸೆಯನ್ನು ಹೈಕಮಾಂಡ್ ನೀಡಿದ್ದರು ಎಂದು ಪರೋಕ್ಷವಾಗಿ ಶ್ರೀರಾಮುಲು ಹೇಳಿದ್ದಾರೆ.
Recommended Video

ಸಚಿವ ಶ್ರೀರಾಮುಲು ನೀಡಿದ ಮೂರು ಹೇಳಿಕೆ: ಏನಿದರ ಮುನ್ಸೂಚನೆ?
"ರಮೇಶ್ ಜಾರಕಿಹೊಳಿಯವರು ನಮ್ಮ ಸಹೋದರರು, ಎಲ್ಲಾ ವಿಚಾರವನ್ನು ಅವರು ಕಾನೂನಾತ್ಮಕವಾಗಿ ಎದುರಿಸುವಂತಹ ಕೆಲಸವನ್ನು ಮಾಡುತ್ತಾರೆ"ಎಂದು ಶ್ರೀರಾಮುಲು ಈ ಸಂದರ್ಭದಲ್ಲಿ ಹೇಳಿದ್ದಾರೆ. ಆ ಮೂಲಕ, ತಾನಿನ್ನೂ ಡಿಸಿಎಂ ಹುದ್ದೆಯ ಆಕಾಂಕ್ಷಿ ಜೊತೆಗೆ ಅದಕ್ಕಾಗಿ ಕಾಯುತ್ತಿದ್ದೇನೆ ಎನ್ನುವುದನ್ನು ಶ್ರೀರಾಮುಲು ಸಾರಿದ್ದಾರೆ. ಜೊತೆಗೆ, ಸಿದ್ದರಾಮಯ್ಯನವರನ್ನು ಹೊಗಳುವ ಮೂಲಕ, ಬಿಜೆಪಿ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.











Click it and Unblock the Notifications