ಪಾದರಾಯನಪುರದ ಪುಂಡರ ಶಿಫ್ಟಿಂಗ್: ಕುಮಾರಸ್ವಾಮಿ ನಿಲುವನ್ನು ಸಮರ್ಥಿಸಿಕೊಂಡ ಸಚಿವ ಶ್ರೀರಾಮುಲು
ಬೆಂಗಳೂರು, ಏಪ್ರಿಲ್ 25: ಪಾದರಾಯನಪುರದ ಪುಂಡರನ್ನು ರಾಮನಗರ ಜೈಲಿಗೆ ಕಳುಹಿಸಿ, ಅಲ್ಲಿಂದ ಬೆಂಗಳೂರಿಗೆ ವಾಪಸ್ ಕರೆಸಿಕೊಂಡ ವಿದ್ಯಮಾನ, ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
Recommended Video
ಗ್ರೀನ್ ಝೋನ್ ನಲ್ಲಿರುವ ರಾಮನಗರಕ್ಕೆ ಪಾದರಾಯನಪುರದ ಕಿಡಿಗೇಡಿಗಳನ್ನು ಸ್ಥಳಾಂತರಿಸಿದ್ದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕುಮಾರಸ್ವಾಮಿಯವರ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. "ಕುಮಾರಸ್ವಾಮಿಯವರ ಹೇಳಿಕೆ ಸರಿಯಾಗಿಯೇ ಇದೆ" ಎಂದು ಸಚಿವರು ಹೇಳುವ ಮೂಲಕ, ಸರಕಾರಕ್ಕೆ ಮುಜುಗರ ತಂದಿದ್ದಾರೆ.

"ರಾಮನಗರ ಜಿಲ್ಲೆಗೆ ಆರೋಪಿಗಳನ್ನು ಸ್ಥಳಾಂತರಿಸಿದರೆ ಅಲ್ಲಿಗೂ ಸೋಂಕು ಹರಡಬಹುದು ಎನ್ನುವುದು ಕುಮಾರಸ್ವಾಮಿಯವರ ನಿಲುವಾಗಿದೆ. ರಾಮನಗರ ಗ್ರೀನ್ ಝೋನ್ ನಲ್ಲಿದೆ".
"ಹಾಗಾಗಿ, ಅಲ್ಲಿಗೆ ಆರೋಪಿಗಳನ್ನು ಶಿಫ್ಟ್ ಮಾಡಿದರೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿ ಕುಮಾರಸ್ವಾಮಿಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಆಕ್ಷೇಪ ಸರಿಯಾಗಿಯೇ ಇದೆ" ಎಂದು ಶ್ರೀರಾಮುಲು ಹೇಳಿದ್ದಾರೆ.
"ಪಾದರಾಯನಪುರದ ಘಟನೆಯಲ್ಲಿನ ಬಂಧಿತರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿರುವ ನಿರ್ಧಾರ ಬಂಧೀಖಾನೆ ಡಿಜಿಪಿ ಅಲೋಕ್ ಮೋಹನ್ ಅವರದ್ದು. ಅಲೋಕ್ ಮೋಹನ್ ಅವರಿಗೆ ಹಿಂದಿನಿಂದಲೂ ನನ್ನ ಮೇಲೆ ಸಿಟ್ಟಿದೆ. ನನ್ನ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ರಾಮನಗರದ ನನ್ನ ಜನತೆಗೆ ತೊಂದರೆಯನ್ನು ಕೊಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ಕಿಡಿಕಾರಿದ್ದರು.
"ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ಪಾದರಾಯನಪುರದ ಗಲಭೆಕೋರರ ಪೈಕಿ ಇಬ್ಬರಿಗೆ ಕೊರೋನಾ ವೈರಸ್ ತಗುಲಿರುವ ಪಾಸಿಟಿವ್ ವರದಿ ಬಂದಿದೆ. ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ" ಎಂದು ಕುಮಾರಸ್ವಾಮಿ ಎಚ್ಚರಿಸಿದ್ದರು.












Click it and Unblock the Notifications