ಅಯೋಧ್ಯೆ ರಾಮಮಂದಿರ ದೇಣಿಗೆ ಸಂಗ್ರಹ: ಎಚ್ಡಿಕೆ ಆರೋಪ ನಿಜವಾದರೆ ಎಂತಹ ದುರಂತ!
ಬಹುತೇಕ ಹಿಂದೂಗಳ ಕನಸಿನ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ. ದೇವಾಲಯ ನಿರ್ಮಾಣಕ್ಕೆ ಬೇಕಾಗಿರುವ ಅಂದಾಜು ಮೊತ್ತ ಈಗಾಗಲೇ ಸಂಗ್ರಹವಾಗಿದೆ.
ದೇವಾಲಯ ನಿರ್ಮಾಣಕ್ಕೆ ಬೇಕಾಗಿರುವ 1,100 ಕೋಟಿ ಹಣಕ್ಕಿಂತ ಹೆಚ್ಚು ನಿಧಿ ಸಂಗ್ರಹವಾಗಿದೆ ಎಂದು ರಾಮಜನ್ಮಭೂಮಿ ಟ್ರಸ್ಟಿನ ಸದಸ್ಯರಾಗಿರುವ ಉಡುಪಿ ಪೇಜಾವರ ಮಠದ ಶ್ರೀಗಳು ಹೇಳಿಕೆಯನ್ನು ನೀಡಿದ್ದಾರೆ.
ಜನವರಿ ಹದಿನೈದರಿಂದ ಆರಂಭವಾಗಿರುವ ಈ ನಿಧಿ ಅಭಿಯಾನ ಫೆಬ್ರವರಿ 27ರವರೆಗೂ ನಡೆಯಲಿದೆ. ಜಾತ್ಯಾತೀತವಾಗಿ ಈ ಅಭಿಯಾನಕ್ಕೆ ಕೈಜೋಡಿಸಿರುವ ಸುದ್ದಿಗಳು ಹೊರಬರುತ್ತಲೇ ಇವೆ.
ಇವೆಲ್ಲದರ ನಡುವೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್ ಒಂದು ಭಾರೀ ಸಂಚಲನವನ್ನು ಮೂಡಿಸಿದೆ. ಸಾಕ್ಷ್ಯಾಧಾರಿತವಾಗಿ ಎಚ್ಡಿಕೆ ಈ ಹೇಳಿಕೆಯನ್ನು ನೀಡಿದ್ದೇ ಆದಲ್ಲಿ, ಇದೊಂದು ದುರಂತವೇ ಸರಿ..
|
ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಡದವರ ಮನೆ ಗುರುತು ಮಾಡುತ್ತಿರುವುದು
"ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ"ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ನಾಜಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ
"ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಆರೆಸ್ಸೆಸ್ ಕೂಡ ಆ ನೀತಿಗಳನ್ನೇ ಜಾರಿ ಮಾಡಿದರೆ ಮುಂದೇನಾಗುತ್ತದೆಂಬ ಆತಂಕವಿದೆ. ದೇಶದಲ್ಲಿ ಮೂಲಭೂತ ಹಕ್ಕನ್ನೇ ಕಸಿಯಲಾಗುತ್ತಿದೆ. ಸ್ವತಂತ್ರವಾಗಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇದು ಅಘೋಷಿತ ತುರ್ತು ಪರಿಸ್ಥಿತಿ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಏನು ಬೇಕಾದರೂ ಆಗಬಹುದು
"ಯಾರೊಬ್ಬರೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳು ಸರ್ಕಾರದ ಭಾವನೆಗಳನ್ನು ಎತ್ತಿಹಿಡಿದರೆ ಯಾರಿಗೆ ಏನಾಗುತ್ತದೆಯೋ ಗೊತ್ತಿಲ್ಲ.ಇನ್ನೂ ಜನಸಾಮಾನ್ಯರ ಪರಿಸ್ಥಿತಿ ಏನಾಗಬಹುದು? ವಾತಾವರಣವನ್ನು ನೋಡಿದಾಗ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಂತೂ ನಿಚ್ಚಳವಾಗಿದೆ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಅಪ್ಪಟ ದೈವೀಭಕ್ತ ಕುಟುಂಬದ ಹಿನ್ನಲೆಯುಳ್ಳ ಕುಮಾರಸ್ವಾಮಿ
ಕುಮಾರಸ್ವಾಮಿಯವರು ಬಲವಾದ ಮಾಹಿತಿಯಿಂದ ಈ ರೀತಿಯ ಟ್ವೀಟ್ ಅನ್ನು ಮಾಡಿದ್ದಾರೋ ಎನ್ನುವುದಕ್ಕೆ ಸದ್ಯಕ್ಕೆ ಉತ್ತರವಿಲ್ಲದಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಇವರ ಈ ಹೇಳಿಕೆ ವ್ಯಾಪಕ ಚರ್ಚೆಗೆ ಒಳಗಾಗುವುದಂತೂ ಹೌದು. ಅಪ್ಪಟ ದೈವೀಭಕ್ತ ಕುಟುಂಬದ ಹಿನ್ನಲೆಯುಳ್ಳ ಕುಮಾರಸ್ವಾಮಿಯವರ ಈ ಮಾತಿನ ಹಿಂದಿನ ಸತ್ಯಾಸತ್ಯತೆ ಮತ್ತು ಮರ್ಮ ಇನ್ನು ಗೊತ್ತಾಗಬೇಕಿದೆ.












Click it and Unblock the Notifications