ತಪ್ಪಾಗಿದೆ ಒಪ್ಪಿಕೊಂಡಿದ್ದೇವೆ; ಪ್ರಕರಣ ಕೈಬಿಡಿ: ಶರಣಾದ ಬಿಜೆಪಿ
Recommended Video
ಬೆಂಗಳೂರು, ಫೆಬ್ರವರಿ 12: ಈ ಪ್ರಕರಣವನ್ನು ದೊಡ್ಡದು ಮಾಡುವುದು ಬೇಡ. ತಪ್ಪಾಗಿದೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಪ್ರಕರಣವನ್ನು ಕೈಬಿಡಿ. ಇದರ ಬಗ್ಗೆ ಎಸ್ಐಟಿ ತನಿಖೆ ಮಾಡುವುದರಿಂದ ಯಾವುದೇ ಉದ್ದೇಶವನ್ನು ಸಾಧಿಸಿದಂತೆ ಆಗುವುದಿಲ್ಲ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಹೇಳಿದರು.
ಮಂಗಳವಾರ ಅಧಿವೇಶನದಲ್ಲಿ ಮಾತನಾಡಿದ ಅವರು, ಒಂದು ವೇಳೆ ವಿಶೇಷ ತನಿಖಾದಳದ ತನಿಖೆ ನಡೆಯುವುದಾದರೆ ಅದಕ್ಕೆ ಮಾಹಿತಿ ನೀಡುವವರು ಯಾರು? ಪೊಲೀಸರಿಗೆ ಗೆಳೆತನ ಒಳ್ಳೆಯದಲ್ಲ. ವೈರತ್ವ ಕೂಡ ಒಳಿತಲ್ಲ. ಸದನದ ಸಂಗತಿಯನ್ನು ಸದನದಲ್ಲಿಯೇ ಬಗೆಹರಿಸಿಕೊಳ್ಳಬೇಕು. ಅದನ್ನು ನ್ಯಾಯಾಲಯದವರೆಗೆ ಕೊಂಡೊಯ್ಯುವುದು ಬೇಡ. ಪ್ರಕರಣವನ್ನು ದೊಡ್ಡದು ಮಾಡಬೇಡಿ ಎಂದು ಮನವಿ ಮಾಡಿದರು.
ಒಂದೇ ವೇಳೆ ತನಿಖೆ ನಡೆಯಲೇಬೇಕು ಎಂದಾದರೆ, ಎಸ್ಐಟಿ ತನಿಖೆ ಬೇಡ. ಸದನ ಸಮಿತಿ ರಚಿಸಿ ಅಥವಾ ನ್ಯಾಯಾಂಗದ ತನಿಖೆ ಮೂಲಕ ವಿಚಾರಣೆ ನಡೆಸಲಿ ಎಂದರು.
ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿದ ಶ್ರೀರಾಮುಲು: ಕಾಂಗ್ರೆಸ್ ಆಕ್ರೋಶ
ವಿಶೇಷ ತನಿಖಾ ದಳದಿಂದ ತನಿಖೆ ನಡೆಸಿ 15 ದಿನಗಳ ಒಳಗೆ ವರದಿ ಬಹಿರಂಗಪಡಿಸಬೇಕು ಎಂದ ತಮ್ಮ ತೀರ್ಮಾನವನ್ನು ಮರುಪರಿಶೀಲಿಸಬೇಕು ಎಂದು ಮಾಧುಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕೋರಿದರು.
ಮೊದಲ ಪ್ರಕರಣ ಆಗುತ್ತದೆ
ಸದನಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ ವಹಿಸಿದ ನಿದರ್ಶನ ದೇಶದಲ್ಲಿ ಇಲ್ಲ. ಹೀಗಾದರೆ ಇದು ದೇಶದ ಇತಿಹಾಸದಲ್ಲಿಯೇ ಮೊದಲ ಪ್ರಕರಣ ಎನಿಸುತ್ತದೆ. ಹೀಗಾಗಿ ಇಂತಹ ಕಪ್ಪುಚುಕ್ಕೆಗೆ ನಾವು ಉದಾಹರಣೆಯಾಗುವುದು ಬೇಡ. ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೋರಿದರು.
ಎಸ್ಐಟಿ ತನಿಖೆಯೇ ಸರಿ, ನ್ಯಾಯಾಂಗ ತನಿಖೆ ಸಾಧ್ಯವಿಲ್ಲ: ರಮೇಶ್ ಕುಮಾರ್ ಸ್ಪಷ್ಟನೆ
ನಾರಾಯಣಗೌಡ ಬಂಧನದಲ್ಲಿ
ಚಿಕಿತ್ಸೆಗೆಂದು ಮುಂಬೈಗೆ ತೆರಳಿದ್ದ ನಮ್ಮ ಶಾಸಕ ನಾರಾಯಣಗೌಡರನ್ನು ಬಂಧನದಲ್ಲಿ ಇರಿಸಿದ್ದಾರೆ. ಅವರ ಸಂಬಂಧಿಕರನ್ನೂ ನೋಡಲು ಬಿಡುತ್ತಿಲ್ಲ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದರು.
ವಿಧಾನಸಭೆ ಅಧಿವೇಶನದ ವೇಳೆ ಮಾತನಾಡಿದ ಅವರು, ನಾರಾಯಣಗೌಡರನ್ನು ಯಾರು ಬಂಧಿಸಿಟ್ಟಿದ್ದಾರೆಂದು ನಮಗೆ ಗೊತ್ತಿಲ್ಲ. ಆದರೆ, ಅವರನ್ನು ಅಲ್ಲಿಂದ ಹೊರಕ್ಕೆ ಕರೆದುಕೊಂಡು ಬರಲು ಆಗುತ್ತಿಲ್ಲ ಎಂದು ಅವರು ಹೇಳಿದರು.
ಎಲ್ಲಾ ಚರ್ಚೆಗೂ, ತನಿಖೆಗೂ ಸಿದ್ಧ: ಬಿಜೆಪಿಗೆ ಕುಮಾರಸ್ವಾಮಿ ಸವಾಲು
ಬಿಜೆಪಿಗೆ ಶಾಪ ತಟ್ಟುತ್ತದೆ
ಸಮ್ಮಿಶ್ರ ಸರ್ಕಾರ ರಚನೆಯಾದ ಕಳೆದ ಎಂಟು ತಿಂಗಳಿನಿಂದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿಯವರು ತೀವ್ರ ಕಿರುಕುಳ ನೀಡಿದ್ದಾರೆ. ಇದರಿಂದ ಹೆಚ್ಚಿನ ಸಂಖ್ಯೆಯ ಶಾಸಕರು ನೊಂದಿದ್ದಾರೆ. ಇದರ ಶಾಪ ಬಿಜೆಪಿಯವರಿಗೆ ತಟ್ಟುತ್ತದೆ ಎಂದು ಶಿವಲಿಂಗೇಗೌಡ ಕಿಡಿಕಾರಿದರು.
ಆಪರೇಷನ್ ಕಮಲ ನಡೆಸಲು ಸಭಾಧ್ಯಕ್ಷರನ್ನೇ ಬುಕ್ ಮಾಡಲಾಗಿದೆ ಎಂದು ಆರೋಪಿಸಿರುವುದು ನಮಗೆ ಬಹಳ ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಕರಣ ಬಿಡಲು ಹೇಗೆ ಸಾಧ್ಯ?
ಆಡಿಯೋ ಪ್ರಕರಣವು ದೇವದುರ್ಗದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆ ಇಡೀ ರಾಜ್ಯದ ರಾಜಕೀಯ ಸನ್ನಿವೇಶವನ್ನೇ ಅಸ್ಥಿರಗೊಳಿಸುವ ಪ್ರಯತ್ನವಾಗಿದೆ. ಈ ಕೆಟ್ಟ ಕೃತ್ಯದಲ್ಲಿ ಸಭಾಧ್ಯಕ್ಷರನ್ನು ಎಳೆದು ತಂದಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪ್ರಧಾನಿಯವರ ಹೆಸರನ್ನು ತರಲಾಗಿದೆ, ನ್ಯಾಯಮೂರ್ತಿಗಳ ಹೆಸರನ್ನು ಸಹ ಎಳೆದು ತರಲಾಗಿದೆ. ಇಂತಹ ಗಂಭೀರ ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ಮಾತೆತ್ತಿದರೆ ಈ ಸರ್ಕಾರದಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇನ್ನು ಯಾವ ಸರ್ಕಾರವನ್ನು ತರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬಿಐ ಮೋದಿ ರಚಿಸಿದ್ದೇ?
ಎಸ್ಐಟಿಗೆ ಪ್ರಕರಣವನ್ನು ವಹಿಸುವ ವಿಚಾರದ ಬಗ್ಗೆ ಬಿಜೆಪಿ ಶಾಸಕರ ವಿರೋಧಕ್ಕೆ ಸಚಿವ ಆರ್ ವಿ ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಯೊಂದು ಸಂಸ್ಥೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ ಎಂದು ಅಸಮಾಧಾನ ಪ್ರದರ್ಶಿಸಿದರು.
ವಿಶೇಷ ತನಿಖಾ ದಳವು ಮುಖ್ಯಮಂತ್ರಿ ಅವರ ಅಧೀನದಲ್ಲಿ ಬರುತ್ತದೆ ನಿಜ. ಆದರೆ, ಅದನ್ನು ಅವರೇ ರಚಿಸಿದ್ದಾರಾ? ಸಿಬಿಐ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುತ್ತದೆ. ಹಾಗಾದರೆ ಅದನ್ನು ಮೋದಿ ಅವರು ಸೃಷ್ಟಿಮಾಡಿದ್ದೇ? ಎಂದು ಪ್ರಶ್ನಿಸಿದರು.