ಬೆಳಗಾವಿ ಅಧಿವೇಶನ : ಕೊನೆಯ ದಿನದ ಕಲಾಪದ ಮುಖ್ಯಾಂಶಗಳು
ಬೆಳವಾವಿ, ಜುಲೈ 10 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿದ್ದ ಮುಂಗಾರು ಅಧಿವೇಶನ ಶುಕ್ರವಾರ ಮಧ್ಯಾಹ್ನ ಅಂತ್ಯಗೊಂಡಿದೆ. ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದ್ದು, ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರದಿಂದ ಕಲಾಪಗಳು ನಡೆಯಲಿವೆ.
ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ಆರಂಭವಾದ ವಿಧಾನಸಭೆ ಮತ್ತು ಪರಿಷತ್ ಕಲಾಪ ಮಧ್ಯಾಹ್ನ 2 ಗಂಟೆಗೆ ಅಂತ್ಯಗೊಂಡಿತು. ಈ ಮೂಲಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿದ್ದ ಕಲಾಪ ಅಂತ್ಯಗೊಂಡಿತು. ಸೋಮವಾರದಿಂದ 10 ದಿನಗಳ ಕಾಲ ಬೆಂಗಳೂರಿನಲ್ಲಿ ಅಧಿವೇಶನ ನಡೆಯಲಿದೆ. [ಗುರುವಾರದ ಕಲಾಪದ ಮುಖ್ಯಾಂಶಗಳು]

ಆಗಸ್ಟ್ಗೆ ಶಿರಾಡಿ ಘಾಟ್ ಸಂಚಾರ ಮುಕ್ತ : ಮಳೆಯ ಕಾರಣ ಶಿರಾಡಿ ಘಾಟ್ ರಸ್ತೆ ಕಾಂಕ್ರಿಟ್ ಕಾಮಗಾರಿ ವಿಳಂಬವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿ ಮುಗಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ವಿಧಾನಸಭೆಗೆ ತಿಳಿಸಿದ್ದಾರೆ. [ಶಿರಾಡಿ ಘಾಟ್ ಸಂಚಾರಕ್ಕೆ ಹೊಸ ಮುಹೂರ್ತ]
ಇಲಾಖೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿರಾಡಿ ಘಾಟ್ ಕಾಮಗಾರಿ ಜೂನ್ ತಿಂಗಳಿನಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಏಪ್ರಿಲ್ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವರು ವಿವರಣೆ ನೀಡಿದರು.
8 ಪಥದ ಕಲ್ಯಾಣ ರಸ್ತೆ ಅಭಿವೃದ್ಧಿ : ಚಾಮರಾಜನಗರದಿಂದ ಬೀದರ್ ತನಕ 8 ಪಥದ ಕಲ್ಯಾಣಪಥ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿಧಾನಸಭೆಯಲ್ಲಿ ಹೇಳಿದ್ದಾರೆ. ಶುಕ್ರವಾರದ ಕಲಾಪದಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ಇದು ದೇಶದಲ್ಲೇ ಎರಡನೇ ಅತಿ ಉದ್ದವಿರುವ ರಾಷ್ಟ್ರೀಯ ಹೆದ್ದಾರಿಯಾಗಿದೆ.
ಬೀದರ್, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು ಸಂಪರ್ಕಿಸುವ ಈ ರಸ್ತೆ 600 ಕಿ.ಮೀ.ಉದ್ದವಿದೆ ಎಂದರು. ಈ ಹೆದ್ದಾರಿ ಎಂಟು ವಿಭಾಗಗಳನ್ನು ಹೊಂದಿದೆ. ಈಗಾಗಲೇ ಎರಡು ವಿಭಾಗದ ಅಭಿವೃದ್ಧಿಗೆ ಮಂಜೂರಾತಿ ಸಿಕ್ಕಿದೆ. ಇನ್ನೆರಡು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಿಂದಿನ ಯುಪಿಎ ಸರ್ಕಾರ ಮತ್ತು ಈಗಿನ ಎನ್ಡಿಎ ಸರ್ಕಾರ ಈ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಿವೆ ಎಂದು ಸಚಿವರು ಹೇಳಿದರು.
ಪ್ರವಾಸಿ ಮಂದಿರ ದನದ ಕೊಟ್ಟಿಗೆಯಂತಾಗಿದೆ : ಪ್ರವಾಸಿ ಮಂದಿರಗಳು ಸೂಕ್ತ ನಿರ್ವಹಣೆ ಇಲ್ಲದೆ ದನದ ಕೊಟ್ಟಿಗೆಯಂತಾಗಿವೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಇಲ್ಲವೇ ಖಾಸಗಿ ಅವರಿಗೆ ವಹಿಸಿಕೊಡಿ ಎಂದು ಬಿಜೆಪಿ ಸದಸ್ಯ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಹೇಳಿದರು.
ಲೋಕೋಪಯೋಗಿ ಇಲಾಖೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಹಿಂದೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಪ್ರವಾಸಿ ಮಂದಿರಗಳಲ್ಲಿ ಉಳಿಯುತ್ತಿದ್ದರು, ಆದ್ದರಿಂದ ಅವು ಸಾರ್ವಜನಿಕರ ಸಂಪರ್ಕ ಕೇಂದ್ರಗಳಾಗಿದ್ದವು. ಆದರೆ, ಇಂದು ಸೂಕ್ತ ನಿರ್ವಹಣೆ ಇಲ್ಲದೇ ದನದ ಕೊಟ್ಟಿಗೆಯಂತಾಗಿದೆ' ಎಂದರು.












Click it and Unblock the Notifications