ಜುಲೈ 10ರಿಂದ ಕೆಲಸ ನಿಲ್ಲಿಸಿ ಆಶಾ ಕಾರ್ಯಕರ್ತೆಯರ ಮುಷ್ಕರ
ಬೆಂಗಳೂರು, ಜುಲೈ 06 : "ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಜುಲೈ 10ರಿಂದ ಅನಿರ್ದಿಷ್ಟವಾಗಿ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ" ಎಂದು ಡಿ. ನಾಗಲಕ್ಷ್ಮೀ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಈ ಕುರಿತು ಮಾಹಿತಿ ನೀಡಿದರು. "ಸರ್ಕಾರವು 3 ಸಾವಿರ ರೂ. ಗೌರವಧನವನ್ನು ಎಲ್ಲರಿಗೂ ಕೊಟ್ಟಿಲ್ಲ. ಕೆಲವು ಕಡೆ ಕೊಟ್ಟ ಚೆಕ್ಗಳು ಹಣವಿಲ್ಲದೆ ಕ್ಯಾಷ್ ಆಗಿಲ್ಲ" ಎಂದು ದೂರಿದರು.
"ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಜೂನ್ 30ರಂದು ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಆರೋಗ್ಯ ಸಚಿವರು, ಶಾಸಕರಿಗೂ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕಿತು" ಎಂದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ, ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಹೋರಾಟ ಮುಂದುವರೆಸಲು ತೀರ್ಮಾನಿಸಲಾಗಿದೆ.
"ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ನಮ್ಮ ಸೇವೆಗೆ ಪ್ರಶಂಸೆಯೊಂದೇ ಬೇಡ. ಅದರಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ. ನಮ್ಮ ಮೇಲೆ ನಿಜವಾದ ಗೌರವ ಇದ್ದರೆ ಅಗತ್ಯ ಸೌಲಭ್ಯಗಳನ್ನು ನೀಡಿ. 12 ಸಾವಿರ ಗೌರವ ಧನವನ್ನು ಖಾತ್ರಿಪಡಿಸಿ" ಎಂದು ಡಿ. ನಾಗಲಕ್ಷ್ಮೀ ಸರ್ಕಾರವನ್ನು ಒತ್ತಾಯಿಸಿದರು.












Click it and Unblock the Notifications