ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶ್ಯಾಂ ಭಟ್ಗೆ ಬಂಧನ ಭೀತಿ
ಬೆಂಗಳೂರು, ಅಕ್ಟೋಬರ್ 23 : ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶ್ಯಾಂ ಭಟ್ಗೆ ಬಂಧನದ ಭೀತಿ ಎದುರಾಗಿದೆ. ವಂಚನೆ ಪ್ರಕರಣದಲ್ಲಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿತ್ತು.
ಬಂಧನ ಭೀತಿಯಲ್ಲಿದ್ದ ಶ್ಯಾಂ ಭಟ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಂಡಿದ್ದು, ಪೊಲೀಸರು ಶ್ಯಾಂ ಭಟ್ ಬಂಧಿಸಬಹುದಾಗಿದೆ. ಅವರಿಗಾಗಿ ಪೊಲೀಸರು ಹಡುಕಾಟ ನಡೆಸುತ್ತಿದ್ದಾರೆ ಎಂದು ವರದಿಗಳಾಗಿವೆ.
ಕೆಪಿಎಸ್ಯ ಮಾಜಿ ಅಧ್ಯಕ್ಷ ಶ್ಯಾಂ ಭಟ್, ಜೆಡಿಎಸ್ ಮುಖಂಡ ಧನರಾಜ್, ಪ್ರದೀಪ್ ವಂಚನೆ ಪ್ರಕರಣದಲ್ಲಿ ಆರೋಪಿಗಳು. ಧನರಾಜ್ರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಏನಿದು ಪ್ರಕರಣ?
ಸಶಸ್ತ್ರ ಮೀಸಲು ಪಡೆ ನಿವೃತ್ತ ಸಬ್ ಇನ್ಸ್ಪೆಕ್ಟರ್ ಸಿದ್ದಯ್ಯ ಶ್ಯಾಂ ಭಟ್ ಸೇರಿದಂತೆ ಇತರ ಇಬ್ಬರ ವಿರುದ್ಧ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂಬುದು ದೂರಿನ ಮುಖ್ಯಾಂಶ.

20 ಲಕ್ಷ ರೂಪಾಯಿಗಾಗಿ ಬೇಡಿಕೆ
ನಿವೃತ್ತ ಸಬ್ ಇನ್ಸ್ಪೆಕ್ಟರ್ ಸಿದ್ದಯ್ಯಗೆ ಪ್ರದೀಪ್ ಎಂಬುವವರ ಮೂಲಕ ಧನರಾಜ್ ಪರಿಚಯವಾಗಿತ್ತು. ಆತ ಶ್ಯಾಂ ಭಟ್ ನನಗೆ ಸ್ನೇಹಿತರು. 20 ಲಕ್ಷ ಕೊಟ್ಟರೆ ನೇರವಾಗಿ ಭೇಟಿ ಮಾಡಿಸಿ ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಹೇಳಿದ್ದರು. ಸಿದ್ದಯ್ಯ 10 ಲಕ್ಷ ರೂ. ಹಣವನ್ನು ಮುಂಗಡವಾಗಿ ಕೊಟ್ಟಿದ್ದರು.

ಶ್ಯಾಂ ಭಟ್ಗೆ 10 ಲಕ್ಷ ರೂ. ಹಣ
ಸಿದ್ದಯ್ಯ ಕೊಟ್ಟ 10 ಲಕ್ಷ ಹಣವನ್ನು ಶ್ಯಾಂ ಭಟ್ಗೆ ನೀಡಿದ್ದೇವೆ ಎಂದು ಪ್ರಕರಣದ ಇತರ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸಿದ್ದಯ್ಯ ಮಗನಿಗೆ ಕೆಲಸ ಸಿಗದ ಕಾರಣ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. 3 ಲಕ್ಷ ರೂ. ಹಣವನ್ನು ಮಾತ್ರ ವಾಪಸ್ ಕೊಡಲಾಗಿದೆ. ಇನ್ನೂ 7 ಲಕ್ಷ ಹಣ ವಾಪಸ್ ಕೊಟ್ಟಿಲ್ಲ.

ಬಂಧನ ವಾರೆಂಟ್ ಜಾರಿ
ವಂಚನೆ ಪ್ರಕರಣದಲ್ಲಿ ಶ್ಯಾಂ ಭಟ್ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದಾರೆ. ಶ್ಯಾಂ ಭಟ್ ಎಲ್ಲಿದ್ದಾರೆ? ಎಂದು ಪೊಲೀಸರು ಹುಡುಕಾಟ ನಡೆಸಿದ್ದು, ಅವರನ್ನು ಬಂಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications