'ಪರಮೇಶ್ವರ ನಾಯ್ಕರೇ ನಿಮ್ಮ ರಾಜೀನಾಮೆ ಯಾವಾಗ?'
ಬೆಂಗಳೂರು, ಜೂನ್ 07 : ಕೂಡ್ಲಗಿ ಡಿವೈಎಸ್ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಅವರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದರು. ಈಗ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹೋರಾಟ ಆರಂಭಿಸಿದ್ದಾರೆ, ಫೇಸ್ಬುಕ್ನಲ್ಲಿ ಸಚಿವರಿಗೆ ಪ್ರಶ್ನೆ ಕೇಳಿದ್ದಾರೆ.
'ಪಿ ಟಿ ಪರಮೇಶ್ವರ ನಾಯ್ಕರೇ ನಾನು ರಾಜಿನಾಮೆ ನೀಡಿದ್ದೇನೆ. ನೀವು ಯಾವಾಗ ರಾಜಿನಾಮೆ ನೀಡುತ್ತೀರಾ?' ಎಂದು ಅನುಪಮಾ ಶೆಣೈ ಅವರು ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಅವರನ್ನು ಪ್ರಶ್ನಿಸಿದ್ದಾರೆ. [ಅನ್ಯಾಯವೇ ಕಾನೂನಾದಾಗ...ಅನುಪಮಾ ಏನಂದ್ರು?]

ಶನಿವಾರ ಕೂಡ್ಲಗಿ ಡಿವೈಎಸ್ಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಫೇಸ್ಬುಕ್ನಲ್ಲಿ ಸರಣಿ ಪೋಸ್ಟ್ಗಳನ್ನು ಹಾಕುವ ಮೂಲಕ ಅನುಪಮಾ ಶೆಣೈ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 6 ಗಂಟೆಗಳ ಹಿಂದೆ ಅನುಪಮಾ ಅವರು ಸಚಿವರು ವಿರುದ್ಧ ಪೋಸ್ಟ್ ಹಾಕಿದ್ದಾರೆ. [ಅನುಪಮಾ ಶೆಣೈ ದಿಢೀರ್ ರಾಜೀನಾಮೆ]
ಸಂಜೆ ದೂರವಾಣಿ ಸಂಭಾಷಣೆ ಬಿಡುಗಡೆ? : ಬಳ್ಳಾರಿಯಲ್ಲಿನ ಲಿಕ್ಕರ್ ಮಾಫಿಯಾದಿಂದ ಬೇಸತ್ತು ಅನುಪಮಾ ಅವರು ರಾಜೀನಾಮೆ ನೀಡಿದ್ದಾರೆ ಎಂಬುದು ಸದ್ಯದ ಸುದ್ದಿ. ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರು ಈ ದಂಧೆಯಲ್ಲಿ ತೊಡಗಿದ್ದರು ಎಂಬ ಆರೋಪವಿದೆ.[ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!]
ಈ ಮಾಫಿಯಾ ಬಗ್ಗೆ ಅನುಪಮಾ ಶೆಣೈ ಮತ್ತು ಪರಮೇಶ್ವರ್ ನಾಯಕ್ ಅವರ ನಡುವೆ ದೂರವಾಣಿ ಸಂಭಾಷಣೆ ನಡೆದಿತ್ತು. ಈ ಸಂಭಾಷಣೆಯ ತುಣುಕುಗಳು ಇಂದು ಸಂಜೆ ಬಹಿರಂಗವಾಗುವ ಸಾಧ್ಯತೆ ಇದೆ. ಅನುಪಮಾ ಅವರ ರಾಜೀನಾಮೆ ಬಗ್ಗೆ ಸಚಿವರು ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ.

2016ರ ಜನವರಿಯಲ್ಲಿ ಅನುಪಮಾ ಶೆಣೈ ಅವರನ್ನು ವಿಜಯಪುರದ ಇಂಡಿಯ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ಅವರ ಫೋನ್ ಕರೆ ಸ್ವೀಕರಿಸದ ಕಾರಣ ವರ್ಗಾವಣೆ ಮಾಡಲಾಗಿದೆ ಎಂಬ ವಿವಾದ ಎದ್ದಿತ್ತು. ಈಗ ಪುನಃ ಅನುಪಮಾ ಅವರು ಸಚಿವರ ವಿರುದ್ಧ ಹೋರಾಟ ಆರಂಭಿಸಿದ್ದಾರೆ.












Click it and Unblock the Notifications