ಸಿಂಧನೂರು: ನಾಡಬಾಂಬ್ ಸ್ಫೋಟ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡು
ರಾಯಚೂರು, ಮೇ 09 : ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಸವರಾಜೇಶ್ವರಿ ಕ್ಯಾಂಪಿನಲ್ಲಿ ಸೋಮವಾರ ಸಂಜೆ ಸ್ಪೋಟಗೊಂಡ ನಾಡಬಾಂಬ್ ಸ್ಥಳಕ್ಕೆ ಮಂಗಳವಾರ ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್, ಸರ್ಕಲ್ ಇನ್ಸ್ಪೆಕ್ಟರ್ ರಮೇಶ ರೊಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕ್ಯಾಂಪ್ ನಲ್ಲಿ ತಪಾಸಣೆ ನಡೆಸಿದರು. ಈ ವೇಳೆ ಮಾತನಾಡಿದ ಚೇತನ್ ಸಿಂಗ್ ರಾಥೋರ್, 'ಸ್ಫೋಟಗೊಂಡಿರುವುದು ನಾಡಬಾಂಬ್ ಎಂದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಇದು ಲಘು ತೀವ್ರತೆಯ ಸ್ಫೋಟಕ ಎಂದು ಕಂಡು ಬರುತ್ತಿದೆ.

ಈ ಬಗ್ಗೆ ತನಿಖೆ ನಡೆಸಲಾಗುವುದು. ಸ್ಫೋಟ ಸಂಭವಿಸಿದ ಎರಡು ಮೂರು ದಿನದ ಹಿಂದೆ ಮಳೆ ಆಗಿದ್ದರಿಂದ ಅದರ ತೀವ್ರತೆ ಕಡಿಮೆಯಾಗಿದೆ' ಎಂದು ಹೇಳಿದರು.
ಸಿಂಧನೂರು ತಾಲ್ಲೂಕಿನ ಬಸವರಾಜೇಶ್ವರಿ ಕ್ಯಾಂಪಿನ ರಮೇಶ ರೆಡ್ಡಿ ಅವರು ತನ್ನ ಮಾವ ನಾಗರೆಡ್ಡಿ ಅವರ ಜಾಗವನ್ನು ಖರೀದಿಸಿ, ಆ ಜಾಗದಲ್ಲಿ ಮನೆ ನಿರ್ಮಾಣಕ್ಕಾಗಿ ಪಾಯ ತೋಡಿದ್ದರು. ಆ ಮಣ್ಣನ್ನು ಪಕ್ಕದಲ್ಲಿಯೇ ಇದ್ದ ಖಾಲಿ ಜಾಗದಲ್ಲಿ ಹಾಕಲಾಗಿತ್ತು.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಮಣ್ಣಿನ ಗುಡ್ಡೆ ಬಳಿ ಆಟವಾಡುತ್ತಿದ್ದಾಗ ಬಾಲಕರಿಗೆ ದಾರ ಸುತ್ತಿದ್ದ ಪೊಟ್ಟಣ ಸಿಕ್ಕಿದೆ. ಅದನ್ನು ತೆಗೆಯುತ್ತಿದ್ದ ಸಂದರ್ಭದಲ್ಲಿ ಅದು ಸ್ಫೋಟಗೊಂಡಿದೆ.
ಘಟನೆಯಲ್ಲಿ ಗೈರಂಗು ಬಿದಾನ್ (12), ಬಿಸ್ವಜಿತ್ ಸಂದೀಪ್ ಮಂಡಲ್ (10) ಅವರ ಮುಖ ಹಾಗೂ ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.












Click it and Unblock the Notifications