'ಅನ್ನಭಾಗ್ಯ'; ಕರ್ನಾಟಕಲ್ಲೇ ಇದೆ ಶೇ 50ರಷ್ಟು ಅಕ್ಕಿ ಸಂಗ್ರಹ
ಬೆಂಗಳೂರು, ಜೂನ್ 23: ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ 'ಅನ್ನಭಾಗ್ಯ' ಯೋಜನೆಯಡಿ ತಲಾ 10 ಕೆಜಿ ಉಚಿತ ಅಕ್ಕಿ ನೀಡುವುದು ಸಹ ಒಂದು. ಜುಲೈನಿಂದ ಈ ಯೋಜನೆ ಜಾರಿಗೊಳಿಸಲು ಸರ್ಕಾರ ಬಯಸಿದೆ. ಆದರೆ ಅಕ್ಕಿಯ ಕೊರೆತೆ ಕಾರಣ ಯೋಜನೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ರಾಜ್ಯ ಸರ್ಕಾರ 'ಅನ್ನಭಾಗ್ಯ' ಯೋಜನೆಗಾಗಿ 2.28 ಮೆಟ್ರಿಕ್ ಟನ್ ಅಕ್ಕಿಯನ್ನು ಖರೀದಿ ಮಾಡಲು ಮುಂದಾಗಿದೆ. ಇದಕ್ಕಾಗಿ ವಿವಿಧ ರಾಜ್ಯಗಳ ಜೊತೆ ಮಾತುಕತೆಯನ್ನು ನಡೆಸುತ್ತಿದೆ. 10 ಕೆಜಿ ಅಕ್ಕಿ ನೀಡುವ ವಿಚಾರ ರಾಜಕೀಯಗೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ ಮಾಡುತ್ತಿದೆ.

ಕರ್ನಾಟಕ ರಾಜ್ಯ ಅಕ್ಕಿ ಗಿರಿಣಿ ಮಾಲೀಕರ ಸಂಘ ಸಿದ್ದರಾಮಯ್ಯ ಸರ್ಕಾರ ಅಕ್ಕಿಗಾಗಿ ಇನ್ನೂ ನಮ್ಮನ್ನೂ ಸಂಪರ್ಕವೇ ಮಾಡಿಲ್ಲ ಎಂದು ಹೇಳಿದೆ. ಅಗತ್ಯವಿರುವ ಅಕ್ಕಿಯಲ್ಲಿ ಶೇ 50ರಷ್ಟನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ತನಕ ನೀಡಲು ತಾವು ಸಿದ್ಧರಿದ್ದೇವೆ ಎಂದು ಸಂಘ ತಿಳಿಸಿದೆ.
ಎಷ್ಟು ದರದಲ್ಲಿ ಪೂರೈಕೆ?; ಪ್ರಸ್ತುತ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 32 ರೂ. ದರದಲ್ಲಿ ಅಕ್ಕಿಯನ್ನು ಪೂರೈಕೆ ಮಾಡುತ್ತಿದೆ. ಶೇ 50ರಷ್ಟು ಅಕ್ಕಿಯನ್ನು ಅಕ್ಟೋಬರ್, ನವೆಂಬರ್ ತನಕ ನೀಡುತ್ತೇವೆ. ಬಳಿಕ ಕಟಾವು ಪೂರ್ಣಗೊಂಡ ಬಳಿಕ ಉಳಿದಿದ್ದನ್ನು ನೀಡುತ್ತೇವೆ. ಪ್ರತಿ ಕೆಜಿಗೆ 34 ರಿಂದ 40 ರೂ. ದರದಲ್ಲಿ ಅಕ್ಕಿ ನೀಡಲು ನಾವು ಸಿದ್ಧರಿದ್ದೇವೆ ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಿಣಿ ಮಾಲೀಕರ ಸಂಘ ಹೇಳಿದೆ.
ಕರ್ನಾಟಕದಲ್ಲಿ ಲಭ್ಯವಿರುವ ಅಕ್ಕಿ 'ಅನ್ನಭಾಗ್ಯ' ಯೋಜನೆ ಘೋಷಣೆಯಡಿ ನೀಡಲು ಸಾಕಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈಗ ಜುಲೈನಲ್ಲಿ ಯೋಜನೆ ಆರಂಭಿಸಲು ಮೊದಲ ಹಂತದಲ್ಲಿ ರಾಜ್ಯದಲ್ಲಿಯೇ ಅಕ್ಕಿ ಖರೀದಿ ನಡೆಯಲಿದೆಯೇ? ಎಂದು ಕಾದು ನೋಡಬೇಕಿದೆ.
ದೇಶದಲ್ಲಿ ಅಕ್ಕಿ ಉತ್ಪಾದನೆಯಲ್ಲಿ 6ನೇ ಅತಿ ದೊಡ್ಡ ರಾಜ್ಯ ಕರ್ನಾಟಕ. ಪ್ರತಿ ವರ್ಷ ಸುಮಾರು 30 ಲಕ್ಷ ಟನ್ಗಳಿಗೂ ಅಧಿಕ ಅಕ್ಕಿ ಉತ್ಪಾದನೆ ಆಗುತ್ತದೆ. ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ರೈಸ್ಮಿಲ್ಗಳಿವೆ. ಆದರೆ ಇದುವರೆಗೂ ಸರ್ಕಾರ ಅಕ್ಕಿ ಪೂರೈಕೆ ಕುರಿತು ರೈಸ್ ಮಿಲ್ ಮಾಲೀಕರ ಸಂಘವನ್ನು ಸಂಪರ್ಕ ಮಾಡಿಲ್ಲ.
ಸರಿಯಾದ ಯೋಜನೆ ಬೇಕಿದೆ; ಕರ್ನಾಟಕ ಸರ್ಕಾರ 'ಅನ್ನಭಾಗ್ಯ' ಯೋಜನೆಯಡಿ ಅಂತ್ಯೋದಯ, ಬಿಪಿಎಲ್ ಕಾರ್ಡ್ದಾರ ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದೆ. ಇದನ್ನು ಜಾರಿಗೆ ತರಲು ಸರಿಯಾದ ಯೋಜನೆಯ ಅಗತ್ಯವಿದೆ. ಈ ಯೋಜನೆಗೆ ಬೇಕಾಗುವಷ್ಟು ಅಕ್ಕಿಯನ್ನು ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯ ಪ್ರತಿ ತಿಂಗಳು ಸರಬರಾಜು ಮಾಡುವುದು ಕಷ್ಟವಾಗಿದೆ.
ರಾಜ್ಯದಲ್ಲಿ ಈಗ ಮಳೆ ಆರಂಭವಾಗಿದ್ದು, ಭತ್ತದ ಬೇಸಾರ ಇನ್ನೂ ಆರಂಭವಾಗಬೇಕಿದೆ. ಎಷ್ಟು ಅಕ್ಕಿಯ ಅಗತ್ಯವಿದೆ ಎಂದು ಸರ್ಕಾರ ಸ್ಪಷ್ಟವಾದ ಮಾಹಿತಿ ನೀಡಿದರೆ ಅಕ್ಟೋಬರ್ ವೇಳೆಗೆ ನಾವು ಸರಬರಾಜು ಮಾಡಬಹುದು ಎಂದು ಅಕ್ಕಿ ಗಿರಣಿ ಮಾಲೀಕರ ಸಂಘ ಹೇಳಿದೆ. ಆದರೆ ಕರ್ನಾಟಕ ಸರ್ಕಾರ ಅಕ್ಕಿ ಖರೀದಿಗಾಗಿ ವಿವಿಧ ರಾಜ್ಯಗಳ ಜೊತೆ ಮಾತುಕತೆ ನಡೆಸುತ್ತಿದೆ.
ಸರ್ಕಾರ ಕರ್ನಾಟಕದಲ್ಲಿಯೇ ಅಕ್ಕಿ ಖರೀದಿ ಮಾಡಿದರೆ ರೈಸ್ ಮಿಲ್ ಉದ್ಯಮಕ್ಕೆ ಸಹಾಯ ಮಾಡಿದಂತೆ ಆಗುತ್ತದೆ. ಲಕ್ಷಾಂತರ ಕಾರ್ಮಿಕರು, ರೈತರು ಈ ಉದ್ಯಮ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸರಿಯಾಗಿ ಯೋಜನೆ ರೂಪಿಸಿದರೆ ರೈಸ್ ಮಿಸ್ ಮಾಲೀಕರಿಗೂ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
ಪ್ರತಿ ತಿಂಗಳು ಸಹ ಅಕ್ಕಿಯ ಅಗತ್ಯವಿದೆ. ಆದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಪೂರೈಕೆ ಜಾಲ ಹೊಂದಿರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ದರ, ಪೂರೈಕೆ ಮಾಡುವ ಪ್ರಮಾಣದ ಕುರಿತು ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.












Click it and Unblock the Notifications