ಆರೋಗ್ಯ ತೀವ್ರ ಹದಗೆಟ್ಟಿದ್ದರೂ ಸದನಕ್ಕೆ ಹಾಜರಾಗಿದ್ದ ಅನಂತ್ಕುಮಾರ್
ನವದೆಹಲಿ, ನವೆಂಬರ್ 12: ಅನಂತ್ ಕುಮಾರ್ ಅವರ ಆರೋಗ್ಯ ಹದಗೆಟ್ಟಿರುವುದು ಕೆಲವು ತಿಂಗಳ ಹಿಂದೆಯೇ ಅವರಿಗೆ ಗೊತ್ತಾಗಿತ್ತು. ಆದರೆ ಅವರು ಪಕ್ಷದ ಕೆಲವು ಕೆಲಸಗಳನ್ನು ಮುಗಿಸಿಯೇ ಚಿಕಿತ್ಸೆಗೆ ತೆರಳುವುದಾಗಿ ಹಠ ಹಿಡಿದಿದ್ದರು.
ಟಿಡಿಪಿ ಪಕ್ಷವು ಆಡಳಿತಾರೋಢ ಬಿಜೆಪಿ ಪಕ್ಷದ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಆ ಸಮಯಕ್ಕಾಗಲೆ ಅನಂತ್ ಕುಮಾರ್ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು, ಮತ್ತು ಅವರು ಲಂಡನ್ಗೆ ತೆರಳಬೇಕಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.
ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದ ಅನಂತ್ಕುಮಾರ್ ಅವರು, ಅವಿಶ್ವಾಸ ನಿರ್ಣಯದಂತಹಾ ಪ್ರಮುಖ ಚರ್ಚೆ ಸಂಸತ್ನಲ್ಲಿ ಆಗಬೇಕಾದರೆ ಎರಡೂ ಸದನದ ವ್ಯವಹಾರವನ್ನು ಗಮನಿಸಬೇಕಾದ, ಸದನ ದಾರಿ ತಪ್ಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇರುವ ತಾನು ಸಂಸತ್ತು ಬಿಟ್ಟು ಹೋಗಬಾರದೆಂದು ಲಂಡನ್ ಭೇಟಿಯನ್ನು ಮುಂದೂಡಿದ್ದರು.

ಮೋದಿ ಸಹ ಚಿಕಿತ್ಸೆ ಪಡೆಯಲು ಹೇಳಿದ್ದರು
ಆ ಹೊತ್ತಿಗಾಗಲೇ ನರೇಂದ್ರ ಮೊದಿ, ರಾಜನಾಥ ಸಿಂಗ್, ಅಮಿತ್ ಶಾ ಸೇರಿ ಹಲವು ಮುಖಂಡರಿಗೆ ಅನಂತ್ಕುಮಾರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದಿತ್ತು ಅವರೂ ಸಹ ಅನಂತ್ ಅವರಿಗೆ ಲಂಡನ್ಗೆ ತೆರಳುವಂತೆ ಸಲಹೆ ನೀಡಿದ್ದರು ಆದರೆ ಅನಂತ್ ಹೋಗಿರಲಿಲ್ಲ.

ಅನಾರೋಗ್ಯದ ಮಧ್ಯೆ ಸರ್ಕಾರ ಪರ ಮಾತನಾಡಿದ್ದರು
ಅವಿಶ್ವಾಸ ಗೊತ್ತುವಳಿಯನ್ನು ಮೋದಿ ಅವರ ಸರ್ಕಾರ ಗೆದ್ದಿತು. ಅಂದು ಹಲವು ಬಾರಿ ಅನಂತ್ಕುಮಾರ್ ಅವರು ಸದಸನಕ್ಕೆ ಸರಿ-ತಪ್ಪುಗಳ ಪಾಠ ಮಾಡಿದರು. ಅವರೂ ಸಹ ಅವಿಶ್ವಾಸ ನಿರ್ಣಯದ ವಿರೋಧವಾಗಿ ಮಾತನಾಡಿದರು. ಅದರ ನಂತರವೇ ಅವರು ಲಂಡನ್ಗೆ ತೆರಳಿ ಆಸ್ಪತ್ರೆಗೆ ದಾಖಲಾದರು.

ಲಂಡನ್ನಲ್ಲಿ ಕೆಲ ಕಾಲ ಚಿಕಿತ್ಸೆ ಪಡೆದರು
ಲಂಡನ್ನಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಅನಂತ್ಕುಮಾರ್ ವಾಪಸ್ಸಾದರು, ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ, ಕೊನೆಗೆ ಇಂದೆ ಬೆಳಗಿನ ಜಾವ 3 ಗಂಟೆಗೆ ಅನಂತ್ಕುಮಾರ್ ಅವರು ಇಹಲೋಕ ತ್ಯಜಿಸಿದರು.

ಅನಾರೋಗ್ಯದ ಬಗ್ಗೆ ಹೇಳಿರಲಿಲ್ಲ
ಅವರಿಗೆ ಅನಾರೋಗ್ಯ ಇದ್ದ ವಿಚಾರವನ್ನು ಬಹು ಸಮಯ ಅವರು ಆಪ್ತವಲಯದವರಿಗೆ ಹೇಳಿರಲಿಲ್ಲವಂತೆ ಅನಂತ್, ಅನಾರೋಗ್ಯದ ವಿಷಯ ಗೊತ್ತಾದರೆ ತನ್ನ ಬಗ್ಗೆ ಪ್ರೀತಿ ಇರಿಸಿಕೊಂಡವರಿಗೆ ಬೇಸರವಾಗುತ್ತದೆ ಎಂಬ ಕಾರಣದಿಂದ ಅನಾರೋಗ್ಯದ ವಿಷಯವನ್ನು ಅವರು ಮುಚ್ಚಿಟ್ಟಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.











Click it and Unblock the Notifications