ಶಾಸಕರ ನಡುವಿನ ಗಲಾಟೆ : ಆನಂದ್ ಸಿಂಗ್ ಫೋಟೋ ವೈರಲ್
ಬೆಂಗಳೂರು, ಜನವರಿ 21 : ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆನಂದ್ ಸಿಂಗ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ರಾತ್ರಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಈಗಲ್ಟನ್ ರೆಸಾರ್ಟ್ನಲ್ಲಿ ಹೊಡೆದಾಟ ನಡೆದಿದೆ. ಭಾನುವಾರ ಬೆಳಗ್ಗೆ ಆನಂದ್ ಸಿಂಗ್ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ : ಯಾರು, ಏನು ಹೇಳಿದರು?
ಕೆಲವು ಕಾಂಗ್ರೆಸ್ ನಾಯಕರು ಆನಂದ್ ಸಿಂಗ್ ಎದೆ ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಸೋಮವಾರ ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಶಾಸಕ ಗಣೇಶ್ಗೆ ಸಂಕಷ್ಟ?
ಆನಂದ್ ಸಿಂಗ್ ಅವರ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಂತೆ ಕಾಣುತ್ತಿದೆ. ಅವರ ಮುಖ ಊದಿಕೊಂಡಿದೆ. ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಭಾರಿ ಗಲಾಟೆ ನಡೆದಿದ್ದಕ್ಕೆ ಚಿತ್ರ ಸಾಕ್ಷಿಯಾಗಿದೆ. ಶಾಸಕ ಜೆ.ಎನ್.ಗಣೇಶ್ ಅವರು ಇಂದು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕರ ಬಡಿದಾಟ, ಆಸ್ಪತ್ರೆಗೆ ದಾಖಲು?
ಆನಂದ್ ಸಿಂಗ್ ಹೇಗಿದ್ದಾರೆ?
ಶಾಸಕ ಆನಂದ್ ಸಿಂಗ್ ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸೋಮವಾರ ವೈರಲ್ ಆಗಿದೆ. ಅವರ ಬಲಗಣ್ಣು ಸಂಪೂರ್ಣವಾಗಿ ಊದಿಕೊಂಡಿದೆ. ಮುಖ ಸಹ ಸ್ವಲ್ಪ ಊದಿಕೊಂಡಿದ್ದು, ಎರಡು ಕಣ್ಣಿನ ಭಾಗಗಳು ಕಪ್ಪಾಗಿವೆ.
ಆನಂದ್ ಸಿಂಗ್ ಅವರಿಗೆ ಪ್ರಜ್ಞೆ ಇದೆ. ಆದರೆ, ಊತದ ಕಾರಣ ಕಣ್ಣನ್ನು ಬಿಡಲಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕುಟುಂಬಸ್ಥರು ಅವರ ಜೊತೆ ಇದ್ದಾರೆ. ಭಾನುವಾರ ರಾತ್ರಿ ಹಲವು ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಶಾಸಕರಿಗೆ ತರಾಟೆ
ಕರ್ನಾಟಕ ಕಾಂಗ್ರೆಸ್ ಶಾಸಕರ ನಡುವಿನ ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪಕ್ಷದ ಹೈಕಮಾಂಡ್ ಸಹ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳುವ ಸಾಧ್ಯತೆ ಇದೆ. ಮತ್ತೊಂದು ಕಡೆ ಆನಂದ್ ಸಿಂಗ್ ಕುಟುಂಬದವರು ಶಾಸಕರ ವಿರುದ್ಧ ದೂರು ದಾಖಲು ಮಾಡಲು ತೀರ್ಮಾನಿಸಿದ್ದಾರೆ.
ಜೆ.ಎನ್.ಗಣೇಶ್ ಹೇಳಿದ್ದೇನು?
ಘಟನೆ ಬಗ್ಗೆ ಸೋಮವಾರ ಮೊದಲ ಬಾರಿಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಪ್ರತಿಕ್ರಿಯೆ ನೀಡಿದ್ದಾರೆ. 'ಆನಂದ್ ಸಿಂಗ್ ನನ್ನ ಅಣ್ಣ ಇದ್ದ ಹಾಗೆ. ಅವರ ಮೇಲೆ ನಾನು ಹಲ್ಲೆ ನಡೆಸಿಲ್ಲ. ಆನಂದ್ ಸಿಂಗ್ ಮತ್ತು ಭೀಮಾ ನಾಯ್ಕ್ ನಡುವಿನ ಮನಸ್ಥಾಪ ಬಗೆಹರಿಸಲು ಮಾತುಕತೆ ನಡೆದಿತ್ತು. ಈ ಸಂದರ್ಭ ಒಂದು ಸಣ್ಣ ಘಟನೆ ನಡೆಯಿತು. ಆದರೆ, ಮಾಧ್ಯಮದಲ್ಲಿ ಬಂದಂತೆ ಬಿಯರ್ ಬಾಟಲ್ನಿಂದ ನಾನು ಹೊಡೆದಿಲ್ಲ. ನನ್ನ ಗನ್ ಮ್ಯಾನ್ಗೂ ಕಚ್ಚಿಲ್ಲ' ಎಂದರು.
ರೆಸಾರ್ಟ್ ರಾಜಕೀಯಕ್ಕೆ ತೆರೆ
ಜನವರಿ 18ರ ಶುಕ್ರವಾರ ರಾತ್ರಿಯಿಂದ ರೆಸಾರ್ಟ್ನಲ್ಲಿದ್ದ ಕಾಂಗ್ರೆಸ್ ಶಾಸಕರು ಇಂದು ರೆಸಾರ್ಟ್ನಿಂದ ಹೊರ ಹೋಗಿದ್ದಾರೆ. ಈ ಮೂಲಕ ರೆಸಾರ್ಟ್ ರಾಜಕೀಯಕ್ಕೆ ತೆರೆ ಬಿದ್ದಿದೆ. ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಎಲ್ಲಾ ಶಾಸಕರಿಗೂ ರೆಸಾರ್ಟ್ ಬಿಟ್ಟು ಹೋಗುವಂತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚಿಸಿದರು. ಇಂದು ನಡೆಯಬೇಕಿದ್ದ ಶಾಸಕರ ಜೊತೆಗಿನ ಸಭೆಯನ್ನು ರದ್ದುಗೊಳಿಸಲಾಗಿದೆ.