ಸಿದ್ದು ಸರಕಾರದ ಅನ್ಯಾಯಗಳನ್ನು ಜನ ಹತ್ತಿರದಿಂದ ನೋಡಿದ್ದಾರೆ: ಶಾಸಕ ವೇದವ್ಯಾಸ ಕಾಮತ್ ಸಂದರ್ಶನ

Recommended Video

      ಸಿದ್ದು ಸರಕಾರದ ಅನ್ಯಾಯಗಳನ್ನು ಜನ ಹತ್ತಿರದಿಂದ ನೋಡಿದ್ದಾರೆ: ಶಾಸಕ ವೇದವ್ಯಾಸ ಕಾಮತ್ ಸಂದರ್ಶನ

      ಕಳೆದ ಸಿದ್ದರಾಮಯ್ಯನವರ ಸರಕಾರದ ವಿರುದ್ದ ಆಡಳಿತ ವಿರೋಧಿ ಅಲೆ ಅಷ್ಟಾಗಿ ಇಲ್ಲದಿದ್ದರೂ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ದಯನೀಯವಾಗಿ ಸೋಲುಂಡಿತ್ತು. ಇದಕ್ಕೆ ಕಾರಣಗಳು ಹಲವಾರು...

      ಎರಡು ಜಿಲ್ಲೆಯ ಒಟ್ಟು ಹದಿಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉಳಿಸಿಕೊಂಡಿದ್ದು ಮಂಗಳೂರಿನಲ್ಲಿ ಸಚಿವ ಯು ಟಿ ಖಾದರ್ ಅವರ ಕ್ಷೇತ್ರವನ್ನು ಮಾತ್ರ. ಮಂಗಳೂರು ವ್ಯಾಪ್ತಿಯ ಮೂರರಲ್ಲಿ ಮೂರನ್ನೂ ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು, ಈ ಬಾರಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ.

      ಮಂಗಳೂರು ನಗರ - ದಕ್ಷಿಣ ಕ್ಷೇತ್ರದಿಂದ ಯುವ ಮುಖಂಡ, ಉದ್ಯಮಿ ಡಿ ವೇದವ್ಯಾಸ ಕಾಮತ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದಕ್ಕೆ ಕೆಲವರು ಅಪಸ್ವರವನ್ನು ಎತ್ತಿದ್ದೂ ಗೊತ್ತಿರುವ ವಿಚಾರ. ಆದರೆ, ಎಲ್ಲಾ ಮನಸ್ತಾಪಗಳನ್ನು ಬದಿಗೊತ್ತಿ, ಸಂಘಟಿತ ಪ್ರಚಾರದ ಮೂಲಕ, ಕಾಮತ್ ಅವರು ತಮ್ಮ ನೇರ ಸ್ಪರ್ಧಿ ಜೆ ಆರ್ ಲೋಬೋ ಅವರನ್ನು 16,075 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು.

      ಬಜೆಟ್ ಅಧಿವೇಶನದ ವೇಳೆ, ವಿಧಾನಸೌಧದ ಲಾಬ್ಬಿಯಲ್ಲಿ ವೇದವ್ಯಾಸ್ ಕಾಮತ್ ಅವರು 'ಒನ್ ಇಂಡಿಯಾ' ಗೆ ನೀಡಿದ ಪ್ರಮುಖಾಂಶ..

      ಪ್ರ: ಯುವ ಸಮುದಾಯಕ್ಕೆ ಸಾಮಾಜಿಕ ತಾಣ ಬಳಕೆಯ ಬಗ್ಗೆ ಏನು ಹೇಳಲು ಬಯಸುತ್ತೀರಿ?
      ಕಾಮತ್: ಈಗಿನ ಯುವ ಸಮುದಾಯ ಇದಕ್ಕೆ ಬಹುವಾಗಿ ಅಂಟಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾನು ಕೂಡಾ ಸಾಮಾಜಿಕ ತಾಣವನ್ನು ವ್ಯವಸ್ಥಿತವಾಗಿ ಬಳಸುತ್ತೇನೆ. ಈ ಹಿಂದೆ, ಹೊರದೇಶದಲ್ಲಿ ನಡೆಯುವ ಘಟನೆಗಳು ನಮ್ಮ ಗಮನಕ್ಕೆ ಬರುವಾಗ ಬಹಳ ಸಮಯ ಕಳೆಯುತ್ತಿತ್ತು, ಈಗ ಸಾಮಾಜಿಕ ತಾಣದಿಂದ ವೇಗವಾಗಿ ನಮಗೆ ಸುದ್ದಿ ತಲುಪುತ್ತದೆ.

      ಎಲ್ಲರೂ ಇದನ್ನು ಹೆಚ್ಚುಹೆಚ್ಚು ಬಳಸುತ್ತಿರುವುದರಿಂದ, ರಾಜಕಾರಣಿಗಳಿಂದ ಹಿಡಿದು ಎಲ್ಲರೂ ಇದನ್ನು ಅನಿವಾರ್ಯವಾಗಿ ಬಳಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಜಾಗರೂಕತೆಯಿಂದ ಇದನ್ನು ಬಳಸಿಕೊಳ್ಳಬೇಕು.

      ಬಜೆಟ್ ಪುಸ್ತಕವನ್ನು ಅವಲೋಕಿಸಿದರೆ ಕರಾವಳಿ ಎನ್ನುವ ಪದವೇ ಇಲ್ಲ

      ಬಜೆಟ್ ಪುಸ್ತಕವನ್ನು ಅವಲೋಕಿಸಿದರೆ ಕರಾವಳಿ ಎನ್ನುವ ಪದವೇ ಇಲ್ಲ

      ಪ್ರ: ಕರಾವಳಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಬಿಜೆಪಿ ಶಾಸಕರು ಹೇಳುತ್ತಿರುವುದು ಏಕೆ?
      ಕಾಮತ್: ಹೌದು, ಬಜೆಟ್ ನಲ್ಲಿ ನಮ್ಮ ಭಾಗವನ್ನು ಕಡೆಗಣಿಸಲಾಗಿದೆ ಎನ್ನುವುದರಲ್ಲಿ ಸಂಶಯವೇ ಬೇಡ. ಇಡೀ ಬಜೆಟ್ ಪುಸ್ತಕವನ್ನು ಅವಲೋಕಿಸಿದರೆ ಅದರಲ್ಲಿ ಕರಾವಳಿ ಎನ್ನುವ ಪದವೇ ಇಲ್ಲ. ನಾವು ಹಲವಾರು ಬೇಡಿಕೆಗಳನ್ನು ಇಟ್ಟಿದ್ದೆವು. ಮೀನುಗಾರರಿಗೆ ಕೊಡುತ್ತಿದ್ದ ಡೀಸೆಲ್ ಅನ್ನು 350 ರಿಂದ 500 ಲೀಟರಿಗೆ ಏರಿಸುವುದು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು ಈ ರೀತಿ..

      ಸಿದ್ದರಾಮಯ್ಯನವರು ನಾಲ್ಕನೇ ಬಜೆಟಿನಲ್ಲಿ 337 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದರು. ಇದರಲ್ಲಿ ಮೀನುಗಾರಿಕೆ ಇಲಾಖೆಯ ಕೆಲಸವನ್ನು ಹಂತಹಂತವಾಗಿ ಮಾಡಬೇಕಾಗಿತ್ತು. ಆದರೆ, ಐದನೇ ಬಜೆಟಿನಲ್ಲಿ ಅದನ್ನು 227 ಕೋಟಿಗೆ ಇಳಿಸಿದರು.

      ನಾವು 437 ಕೋಟಿ ಇಡಬೇಕೆಂದು ಮನವಿ ಮಾಡಿದ್ದೆವು. ಮೀನುಗಾರರ ಸಾಲಮನ್ನಾ, ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುವವರಿಗೆ ವಿಶೇಷ ಸೌಲಭ್ಯ ನೀಡಬೇಕು, ತುಂಬೆ ಡ್ಯಾಂ ವಿಸ್ತರಿಸುವಾಗ ಜಾಗ ಕಳೆದುಕೊಂಡವರಿಗೆ ಅನುದಾನ ನೀಡುವುದು, ಇದನ್ನೆಲ್ಲಾ ಮನವಿ ಮಾಡಿದ್ದೆವು. ಆದರೆ, ಯಾವುದನ್ನೂ ಬಜೆಟಿನಲ್ಲಿ ಉಲ್ಲೇಖಿಸುವ ಗೋಜಿಗೆ ಸಿಎಂ ಹೋಗಲಿಲ್ಲ.

      ಬಿಜೆಪಿ ಶಾಸಕರನ್ನು ಗೆಲ್ಲಿಸುವ ನಿರ್ಧಾರಕ್ಕೆ ಮತದಾರ ಬಂದಿದ್ದ

      ಬಿಜೆಪಿ ಶಾಸಕರನ್ನು ಗೆಲ್ಲಿಸುವ ನಿರ್ಧಾರಕ್ಕೆ ಮತದಾರ ಬಂದಿದ್ದ

      ಪ್ರ: ಎರಡು ಜಿಲ್ಲೆಗಳಲ್ಲಿ ಈ ಮಟ್ಟಿನ ಯಶಸ್ಸನ್ನು ಬಿಜೆಪಿ ನಿರೀಕ್ಷೆ ಮಾಡಿತ್ತಾ?
      ಕಾಮತ್: ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಆದಂತಹ ಅನ್ಯಾಯಗಳನ್ನು ಜನರು ಹತ್ತಿರದಿಂದ ನೋಡಿದ್ದಾರೆ. ಸಂಘ ಪರಿವಾರದ ಸದಸ್ಯರ 25ಕ್ಕೂ ಕಾರ್ಯಕರ್ತರ ಕೊಲೆ, ನೂರಕ್ಕೂ ಅಧಿಕ ಹಲ್ಲೆ, ಶಾಲಾ ಮಕ್ಕಳ ಅನ್ನವನ್ನು ಕಸಿದಿರುವುದು, ಪೊಲೀಸ್ ವ್ಯವಸ್ಥೆ, ಆಮೆಗತಿಯಲ್ಲಿ ಸಾಗಿದ ಕಾಮಗಾರಿಗಳು, ಇದನ್ನೆಲ್ಲಾ ನೋಡಿ ಜನ ರೋಸಿ ಹೋಗಿದ್ದರು.

      ಹಾಗಾಗಿ, ಕರಾವಳಿ ಭಾಗದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸುವ ನಿರ್ಧಾರಕ್ಕೆ ಮತದಾರ ಬಂದಿದ್ದ. ಇದರ ಜೊತೆಗೆ, ನರೇಂದ್ರ ಮೋದಿಯವರ ನಾಲ್ಕು ವರ್ಷದ ಭ್ರಷ್ಟಾಚಾರ ಮುಕ್ತ ಆಡಳಿತ, ಸೇನೆಯನ್ನು ಬಲಪಡಿಸಿದ್ದು, ಇದೆಲ್ಲಾ ಅಂಶಗಳು ಬಿಜೆಪಿ ಗೆಲುವಿಗೆ ಕಾರಣವಾಯಿತು.

      ಮೋದಿಯವರ ಆಡಳಿತವನ್ನು ಇಡೀ ವಿಶ್ವವೇ ಹೊಗಳುತ್ತಿದೆ

      ಮೋದಿಯವರ ಆಡಳಿತವನ್ನು ಇಡೀ ವಿಶ್ವವೇ ಹೊಗಳುತ್ತಿದೆ

      ಪ್ರ: ಈ ಯಶಸ್ಸು ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆಯಾ?
      ಕಾಮತ್: ನೂರಕ್ಕೆ ನೂರು ಇಲ್ಲಿ ಅಭೂತಪೂರ್ವ ವಾತಾವರಣವಿದೆ. ಮೋದಿಯವರ ಆಡಳಿತವನ್ನು ಇಡೀ ವಿಶ್ವವೇ ಹೊಗಳುತ್ತಿದೆ. ಹಾಗಾಗಿ, ಮಂಗಳೂರಿನ ಜನತೆ ಕೂಡಾ ಮೆಚ್ಚಿಕೊಳ್ಳುತ್ತಾರೆ ಎನ್ನುವ ಭರವಸೆ ನನಗಿದೆ. ಈ ದೇಶಕ್ಕೆ ಇರುವ ಒಂದೇ ಒಂದು ಆಶಾಕಿರಣವೆಂದರೆ ಅದು ಮೋದಿಯವರು.

      ಯೋಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ, ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಭ್ರಷ್ಟಾಚಾರ ಇಲ್ಲದೇ ಆಡಳಿತ ನಡೆಸುವುದೇ ದೊಡ್ಡ ವಿಚಾರ. ಮೋದಿಯಂತಹ ವ್ಯಕ್ತಿ ಭಾರತಕ್ಕೆ ಅನಿವಾರ್ಯ.

      ಜನರಿಗೆ ಏನು ಹೇಳುವುದು ಎನ್ನುವ ಗೊಂದಲದಲ್ಲಿ ನಾವಿದ್ದೇವೆ

      ಜನರಿಗೆ ಏನು ಹೇಳುವುದು ಎನ್ನುವ ಗೊಂದಲದಲ್ಲಿ ನಾವಿದ್ದೇವೆ

      ಪ್ರ: ವಿಶ್ವಾಸ ಮತದ ವೇಳೆ, ನಡೆದ ರಾಜಕೀಯ ನಿಮಗೆ ಬೇಸರ ತಂದಿದೆಯಾ?
      ಕಾಮತ್: ನೋಡಿ, ರಾಜಕೀಯದಲ್ಲಿ ಇದೆಲ್ಲಾ ಮಾಮೂಲು. 104ಸೀಟು ಬಂದಂತಹ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗಿ ಬಂದಿದೆ. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಬಹಳಷ್ಟು ಕೆಲಸಕಾರ್ಯಗಳನ್ನು ಮಾಡಬಹುದಾಗಿತ್ತು. ಜನರ ನಿರೀಕ್ಷೆ ಬಹಳಷ್ಟು ನಮ್ಮ ಮೇಲಿದೆ, ಅದನ್ನು ನೆರವೇರಿಸಬೇಕಿದೆ.

      ಜೊತೆಗೆ, ಬಜೆಟ್ ನಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ, ಜನರಿಗೆ ಏನು ಹೇಳುವುದು ಎನ್ನುವ ಗೊಂದಲದಲ್ಲಿ ನಾವಿದ್ದೇವೆ. ಇದನ್ನು ನಮ್ಮ ಕ್ಷೇತ್ರದ ಮತದಾರರಲ್ಲಿ ಹೇಳುತ್ತಿದ್ದೇವೆ. ಆದರೂ, ಪ್ರಾಮಾಣಿಕವಾಗಿ ನಾವು ಕೆಲಸ ಮಾಡುತ್ತೇವೆ ಎನ್ನುವ ಭರವಸೆಯನ್ನು ಜನರಿಗೆ ನೀಡಿದ್ದೇವೆ.

      ಹದಿನೆಂಟರಿಂದ ಇಪ್ಪತ್ತು ವಾರ್ಡಿನಲ್ಲಿ ಮಳೆಗಾಲದಲ್ಲೇ ನೀರಿನ ಸಮಸ್ಯೆಯಿದೆ

      ಹದಿನೆಂಟರಿಂದ ಇಪ್ಪತ್ತು ವಾರ್ಡಿನಲ್ಲಿ ಮಳೆಗಾಲದಲ್ಲೇ ನೀರಿನ ಸಮಸ್ಯೆಯಿದೆ

      ಪ್ರ: ಕ್ಷೇತ್ರದ ಅಭಿವೃದ್ದಿಗೆ, ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಯೋಜನೆಗಳೇನು
      ಕಾಮತ್: ನಮ್ಮ ಸರಕಾರ ಬರುತ್ತೆ, ಜನರಿಗೆ ಕೊಟ್ಟ ಭರವಸೆಯನ್ನು ಮಾಡಬಹುದು ಎನ್ನುವುದು ನನ್ನ ಲೆಕ್ಕಾಚಾರವಾಗಿತ್ತು. ಆದರೆ, ನಾವು ವಿರೋಧ ಪಕ್ಷದಲ್ಲಿದ್ದೇವೆ, ಅನುದಾನ ಸರಿಯಾಗಿ ಬರುತ್ತೋ, ಇಲ್ಲವೋ ಗೊತ್ತಿಲ್ಲ. ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದೆ, ಅವರಲ್ಲೂ ಸರಿಯಿಲ್ಲ, ತಾರತಮ್ಯ ಕಾಣುತ್ತಿದ್ದೇವೆ.

      ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾದರೂ, ಹದಿನೆಂಟರಿಂದ ಇಪ್ಪತ್ತು ವಾರ್ಡಿನಲ್ಲಿ ಮಳೆಗಾಲದಲ್ಲೇ ನೀರಿನ ಸಮಸ್ಯೆಯಿದೆ. 24X7 ನೀರು ಪೂರೈಸಬೇಕು ಎನ್ನುವುದು ನನ್ನ ಕನಸಿದೆ. ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಒಳ್ಳೆಯ ರಸ್ತೆ, ಜನ ನೆಮ್ಮದಿಯಿಂದ ಇರಲು ಕಾನೂನು, ಸುವ್ಯವಸ್ಥೆ. ಈ ರೀತಿಯ ಪ್ರಮುಖ ಆದ್ಯತೆಗಳಿವೆ.

      ಎಲ್ಲಾ ಯುಜಿಡಿ ಲೈನುಗಳು ಕೆಟ್ಟು ಹೋಗಿವೆ, ಇದರಿಂದ ನೂರಾರು ಬಾವಿಗಳು ಹಾಳಾಗಿವೆ. ಇದನ್ನೆಲ್ಲಾ ಸರಿಪಡಿಸಬೇಕು ಎನ್ನುವ ಕನಸನ್ನು ಹೊಂದಿದ್ದೇನೆ. ಹಂತಹಂತವಾಗಿ ಈ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಎನ್ನುವ ಖಚಿತ ಭರವಸೆ ನನಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+