Siddaramaiah Question PM Modi: ಬಿಜೆಪಿ ಭ್ರಷ್ಟಾಚಾರದಿಂದ ಅಮೃತ ಕಾಲ ವಿಷಕಾಲವಾಗಿದೆ: ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಏಪ್ರಿಲ್ 29: ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಕೇಳಿದರೆ, ಶರಣ ಬಸವಣ್ಣನವರ ವಚನ ನೆನಪಾಗುತ್ತದೆ. ಕಾಂಗ್ರೆಸ್ ಎಂದರೆ 'ಭ್ರಷ್ಟಾಚಾರದ ಕಾಲ' ಬಿಜೆಪಿ ಸರ್ಕಾರವೆಂದರೆ 'ಅಮೃತ ಕಾಲ' ಎನ್ನುವ ಮೊದಲು ನಿಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಿ ಎಂದು ವಿಪಕ್ಷ ನಾಯಕರ ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಕಾಲ, @BJP4India ಎಂದರೆ ಅಮೃತ ಕಾಲ ಎನ್ನುವ ಮೊದಲು ನಿಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಿ, ಅಲ್ಲಿರುವ ಅದಾನಿ, ಅಂಬಾನಿಗಳು ಕಾಣಲಿಲ್ಲವೇ? ನಿಮ್ಮ ಅಕ್ಕಪಕ್ಕದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಸಚಿವರ ಭ್ರಷ್ಟ ಮುಖಗಳೂ ಕಾಣಲಿಲ್ಲವೇ @narendramodi? 2/13
— Siddaramaiah (@siddaramaiah) April 29, 2023
ಚುನಾವಣೆ ಪ್ರಚಾರಕ್ಕೆಂದು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಆಗಮಿಸಿದ್ದಾರೆ. ಹೀಗೆ ಪ್ರಚಾರದ ಸಭೆಯಲ್ಲಿ ಅವರು ಶರಣ ಬಸವಣ್ಣರನ್ನು ಸ್ಮರಿಸಿ ಭಾಷಣ ಮಾಡಿದ್ದರು. ಅದಕ್ಕೆ ವ್ಯಂಗ್ಯವಾಡಿರುವ ಸಿದ್ದರಾಮಯ್ಯನವರು ಶನಿವಾರ ಸರಣಿ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. ನಿಮ್ಮ ಅಂತರಂಗವನ್ನು ಇಣುಕಿ ನೋಡಿ ಅಲ್ಲಿರುವ ಅದಾನಿ, ಅಂಬಾನಿಗಳು ಕಾಣಲಿಲ್ಲವೇ? ನಿಮ್ಮ ಅಕ್ಕಪಕ್ಕದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಸಚಿವರ ಭ್ರಷ್ಟ ಮುಖಗಳೂ ನಿಮಗೆ ಕಾಣಲಿಲ್ಲವೇ ಎಂದು ಪ್ರಧಾನಿ ಮುಂದೆ ಸಾಲು ಸಾಲು ಪ್ರಶ್ನೆಗಳನ್ನು ಇಟ್ಟಿದ್ದಾರೆ.

ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಎಂಬ ವಚನ ಪ್ರಧಾನಿ ನರೇಂದ್ರ ಅವರ ನಡೆ ನುಡಿಗೆ ಹೇಳಿ ಮಾಡಿದಂತಿದೆ ಎಂದು ಅವರು ಜರಿದಿದ್ದಾರೆ.
ರಾಜ್ಯದ ಬಿಜೆಪಿ ಸಚಿವರ 40ಪರ್ಸೆಂಟ್ ಕಮಿಷನ್ ಕಿರುಕಳದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನಿಮ್ಮ ಕಾರ್ಯಾಲಯಕ್ಕೆ ಬರೆದ ಪತ್ರವೂ ನಿಮಗೆ ನೆನಪಾಗಲಿಲ್ಲವೇ?. ನಿಮ್ಮದೇ ಸಚಿವರ ಕಿರುಕಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬದ ನೆನಪೂ ನಿಮಗೆ ಆಗಲಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಳೆದ ಮೂರುವರೆ ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಹೊಡೆದಿರುವ ರಾಜ್ಯದಬಿಜೆಪಿ ಸಚಿವರಿ ಖಂಡಿತ ಇದು ಅಮೃತ ಕಾಲ. ಆದರೆ ನಿಮ್ಮಂತಹ ಭ್ರಷ್ಟರ ಸರ್ಕಾರ ಪಡೆದ ರಾಜ್ಯದ ಜನತೆಗೆ ಇದು ವಿಷಕಾಲವಾಗಿದೆ.

ಲಿಂಗಾಯತ ನಾಯಕರನ್ನು ಬಳಸಿ ಬೀಸಾಡುವ ಬುದ್ದಿ
ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ದಿಯನ್ನು ರಾಜ್ಯದ ಲಿಂಗಾಯತರು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ನಿಮ್ಮ ಇಡೀ ಭಾಷಣದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ ಯಾಕೆ?. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿಯೇ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದಿರಿ. ಯಡಿಯೂರಪ್ಪರನ್ನು ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಿರಿ. ಅವರ ಮಗನಿಗೆ ಕನಿಷ್ಠ ಶಾಸಕನನ್ನಾಗಿ ಮಾಡಲಿಲ್ಲ, ಸಚಿವರನ್ನಾಗಿ ಮಾಡಲಿಲ್ಲ. ಈಗ ಐಟಿ, ಇಡಿ, ಸಿಬಿಐ ಮೂಲಕ ಬಾಯಿಮುಚ್ಚಿಸಿ ಕೂರಿಸಿರುವವರು ನೀವೇ ಅಲ್ಲವೇ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದರು.
ಲಿಂಗಾಯತ ಸಮುದಾಯದಲ್ಲಿ ಎರಡನೇ ತಲೆಮಾರಿನ ನಾಯಕರೇ ಇರಬಾರದೆಂದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಸಂಜಯ ಪಾಟೀಲ್, ಸೊಗಡು ಶಿವಣ್ಣ ಹೀಗೆ ಸಾಲು ಸಾಲು ನಾಯಕರಿಗೆ ಈ ಬಾರಿ ಟಿಕೆಟ್ ನೀಡದೆ ಅವರ ರಾಜಕೀಯ ಜೀವನವನ್ನೇ ಮುಗಿಸುವ ಹುನ್ನಾರ ಮಾಡಿರುವವರು ನೀವೇ ಅಲ್ಲವೇ? ಎಂದರು.
ಜಗದೀಶ್ ಶೆಟ್ಟರ್ ಪರ ಸಿದ್ದರಾಮಯ್ಯ ಪ್ರಶ್ನೆ
ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಲಿಂಗಾಯತರ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಯಾವ ಕಾರಣಕ್ಕೆ ಈ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದಿರಿ?. ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿತ್ತಾ?. ಸಿಡಿ ಹಗರಣವೇನಾದರೂ ಇತ್ತೇ? ಅವರು ಒಳ್ಳೆಯ ಆಡಳಿತಗಾರರರಾಗಿರಲಿಲ್ಲವೇ? ಯಾಕೆ ಅವರನ್ನು ಮೂಲೆಗೆ ತಳ್ಳಿದ್ದೀರಿ? ಅವರ ಈ ಪ್ರಶ್ನೆಗಳು ರಾಜ್ಯದ ಲಿಂಗಾಯತರ ಪ್ರಶ್ನೆಯೂ ಹೌದು. ಧಮ್-ತಾಕತ್ ಇದ್ದರೆ ಇದಕ್ಕೆ ಉತ್ತರ ಕೊಡಿ ಎಂದು ಅವರು ಸವಾಲೆಸದರು.

ಬಂಜಾರ ಸಮುದಾಯ ಮತ್ತು ಕಾಂಗ್ರೆಸ್ ಸಂಬಂಧಕ್ಕೆ ಹುಳಿ ಹಿಂಡುವ ನಿಮ್ಮ ಕುತಂತ್ರ ಫಲ ನೀಡಲಾರದು. ಬಂಜಾರರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಿದ್ದು ಕಾಂಗ್ರೆಸ್ ಪಕ್ಷ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಭೂ ಸುಧಾರಣೆ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿಯನ್ನು ತಂದಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಎನ್ನುವುದು ನಿಮಗೆ ತಿಳಿದಿಲ್ಲವೇ.
ನರೇಂದ್ರ ಮೋದಿಯವರೇ ನಿಮ್ಮ ಇಡೀ ರಾಜಕೀಯ ಬದುಕೇ ಒಂದು ಸುಳ್ಳಿನ ಕೋಟೆ. ಅದು ಮುರಿದು ಬೀಳುವ ಕಾಲ ಬಂದಿದೆ. ಕಾಂಗ್ರೆಸ್ ನಿಮ್ಮನ್ನು 91 ಬಾರಿ ನಿಂದಿಸಿದೆ ಎನ್ನುವುದು ನಿಮ್ಮ ಇತ್ತೀಚಿನ ಸುಳ್ಳು. ನಮ್ಮ ಪಕ್ಷದ ನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಿಂದಿಸುವುದೇ ನಿಮ್ಮ ಮತ್ತು ನಿಮ್ಮ ಪಕ್ಷದ ನಾಯಕರ ದಿನಚರಿ ಅಲ್ಲವೇ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ನಿಮ್ಮ ರಕ್ತದ ಕಣಕಣದಲ್ಲೂ ದ್ವೇಷಾಸೂಯೆಯ ವಿಷ
ಸೋನಿಯಾ ಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದವರು ನೀವೇ ಅಲ್ಲವೇ? ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ತಾನೆ ಸೋನಿಯಾ ಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿಲ್ಲವೇ?. ನಿಮ್ಮ (ನರೇಂದ್ರ ಮೋದಿ) ರಕ್ತದ ಕಣಕಣದಲ್ಲಿಯೂ ದ್ವೇಷಾಸೂಯೆಯ ವಿಷ ಇಲ್ಲವೇ?.
ರಾಜ್ಯದ ಬಿಜೆಪಿ ಸರ್ಕಾರ 9 ಲಕ್ಷ ಮನೆಗಳನ್ನು ಕಟ್ಟಿದೆ ಎಂಬ ಹಸಿ ಹಸಿ ಸುಳ್ಳು ಹೇಳಿದ್ದಿರಿ. ನಾವು ಕಟ್ಟಿರುವ ಮನೆಗಳ ಲೆಕ್ಕವನ್ನು ನಿಮಗೆ ಕೊಟ್ಟು ನಿಮ್ಮಿಂದ ಸುಳ್ಳು ಹೇಳಿಸಿದ ವಸತಿ ಸಚಿವರನ್ನು ಒಮ್ಮೆ ಜನರ ಮಧ್ಯೆ ಬಹಿರಂಗ ಚರ್ಚೆಗೆ ಕರೆತನ್ನಿ.
ಇದು ನನ್ನ ಸವಾಲು ಎಂದು ಗುಡುಗಿದರು.
2013-18ರ ಅವಧಿಯಲ್ಲಿ ರೈತರಿಗೆ ಕೊಟ್ಟ ಮಾತಿನಂತೆ 50 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೀರಾವರಿಗೆ ಖರ್ಚು ಮಾಡಿ ರೈತರ ಹೊಲಕ್ಕೆ ನೀರು ಹರಿಸಿದ ಹೆಮ್ಮೆ ನಮ್ಮದು. ಪ್ರಧಾನಿಯವರೇ ಮೇಕೆದಾಟು, ಕಳಸ -ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳೆರಡೂ ನಿರ್ಲಕ್ಷಿಸುತ್ತಾ ಬಂದಿದೆ ಎನ್ನುವುದನ್ನು ರಾಜ್ಯದ ರೈತರಿಗೆ ಗೊತ್ತಿದೆ.
ಬಿಜೆಪಿಯ ಕಮಿಷನ್ ಚಾಳಿ ಮಠ ಮಂದಿರವನ್ನು ಬಿಟ್ಟಿಲ್ಲ
ಕಮಿಷನ್ ನುಂಗುವ ಕರ್ನಾಟಕ ಬಿಜೆಪಿ ಸರ್ಕಾರದ ಚಾಳಿ ಮಠ-ಮಂದಿರಗಳನ್ನೂ ಬಿಟ್ಟಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೆ ಅದು ತಲುಪುವಾಗ ಕಡ್ಡಿ ಮಾತ್ರ ಉಳಿಯುತ್ತದೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಗಳ ಆಕ್ರೋಶ ನಿಮಗೆ ಕೇಳಿಸಿಲ್ಲವೇ.
ನಿಮ್ಮದೇ ಪಕ್ಷದ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮತ್ತು ಅವರ ಮಗ ಈಗ ಜೈಲಲ್ಲಿರುವುದು ಯಾವ ದೇಶ ಸೇವೆ ಮಾಡಿದ್ದಕ್ಕಾಗಿ. ಪ್ರತಿಷ್ಠಿತ ಕೆಎಸ್ ಡಿಸಿಎಎಲ್ ಕಚೇರಿಯಲ್ಲಿಯೇ ಈ ಶಾಸಕರ ಮಗ ಲಂಚ ತಿನ್ನುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದನ್ನಲ್ಲಾ? ವಿರೂಪಾಕ್ಷಪ್ಪ ಮಾಡಾಳ್ ಮನೆಯಲ್ಲಿ ಎಂಟುವರೆ ಕೋಟಿ ಹಣವನ್ನು ಲೋಕಾಯುಕ್ತರು ವಶಪಡಿಸಿಕೊಂಡಿದ್ದರಲ್ಲಾ ಅದೇನು ಅವರು ಬೆಳೆದ ಅಡಿಕೆ ಮಾರಾಟದ ದುಡ್ಡೇ ಎಂದು ಸಿದ್ದರಾಮಯ್ಯ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟು ಆಕ್ರೊಶ ಹೊರ ಹಾಕಿದರು.












Click it and Unblock the Notifications