ಸಂಪುಟ ವಿಸ್ತರಣೆಗೆ ಅಮಿತ್ ಶಾ ಒಪ್ಪಿಗೆ; ಷರತ್ತುಗಳು ಅನ್ವಯ!
ಬೆಂಗಳೂರು, ಜನವರಿ 31 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲು ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಎರಡು ದಿನದಲ್ಲಿ ಸಂಪುಟ ವಿಸ್ತರಣೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.
ದೆಹಲಿಯಲ್ಲಿರುವ ಯಡಿಯೂರಪ್ಪ ಶುಕ್ರವಾರ ಮಧ್ಯಾಹ್ನ ಸಂಸತ್ ಭವನದಲ್ಲಿ ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದರು. ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಶಾ ಜೊತೆ ಮಾತುಕತೆ ನಡೆಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೂಚನೆ ನೀಡಿದ್ದರು.
ನಾಳೆಯೆ ಸಂಪುಟ ವಿಸ್ತರಣೆ: ಕಳಪೆ ಸಾಧನೆ ಮಾಡಿರುವ ಮಂತ್ರಿಗಳಿಗೆ ಕೋಕ್?
ಶುಕ್ರವಾರ ಬೆಳಗ್ಗೆ 9.30ಕ್ಕೆ ಅಮಿತ್ ಶಾ ಭೇಟಿಯಾಗಬೇಕಿತ್ತು. ಆದರೆ, ಸಂಸತ್ ಅಧಿವೇಶನ, ದೆಹಲಿ ಚುನಾವಣಾ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದ ಕಾರಣ ಶುಕ್ರವಾರ ಮಧ್ಯಾಹ್ನ ಸಂಸತ್ ಭವನದಲ್ಲಿ ಯಡಿಯೂರಪ್ಪ ಅಮಿತ್ ಶಾ ಭೇಟಿಯಾದರು.
ಸಂಪುಟ ಸಂಕಷ್ಟ: ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ
ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಿದ್ದ ಯಡಿಯೂರಪ್ಪ ಅದನ್ನು ಅಮಿತ್ ಶಾಗೆ ನೀಡಿದರು. ಅಮಿತ್ ಶಾ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದ್ದು, "ರಾಜ್ಯ ನಾಯಕರ ಮನವೊಲಿಸಿ" ಎಂಬ ಸೂಚನೆಯನ್ನು ನೀಡಿದರು.
ಯಡಿಯೂರಪ್ಪ; ಸಂಪುಟ ವಿಸ್ತರಣೆ ಲೆಕ್ಕಾಚಾರಗಳು
ಯಡಿಯೂರಪ್ಪ ಹೇಳಿದ್ದೇನು?
ಸಂಸತ್ ಭವನದಲ್ಲಿ ಅಮಿತ್ ಶಾ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, "ಸಚಿವ ಸಂಪುಟ ವಿಸ್ತರಣೆಗೆ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ನಾನು ರಾಜ್ಯಕ್ಕೆ ಹೋಗಿ ರಾಜ್ಯ ನಾಯಕರ ಜೊತೆ ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸುತ್ತೇನೆ. ಎರಡು ಮೂರು ದಿನದಲ್ಲಿ ಎಲ್ಲವೂ ನಿಮಗೆ ತಿಳಿಯಲಿದೆ" ಎಂದರು.
ಪಟ್ಟಿಗೆ ಒಪ್ಪಿಗೆ ಸಿಕ್ಕಿದೆ
"ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಪಟ್ಟಿಯನ್ನು ಅಮಿತ್ ಶಾಗೆ ನೀಡಿದೆವು. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಎಂದು ವಿಸ್ತರಣೆ ಮಾಡಬೇಕು? ಎಂಬುದನ್ನು ಶನಿವಾರ ಸಂಜೆಯೊಳಗೆ ಪ್ರಕಟಿಸುತ್ತೇನೆ" ಎಂದು ಯಡಿಯೂರಪ್ಪ ತಿಳಿಸಿದರು.
ಡಿಸಿಎಂ ಹುದ್ದೆ ಇಲ್ಲ
ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, "ಹೊಸ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿ ಮಾಡುವುದಿಲ್ಲ. ಇರುವ ಉಪಮುಖ್ಯಮಂತ್ರಿಗಳು ಮುಂದುವರೆಯಲಿದ್ದಾರೆ" ಎಂದು ಸ್ಪಷ್ಟಪಡಿಸಿದರು. ಇದರಿಂದಾಗಿ ಡಿಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ನಾಯಕರಿಗೆ ನಿರಾಸೆಯಾಗಿದೆ.
ರಾಜ್ಯ ನಾಯಕರ ಜೊತೆ ಚರ್ಚಿಸಿ
ಸಚಿವ ಸಂಪುಟ ವಿಸ್ತರಣೆ ಬಳಿಕ ಪಕ್ಷದಲ್ಲಿ ಅಸಮಾಧಾನ ಉಂಟಾಗಬಾರದು. ರಾಜ್ಯದ ನಾಯಕರ ಜೊತೆ ಈ ಕುರಿತು ಚರ್ಚೆ ನಡೆಸಿ ಎಂದು ಅಮಿತ್ ಶಾ ಯಡಿಯೂರಪ್ಪಗೆ ಸೂಚನೆ ನೀಡಿದ್ದಾರೆ. ಯಾವ ಶಾಸಕರು ಸಂಪುಟ ಸೇರಲಿದ್ದಾರೆ? ಎಂಬುದು ಗುಟ್ಟಾಗಿಯೇ ಉಳಿದಿದೆ.
ಬಗೆ ಹರಿಯದ ಪ್ರಶ್ನೆಗಳು
ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿದ್ದರೂ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಉಪ ಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ ಎಷ್ಟು ಶಾಸಕರು ಸಚಿವರಾಗಲಿದ್ದಾರೆ?, ಮೂಲ ಬಿಜೆಪಿಯಲ್ಲಿ ಯಾರು ಸಂಪುಟ ಸೇರುವರು?, ಸೋತವರಿಗೆ ಸಚಿವ ಸ್ಥಾನ ಸಿಗಲಿದೆಯೇ?, ಸಂಪುಟ ಪುನಾರಚನೆ ಆಗಲಿದೆಯೇ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.