ಭ್ರಷ್ಟಾಚಾರದ ಸರ್ವ ದಾಖಲೆ ಮುರಿದ ಸಿದ್ದರಾಮಯ್ಯ : ಅಮಿತ್ ಶಾ ವಾಗ್ದಾಳಿ
ಬೆಂಗಳೂರು, ನವೆಂಬರ್ 2 : ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಗುರುವಾರ ಚಾಲನೆ ನೀಡಿದೆ. ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಮೂಲಕ ಬಿಜೆಪಿ ಪ್ರಚಾರ ಆರಂಭಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರ
ಕರ್ನಾಟಕ ಬಿಜೆಪಿ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಯನ್ನು ಬೆಂಗಳೂರು ಹೊರವಲಯದ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿತ್ತು. ಗುರುವಾರ ಮಧ್ಯಾಹ್ನ 2 ಗಂಟೆಗೆ ಈ ಯಾತ್ರೆಗೆ ಅಮಿತ್ ಶಾ ಚಾಲನೆ ಕೊಟ್ಟರು. ನಂತರ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯ ಕರ್ನಾಟಕ ಪರಿವರ್ತನಾ ಯಾತ್ರೆ: ಇಲ್ಲಿದೆ ಮಾರ್ಗಸೂಚಿ ವಿವರ
ಅಮಿತ್ ಶಾ ಭಾಷಣದ ಮುಖ್ಯಾಂಶಗಳು
* ಯಡಿಯೂರಪ್ಪ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಆರಂಭಿಸಿದ್ದಾರೆ. ಜೋರಾಗಿ ಭಾರತ್ ಮಾತಾಕೀ ಜೈ ಎನ್ನಿ ಎಂದು ಅಮಿತ್ ಶಾ ಭಾಷಣ ಆರಂಭಿಸಿದರು.
* ಈ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಯಾತ್ರೆ ಮೂಲಕ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆಯಲು ಈ ಯಾತ್ರೆ ಆರಂಭಿಸಲಾಗಿದೆ.
* ಈ ಪರಿವರ್ತನಾ ಯಾತ್ರೆ ಕೇವಲ ಸರ್ಕಾರ ಬದಲಾವಣೆ ಮಾಡಲು ಅಲ್ಲ. ಕರ್ನಾಟಕದ ಸ್ಥಿತಿ ಬದಲಾವಣೆ ಮಾಡಲು. ಕರ್ನಾಟಕದ ರೈತರ, ಕಾನೂನು ಸುವ್ಯವಸ್ಥೆ ಬದಲಾವಣೆ ಮಾಡಲು ಹಮ್ಮಿಕೊಳ್ಳಲಾಗಿದೆ.
*ದೇಶದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆ ಸಿದ್ದರಾಮಯ್ಯ ಸರ್ಕಾರ ದೇಶದಲ್ಲೇ ಭ್ರಷ್ಟ ಸರ್ಕಾರ ಎಂದು ಹೇಳಿದೆ. ಕರ್ನಾಟಕವನ್ನು ಬದಲಿಸೋಣ. ಪಾರದರ್ಶಕ ಆಡಳಿತವನ್ನು ಕರ್ನಾಟಕದಲ್ಲಿ ನಾವು ಸ್ಥಾಪಿಸೋಣ
* ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಪಾರದರ್ಶಕ ಆಡಳಿತ ನೀಡಿದೆ. ಕರ್ನಾಟಕ ಅಭಿವೃದ್ಧಿಯ ಪಥದಲ್ಲಿತ್ತು. ಆದರೆ, ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ.
* ಕರ್ನಾಟಕಕ್ಕೆ ನರೇಂದ್ರ ಮೋದಿ ಅವರು ಎಷ್ಟು ಅನುದಾನ ಕೊಟ್ಟರೂ ಅದು ಎಲ್ಲಿಗೆ ಹೋಗುತ್ತದೆ ಎಂಬುದು ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಅವರನ್ನು ದೂರುವುದನ್ನು ನಿಲ್ಲಿಸುವುದಿಲ್ಲ.
* 1 ಲಕ್ಷ 50 ಸಾವಿರ ಕೋಟಿ ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ. ಅದನ್ನು ಹೇಗೆ ಖರ್ಚು ಮಾಡಲಾಗಿದೆ? ಎಂದು ಲೆಕ್ಕ ಕೊಡಲು ಸಿದ್ದರಾಮಯ್ಯ ಅವರು ಸಿದ್ಧರಿದ್ದಾರೆಯೇ?
* ಮುದ್ರಾ ಯೋಜನೆಯಡಿ 39 ಸಾವಿರ ಕೋಟಿ, ಸ್ಮಾರ್ಟ್ ಸಿಟಿ ಯೋಜನೆಯಡಿ 960 ಕೋಟಿ, ಅಮೃತ ಯೋಜನೆಯಡಿ 4,953 ಕೋಟಿ ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ. ಈ ಅನುದಾನಗಳು ಎಲ್ಲಿ ಹೋಯಿತು? ಎಂದು ಅಮಿತ್ ಶಾ ಪ್ರಶ್ನೆ ಮಾಡಿದರು.
* ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ಇಲ್ಲ. ದೇಶವಿರೋಧಿಗಳ ಮೇಲೆ ಹಾಕಿದ್ದ ಕೇಸುಗಳನ್ನು ವಾಪಸ್ ತೆಗೆದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಇವರ ಸರ್ಕಾರದ ಅವಧಿಯಲ್ಲಿ 19 ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯಾಗಿದೆ.
* ಮೋದಿ ಸರ್ಕಾರ ಎಲ್ಲ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದೆ. ಆದರೆ. ಸಿದ್ದರಾಮಯ್ಯ ತಮ್ಮನ್ನು ತಾವು ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಹಿಂದುಳಿದ ವರ್ಗಗಗಳಿಗೆ ಸಹಾಯಕವಾಗುವ ವಿಧೇಯಕ ಜಾರಿಗೆ ತಂದಾಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಹಕಾರ ನೀಡಲಿಲ್ಲ.
* ನರೇಂದ್ರ ಮೋದಿ ಅವರ 130 ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅದು ಕರ್ನಾಟಕದಲ್ಲಿ ಜಾರಿ ಆಗುತ್ತಿಲ್ಲ ಅದಕ್ಕೆ ಸಿದ್ದರಾಮಯ್ಯ ಅವರ ದುರಾಡಳಿತ ಕಾರಣ. ನನ್ನ ವಿನಂತಿ ಏನು ಎಂದರೆ ಮೋದಿ ಅವರ ಜನಪರ ಕಾರ್ಯಗಳಿಗೆ ಹೆಗಲು ಕೊಟ್ಟು ನಿಲ್ಲಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆ ಮಾಡೋಣ.
* ಎಲ್ಲರೂ ನನ್ನ ಜೊತೆ ಜೋರಾಗಿ ಹೇಳಿ ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಸ್ಥಾಪನೆ ಮಾಡೋಣ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ 75 ದಿನಗಳ ಕಾಲ ಯಾತ್ರೆ ಸಂಚಾರ ನಡೆಸಲಿದೆ. ಜನವರಿ 28ರಂದು ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ.
ಅಮಿತ್ ಶಾ ಸಮ್ಮುಖದಲ್ಲಿ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಮತ್ತು ಕುಡಚಿ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್ ಬಿಜೆಪಿ ಸೇರಿದರು.