108 ಆಂಬುಲೆನ್ಸ್ ಸಿಬ್ಬಂದಿ ಪ್ರತಿಭಟನೆ: ಗುರುವಾರ ಸೇವೆ ಸ್ಥಗಿತ ಸಾಧ್ಯತೆ
ಬೆಂಗಳೂರು, ನವೆಂಬರ್ 16: ಬಾಕಿ ಉಳಿದ ವೇತನ ಬಿಡುಗಡೆಗೆ ಒತ್ತಾಯಿಸಿ ಆಂಬುಲೆನ್ಸ್ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ರಾಜ್ಯಾದ್ಯಂತ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸರ್ವರ್ ಸಮಸ್ಯೆಯಿಂದ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲಾಗದೆ ಸಂಕಷ್ಟಕ್ಕೀಡಾಗಿದ್ದರು. ಇದೀಗ ನೌಕರರ ಮುಷ್ಕರ ನಡೆಸುತ್ತಿದ್ದು, ಮತ್ತೆ ರೋಗಿಗಳಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಎದುರಾಗಿದೆ.
ದಯಾಮರಣ ಕೋರಿ ಅರ್ಜಿ ಸಲ್ಲಿಸಿದ ಸಾಗರದ ದಂಪತಿ: ಅಧಿಕಾರಿಗಳ ಸ್ಪಷ್ಟನೆ
ಆಂಬುಲೆನ್ಸ್ ಸಿಬ್ಬಂದಿಗಳು ಮಂಗಳವಾರ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ, ತಕ್ಷಣವೇ ವೇತನವನ್ನು ಪಾವತಿಸಬೇಕೆಂದು ಬೆಂಗಳೂರಿನ ಆರೋಗ್ಯ ಸೌಧದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಆಂಬುಲೆನ್ಸ್ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿರುವ ಜಿವಿಕೆ ಸಂಸ್ಥೆ ಕಳೆದ ಎರಡು ತಿಂಗಳಿನಿಂದ ಸಿಬ್ಬಂದಿಗಳಿಗೆ ವೇತನವನ್ನು ನೀಡಿಲ್ಲ. ಈ ಕುರಿತು ಈಗಾಗಲೇ ಆರೋಗ್ಯ ಇಲಾಖೆ ಆಯುಕ್ತರು ಸಭೆ ನಡೆಸಿ ಮೂರು ತಿಂಗಳ ವೇತನವನ್ನು ಬಿಡುಗಡೆ ಮಾಡುವಂತೆ ಜಿವಿಕೆ ಸಂಸ್ಥೆಗೆ ಸೂಚನೆ ನೀಡಿದ್ದರು. ಆದರೂ ಜಿವಿಕೆ ಸಂಸ್ಥೆ ವೇತನ ಬಿಡುಗೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಆಂಬುಲೆನ್ಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ, ಕಳೆದ ತಿಂಗಳಿನಿಂದ ರಾಜ್ಯದಲ್ಲಿ ಆಂಬುಲೆನ್ಸ್ ಸೇವೆ ನಿರ್ವಹಣೆ ಮಾಡುತ್ತಿರುವ ಜಿವಿಕೆ ವೇತನವನ್ನು ಬಾಕಿ ಉಳಿಸಿಕೊಂಡಿದೆ. ಇದೇ ವೇತನವನ್ನು ನಂಬಿರುವ ನೌಕರರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೆ ಸಾಕಷ್ಟು ಬಾರಿ ಸಂಸ್ಥೆಯೊಂದಿಗೆ ವೇತನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಆದರೂ ಮನವಿಗೆ ಸ್ಪಂದಿಸಿಲ್ಲ. ಹಾಗಾಗಿ ಗುರುವಾರ ಸಂಜೆಯೊಳಗೆ ವೇತನ ಬಿಡುಗಡೆ ಮಾಡದೇ ಇದ್ದರೆ ಆಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ತುರ್ತು ಪರಿಸ್ಥಿತಿ ಉಂಟಾದರೆ ಜಿವಿಕೆ ಹೊಣೆ
ಗುರುವಾರ ಸಂಜೆಯೊಳಗೆ ನಮಗೆ ವೇತನ ಬಿಡುಗಡೆ ಮಾಡಬೇಕು, ಒಂದು ವೇಳೆ ವೇತನ ಸಿಗದಿದ್ದರೆ ರಾಜ್ಯಾದ್ಯಂತ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಇದರಿಂದ ಆಗುವ ಅನಾಹುತಗಳಿಗೆ ಜಿವಿಕೆ ಸಂಸ್ಥೆಯೆ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಾಕಿ ಉಳಿದಿರುವ ವೇತನದ ಜೊತೆಗೆ ಸಿಬ್ಬಂದಿಗೆ ವೇತನವನ್ನು ಹೆಚ್ಚಳ ಮಾಡಬೇಕು, ಪ್ರಸ್ತುತ ಸಿಗುತ್ತಿರುವ ವೇತನ ಸಾಲತ್ತಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಬ್ಲಾಕ್ ಲಿಸ್ಟ್ಗೆ ಸೇರಿಸುವ ಎಚ್ಚರಿಕೆ ನೀಡಿದರೂ ಬಗ್ಗದ ಸಂಸ್ಥೆ
ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕೆಂದು ಹಿಂದಿನ ಸಭೆಯಲ್ಲಿ ಜಿವಿಕೆ ಸಂಸ್ಥೆಗೆ 3 ದಿನ ಗಡುವು ನೀಡಿದ್ದೆವು. ಒಂದು ವೇಳೆ ಮೂರು ದಿನಗಳಲ್ಲಿ ವೇತನ ನೀಡದಿದ್ದರೆ ಸಂಸ್ಥೆಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸುವುದಾಗಿ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಎಚ್ಚಸಿಕೆ ನೀಡಿದ್ದರು. ಆದರೆ ಗಡುವು ಮುಗಿದರೂ ವೇತನ ಬಿಡುಗಡೆ ಮಾಡಿಲ್ಲ ಎಂದು ಅಸಮಧಾನ ಹೊರ ಹಾಕಿದರು.