ಸಚಿವ ಅಂಬರೀಶ್ ಮುನಿಸು ಸದ್ಯಕ್ಕೆ ಶಮನ?
ಬೆಂಗಳೂರು, ಜುಲೈ 09 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡು ಅಧಿವೇಶನ ಮುಗಿಯುವ ಮೊದಲೇ ವಸತಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಬೆಂಗಳೂರಿಗೆ ಬಂದಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಸುದ್ದಿಗಳು ಹಬ್ಬಿವೆ.
ಅಂಬರೀಶ್ ಅವರ ಬಂಡಾಯವನ್ನು ತಣ್ಣಗೆ ಮಾಡುವ ಪ್ರಕ್ರಿಯೆಗಳು ಕಾಂಗ್ರೆಸ್ನಲ್ಲಿ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಪ್ತ ಸಚಿವರ ಸಭೆ ನಡೆಸಿದ್ದಾರೆ. ಮಳವಳ್ಳಿ ಶಾಸಕ ಪಿ.ನರೇಂದ್ರ ಸ್ವಾಮಿ ಅವರೊಂದಿಗೂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಗುರುವಾರದ ಬೆಳವಣಿಗೆಗಳ ಮಾಹಿತಿಗಳು ಇಲ್ಲಿವೆ [ಅಂಬರೀಶ್ ಬರೆದ ಪತ್ರದಲ್ಲೇನಿದೆ?]

* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಅಂಬರೀಶ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, 'ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇಮಕದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಮ್ಮನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ' ಎಂದು ಅವರು ಅಂಬರೀಶ್ ಅವರಿಗೆ ಭರವಸೆ ನೀಡಿದ್ದಾರೆ.
* 'ಇಂದು ನಾನು ಯಾವುದೇ ಮಠಕ್ಕೆ ತೆರಳುತ್ತಿಲ್ಲ. ಸಂಜೆ 6 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಎಲ್ಲಾ ವಿಚಾರಗಳ ಕುರಿತು ಮಾಹಿತಿ ನೀಡುತ್ತೇನೆ' ಎಂದು ವಸತಿ ಸಚಿವ ಅಂಬರೀಶ್ ಅವರು ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
* ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದೆ : 'ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇರುವುದು ಅಂಬರೀಶ್ ಅವರ ಅಸಮಾಧಾನದಿಂದ ಬಹಿರಂಗಗೊಂಡಿದೆ. ಸಿದ್ದರಾಮಯ್ಯ ಅವರ ಕಾರ್ಯ ವೈಖರಿ ಪಕ್ಷದ ನಾಯಕರಿಗೆ ಸಮಾಧಾನ ತರುತ್ತಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅಂಬರೀಶ್ ಅವರಿಗೆ ಬಿಟ್ಟ ವಿಚಾರ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
* ಸಚಿವರ ಮಾತುಕತೆ : ಸಕ್ಕರೆ ಮತ್ತು ಸಹಕಾರ ಸಚಿವ ಮಹದೇವ ಪ್ರಸಾದ್ ಅವರು ದೂರವಾಣಿ ಮೂಲಕ ಸಚಿವ ಅಂಬರೀಶ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಪಕ್ಷದ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಮಹದೇವ ಪ್ರಸಾದ್ ಅವರು ಭರವಸೆ ನೀಡಿದ್ದಾರೆ. ಸ್ವಾಮೀಜಿಗಳನ್ನು ಭೇಟಿ ಮಾಡಬೇಡಿ ಎಂದು ಸಚಿವರು ಅಂಬರೀಶ್ ಅವರಿಗೆ ದೂರವಾಣಿ ಮೂಲಕ ಕೋರಿದ್ದಾರೆ.
* ಸಂಧಾನ ನಡೆಸಲಿದ್ದಾರೆ ನರೇಂದ್ರ ಸ್ವಾಮಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಮತ್ತು ಮಳವಳ್ಳಿ ಶಾಸಕ ಪಿ.ನರೇಂದ್ರ ಸ್ವಾಮಿ ಅವರರೊಂದಿಗೆ ಅಂಬರೀಶ್ ಅವರ ಪತ್ರದ ಬಗ್ಗೆ ಮಾತುಕತೆ ನಡೆಸಿದ್ದು, ಅಂಬರೀಶ್ ಮನವೊಲಿಸುವಂತೆ ಸೂಚನೆ ನೀಡಿದ್ದಾರೆ.












Click it and Unblock the Notifications