ಕೆನರಾ ಜೊತೆ ಅಮಾನತ್ ಬ್ಯಾಂಕ್ ವಿಲೀನ
ಬೆಂಗಳೂರು, ಆ.1 : ಮುಚ್ಚುವ ಹಂತದಲ್ಲಿದ್ದ ಅಮಾನತ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ಜೊತೆ ವಿಲೀನ ಮಾಡಲು ಕರ್ನಾಟಕ ಹೈಕೋರ್ಟ್ ಒಪ್ಪಿಗೆ ನೀಡಿದೆ. ಒಂದು ತಿಂಗಳವೊಳಗೆ ಈ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೋರ್ಟ್ ಸೂಚನೆ ನೀಡಿದೆ.
ಮುಳುಗಡೆ ಹಂತದಲ್ಲಿದ್ದ ಅಮಾನತ್ ಕೋ. ಬ್ಯಾಂಕ್ ಅನ್ನು ವಿಲೀನ ಮಾಡುವುದನ್ನು ಪ್ರಶ್ನಿಸಿ ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ಹಾಗೂ ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮ್ ಮೋಹನ್ ರೆಡ್ಡಿ ಅವರ ಏಕಸದಸ್ಯ ಪೀಠ, ಅಮಾನತ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ಜೊತೆ ವಿಲೀನ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ವಿಲೀನಕ್ಕೆ ಸಂಬಂಧಿಸಿದಂತೆ ಸಹಕಾರ ಸಂಘ ಕಾಯ್ದೆ 1959ರ ಅನ್ವಯ 15 ದಿನದಲ್ಲಿ ಸಹಕಾರ ಸಂಘದ ರಿಜಿಸ್ಟ್ರಾರ್ ಗೆಜೆಟಿಯರ್ ಸುತ್ತೋಲೆ ಹೊರಡಿಸಿ ಒಂದು ತಿಂಗಳ ಒಳಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಅಮಾನತ್ ಬ್ಯಾಂಕ್ ಎಲ್ಲಾ ಆಸ್ತಿಯ ವಿಲೇವಾರಿ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳಿಸಿ ಕೆನರಾ ಬ್ಯಾಂಕ್ ಗೆ ಒಪ್ಪಿಸುವಂತೆ ಸಹಕಾರ ಸಂಘದ ರಿಜಿಸ್ಟ್ರಾರ್ ಅವರಿಗೆ ಆದೇಶಿಸಿದೆ. [ಅಮಾನತ್ ವಿಲೀನಕ್ಕೆ ಕೆನರಾ ಸಮ್ಮತಿ]
ಬ್ಯಾಂಕ್ ವಿಲೀನ ಮಾಡುವ ಸಂಬಂಧ ಶೇ.6 ರಷ್ಟು ಮುದ್ರಾಂಕ ವೆಚ್ಚವನ್ನು ಕಡಿತಗೊಳಿಸುವ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಬ್ಯಾಂಕ್ ನಲ್ಲಿ ಹಣ ಹೂಡಿದ ಎಲ್ಲಾ ಗ್ರಾಹಕರು ಕಷ್ಟ ಪಟ್ಟು ದುಡಿದ ಹಣ ಇದಾಗಿದ್ದು, ಅವರ ಸಂರಕ್ಷಣೆಗೆ ಆರ್ಬಿಐ ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರ್ಟ್ ಸೂಚಿಸಿದೆ.
2.20 ಲಕ್ಷ ಗ್ರಾಹಕರು : ಅಮಾನತ್ ಬ್ಯಾಂಕ್ ನಲ್ಲಿ ಒಟ್ಟು 2.20 ಲಕ್ಷ ಗ್ರಾಹಕರಿದ್ದು, ಅದರಲ್ಲಿ 90 ಸಾವಿರ ಖಾತೆದಾರರಿದ್ದಾರೆ. ಅಮಾನತ್ ಬ್ಯಾಂಕ್ ವರ್ಷಗಳ ಕಾಲ ಲಾಭದಾಯಕವಾಗಿ ನಡೆಯುತ್ತಿತ್ತು. ಆದರೆ 1998-2000 ಅವಧಿಯಲ್ಲಿ ಬ್ಯಾಂಕ್ ನ ಕೆಲವು ಸಿಬ್ಬಂದಿಯ ಹಣದಾಸೆಗಾಗಿ 66.41 ಕೋಟಿ ನಷ್ಟ ಅನುಭವಿಸಿತ್ತು.
ಈ ಪ್ರಕರಣದ ನಂತರ ಬ್ಯಾಂಕ್ ಮುಳುಗಡೆ ಹಾದಿ ಹಿಡಿದಿತ್ತು. ಅಮಾನತ್ ಬ್ಯಾಂಕ್ ನಲ್ಲಿ ಹಣ ಹೂಡಿರುವವರಿಗೆ ಯಾವುದೇ ಅನ್ಯಾಯವಾಗಬಾರದು. ಬ್ಯಾಂಕ್ ನಲ್ಲಿ ನಡೆದಿರುವ ಅವ್ಯವಹಾರ ಮತ್ತು ಹಣ ದುರುಪಯೋಗ ಪ್ರಕರಣದ ಮುಂದಿನ ವಿಚಾರಣೆ ಎರಡು ತಿಂಗಳಲ್ಲಿ ನಡೆಸಲಾಗುವುದು ಎಂದು ಹೇಳಿದರುವ ಕೋರ್ಟ್, ವಿಚಾರಣೆ ಮುಂದೂಡಿದೆ.












Click it and Unblock the Notifications