ಸರ್ಕಾರದ ಸೌಲಭ್ಯ ಪಡೆಯಲು ಇನ್ಮುಂದೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಿಲ್ಲ!
ಬೆಂಗಳೂರು, ಜ. 08: ಇನ್ಮುಂದೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿಲ್ಲ. ಒಂದೇ ಸೂರಿನಡಿ ಎಲ್ಲ ಕೆಲಸಗಳು ಆಗುವಂತೆ ಏಕಗವಾಕ್ಷಿ ಪದ್ದತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು, ಇಂದು ನಡೆದ ಯೋಜನಾ ಮಂಡಳಿಯ ಮೊದಲ ಸಭೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಸ ಆದೇಶ ಮಾಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಯೋಜನಾ ಮಂಡಳಿಯ ನಡೆದ ಮೊದಲ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಕಾರ್ಯಯೋಜನೆ ರೂಪಿಸಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ಬಡವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಏಕಗವಾಕ್ಷಿ (Single Window) ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ಈ ಯೋಜನೆಯಡಿ ಪಡಿತರ ಚೀಟಿ, 3 ರಿಂದ 6 ತಿಂಗಳ ಮಕ್ಕಳಿಗೆ ಮನೆಗೆ ಆಹಾರ ವಸ್ತುಗಳು ಪೂರೈಕೆ, ಮಾತೃಪೂರ್ಣ ಯೋಜನೆ, ಮಾತೃ ವಂದನಾ ಯೋಜನೆ, ಹಿರಿಯ ನಾಗರಿಕರಿಗೆ ಮಧ್ಯಾಹ್ನದ ಊಟ, ತಾಯಿ ಚೀಟಿ, ಆಯುಷ್ಯಮಾನ್ ಭಾರತ ಆರೋಗ್ಯ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಕಾರ್ಮಿಕ ಚೀಟಿ, ಹಿರಿಯ ನಾಗರಿಕರ ಚೀಟಿ, ಮೈತ್ರಿ, ಮನಸ್ವಿನಿ, ವಸತಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಸೌಲಭ್ಯಗಳನ್ನು ಒಂದೆ ಕಡೆಗೆ ಪಡೆದುಕೊಳ್ಳಲು ಸಹಾಯವಾಗಲಿದೆ.
ರಾಜ್ಯದ ಸ್ಥಾನ
ಅದರೊಂದಿಗೆ 2030 ರೊಳಗೆ ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಯೋಜನಾ ಮಂಡಳಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 17 ಸುಸ್ಥಿರ ಅಭಿವೃದ್ಧಿಯಲ್ಲಿ ಕರ್ನಾಟಕ 100 ಕ್ಕೆ 66 ಅಂಕಗಳೊಂದಿಗೆ ದೇಶದಲ್ಲಿ 6ನೇ ಸ್ಥಾನದಲ್ಲಿದೆ.
ಬಡತನ ಮುಕ್ತ, ಹಸಿವು ಮುಕ್ತ, ಲಿಂಗ ಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳು-ಈ ಆರು ಗುರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬೇಕಿದೆ. ಈ ಗುರಿಗಳ ಪೈಕಿ ವಿಷಯವಾರು ತಜ್ಞರ ಅಧ್ಯಯನ ಮತ್ತು ಸಲಹೆಗಳನ್ನು ಆಧರಿಸಿ ವರದಿ ನೀಡಲು ರಾಜ್ಯ ಯೋಜನಾ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಪ್ರಮುಖ ನಿರ್ಣಯಗಳು
• ಕರ್ನಾಟಕ ರಾಜ್ಯ ಯೋಜನಾ ಮಂಡಳಿಯನ್ನು 'ಕರ್ನಾಟಕ ರಾಜ್ಯನೀತಿ ಮತ್ತುಯೋಜನೆ ಆಯೋಗ' (Karnataka State Policy and Planning Commission) ಎಂದು ಮರುನಾಮಕರಣ ಮಾಡುವುದರೊಂದಿಗೆ ಬಲವರ್ಧನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಲಹಾ ಸಮಿತಿಗಳನ್ನು ರಚಿಸಲು ಹಾಗೂ ಸಲಹಾ ಸಮಿತಿ ರಚನೆ(ಮಾದರಿ) ಯನ್ನುಅನುಮೋದಿಸಲಾಯಿತು.
• 5 ತಾಂತ್ರಿಕ ವಿಭಾಗಗಳಿಗೆ ಅನುಮೋದನೆ ಹಾಗೂ ಯೋಜನಾ ಮಂಡಳಿಯಲ್ಲಿ 2 ರಿಸರ್ಚ್ ಆಫೀಸರ್ ಹುದ್ದೆಗಳು ಇದ್ದು, ಹೆಚ್ಚುವರಿಯಾಗಿ 3 ರಿಸರ್ಚ್ ಆಫೀಸರ್ ಹುದ್ದೆಗಳ ಮಂಜೂರಾತಿಗೆ ತೀರ್ಮಾನ.
•ಕರ್ನಾಟಕದಲ್ಲಿ 'ಸಿ.ಎಂಡ್ಯಾಶ್ಬೋರ್ಡ್' ಅಭಿವೃದ್ಧಿಪಡಿಸುವುದು. command, Control, computers, communication and combat ಈ ಡ್ಯಾಶ್ ಬೋರ್ಡ್ ನಿಂದ ಏಕಕಾಲದಲ್ಲಿ ಆರ್ಥಿಕ ವ್ಯವಸ್ಥೆಯ ಮೇಲ್ವಿಚಾರಣೆ ಹಾಗು ನಿರ್ಧರಿತ ಸಮಯದಲ್ಲಿಅಭಿವೃದ್ಧಿ ಯೋಜನೆಗಳುಪುರ್ಣಗೊಳಿಸಲು ಸಾಧ್ಯವಾಗಲಿದೆ.
• ಪ್ರಾದೇಶಿಕ ಸಮತೋಲನೆಗೆ ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ತಾಲ್ಲೂಕುಗಳಿಗೆ ಹೆಚ್ಚಿನ ಒತ್ತು ನೀಡುವುದು. ಜಿಲ್ಲಾ ಯೋಜನಾ ಸಮಿತಿಗಳನ್ನು 'ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ' ದೊಂದಿಗೆ ಸಮೀಕರಿಸುವುದು.
ಗ್ರಾಮ ಅಭಿವೃದ್ಧಿ ಯೋಜನೆ
- ಗ್ರಾಮಮಟ್ಟದ "ಗ್ರಾಮ ಅಭಿವೃದ್ಧಿ ಯೋಜನೆ"ತಯಾರಿಸುವುದು.
- ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಗೆ ರೂ.600 ಕೋಟಿಗಳ ಅನುದಾನ ಒದಗಿಸುವುದು.
- 2021-22ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಯೋಜನೆಗಳ ಸಮೀಕರಣ ಮಾಡುವುದು.
- GSDP ಅಂದಾಜು ವಿಧಾನ ಹಾಗೂ ಸಮೀಕ್ಷೆಗಳು ತೆಗೆದುಕೊಳ್ಳುವುದು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆದಾಯ ವೃದ್ಧಿಸಲು ವಿಧಾನಗಳ ಕುರಿತು ಯೋಜನೆ ರೂಪಿಸುವುದು.
- ಎಂಎಸ್ಎಂಇ ಪುನಶ್ಚೇತನಗೊಳಿಸಲು ವರಿದಿಯನ್ನು ಐಸೆಕ್ ವತಿಯಿಂದ ಸಿದ್ಧಪಡಿಸುವುದು.
- ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸಿ ʼಮತ್ಸ್ಯ ಸಂಪದʼ ಯೋಜನೆಯಡಿ ಆತ್ಮನಿರ್ಭರ್ ಯೋಜನೆಯ ಅನುದಾನ ಪಡೆಯುವುದು.
- ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ 'SDG Outreach Centre' ಸ್ಥಾಪಿಸುವುದು.
- ಬೆಂಗಳೂರಿನಲ್ಲಿ 'ಕರ್ನಾಟಕ ವಿಜ್ಞಾನ ನಗರ' ಪಿಪಿಪಿ ಅಡಿಯಲ್ಲಿ ಸ್ಥಾಪಿಸುವುದು.
- ಆಯವ್ಯಯದಲ್ಲಿ ಯೋಜನೆಗಳಿಗೆ ನಿಗದಿಪಡಿಸಿದ ಒಟ್ಟು ಅನುದಾನಕ್ಕೆ ಶೇ.1ರಷ್ಟು ಕರ್ನಾಟಕ ಇನ್ನೋವೇಷನ್ ಕಾರ್ಯಕ್ರಮಗಳಿಗೆ ಒದಗಿಸುವುದು.
- ಜಿಲ್ಲಾ ಯೋಜನಾ ವಿಭಾಗವನ್ನು 'ಕರ್ನಾಟಕ ರಾಜ್ಯನೀತಿ ಮತ್ತು ಯೋಜನಾ ಆಯೋಗದ' ವ್ಯಾಪ್ತಿಗೆ ತರುವುದು.
ಕರ್ನಾಟಕ ರಾಜ್ಯನೀತಿ
- ನೀತಿ ಆಯೋಗದಲ್ಲಿದಂತೆ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವನ್ನು"ಕರ್ನಾಟಕ ರಾಜ್ಯನೀತಿ ಮತ್ತುಯೋಜನೆ ಆಯೋಗದ"ವ್ಯಾಪ್ತಿಗೆ ತರುವುದು.
- ನೀತಿ ಆಯೋಗದ Development Monitoring and Evaluation Office (DMEO) ದಲ್ಲಿದಂತೆ ಕರ್ನಾಟಕದಲ್ಲಿ ಮೌಲ್ಯಮಾಪನ ವ್ಯವಸ್ಥೆ ಬಲಪಡಿಸುವುದು.
- ರೂ.100ಕೋಟಿ ಹಾಗೂ ಅಧಿಕ ಅನುದಾನ ಪಡೆದ ಎಲ್ಲಾ ಯೋಜನೆಗಳನ್ನುಕಡ್ಡಾಯವಾಗಿ ಮೌಲ್ಯಮಾಪನಕ್ಕೆಒಳಪಡಿಸುವುದು.
- 118ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಂದೇ ರೀತಿಯ ಉದ್ದೇಶಗಳು ಇದ್ದರೆ ರಾಜ್ಯದ ಯೋಜನೆ ಸಮೀಕರಿಸುವುದು.
- ಫಲಿತಾಂಶ ಆಧಾರಿತ ಯೋಜನೆಗಳ ಮ್ಯಾಪಿಂಗ್ ಮಾಡುವುದು.
- ಒಂದು ಕೋಟಿಗಿಂತ ಕಡಿಮೆ ಇರುವ ಎಲ್ಲಾ ಯೋಜನೆಗಳನ್ನು ದೊಡ್ಡ ಯೋಜನೆಗಳೊಂದಿಗೆ ವಿಲೀನಗೊಳಿಸುವುದು.
- ಕೃಷಿ ಉತ್ಪಾದಕತೆಯಲ್ಲಿ ಹೆಚ್ಚಳವನ್ನು ಸಾಧಿಸಲು ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ವಲಯ ಯೋಜನೆಗಳೊಂದಿಗೆ ವಿಲೀನಗೊಳಿಸಲಾಗುವುದು.
- ಕೇಂದ್ರ ಸರ್ಕಾರದ ಮಾದರಿಯಂತೆ ರಾಜ್ಯದ 1745 ಯೋಜನೆಗಳನ್ನು ಅಂಬ್ರೆಲಾ ಯೋಜನೆಗಳಿಗೆ ಸಮೀಕರಿಸುವುದು.
- ಕೇಂದ್ರ ಪುರಸ್ಕೃತ ಯೋಜನೆಗಳ ಪಾಲನ್ನುಶೇ.8ಕ್ಕಿಂತ ಹೆಚ್ಚಿಸಲು ಕ್ರಮವಹಿಸುವುದು.
- ವನ ತೋಟಗಾರಿಕೆ ಯೋಜನೆಯಡಿ ಪರಿಸರವನ್ನು ಸಂರಕ್ಷಿಸಲು ರೈತರು ತಮ್ಮ ಭೂಮಿಯಲ್ಲಿ ಹಣ್ಣುಗಳು, ತೋಟಗಳು, ಉರುವಲು ಮೇವು ಹಾಗೂ ಕರಕುಶಲತೆಗೆ ಸಂಬಂಧಿಸಿದ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಕ ಪ್ಯಾಕೇಜ್ಳನ್ನು ನೀಡಲು ಹಾಗೂ ವನತೋಟಗಾರಿಕೆ ಸಮಗ್ರ ಕೃಷಿ ವ್ಯವಸ್ಥೆಯ ಭಾಗವಾಗಿರಲು ಕ್ರಮವಹಿಸುವುದು.
- ಕೇಂದ್ರ ಸರ್ಕಾರದ ಕೌಶಲ್ಯ ಯೋಜನೆಯಡಿ (NAPS) ರೂ. 6,090 ಕೋಟಿಗಳನ್ನುಪಡೆದು, (ರೂ.7500 - ತರಬೇತಿ + ಮಾಸಿಕ ರೂ.1500 /24 ತಿಂಗಳಿಗೆ) 14 ಲಕ್ಷ ಯುವಕ ಯುವತಿಯರನ್ನು ಕೈಗಾರಿಕಾ ಸಂಘಗಳ ಮೂಲಕ ಕೌಶಲ್ಯತೆ ತರಬೇತಿ (ಅಪ್ರೆಂಟಿಸ್ಶಿಪ್) ಮತ್ತು ನೇಮಕಾತಿ ನೀಡಬಹುದಾಗಿದೆ.
- ಪಿಪಿಪಿ ಮಾದರಿಯಲ್ಲಿ ರಾಜ್ಯಕ್ಕೆ ಒಂದು ಕೌಶಲ್ಯ ವಿಶ್ವವಿದ್ಯಾಲಯವನ್ನುಸ್ಥಾಪಿಸುವುದು.
ಬೆಂಗಳೂರು ಮಾನವ ಅಭಿವೃದ್ಧಿ ವರದಿ
- ಎಲ್ಲಾಶಾಲೆ/ಕಾಲೇಜು ಮಕ್ಕಳಿಗೆ UNICEF - UNDP ಮೂಲಕ ವೃತ್ತಿಮಾರ್ಗದರ್ಶನ ನೀಡುವುದು.
- ಪ್ರತಿಯೊಂದು ಗ್ರಾಮಪಂಚಾಯತ್ನಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಒಂದು ಸ್ಮಾರ್ಟ್ ಶಾಲೆಯನ್ನು ಸ್ಥಾಪಿಸಲಾಗುವುದು.
- ಮುಂಬೈ ಹಾಗು ದೆಹಲಿ ಮಾದರಿಯಲ್ಲಿ ಬೆಂಗಳೂರು ಮಾನವ ಅಭಿವೃದ್ಧಿ ವರದಿ ಸಿದ್ಧಪಡಿಸುವುದು.
- ಸುಸ್ಥಿರ ಅಭಿವೃದ್ಧಿ ಗುರಿಗಳು ಸಾಧಿಸಲು ಹೊಸ ನೀತಿಗಳನ್ನು ರೂಪಿಸುವುದು. -ಕರ್ನಾಟಕ ರಾಜ್ಯ ಪೋಷಣೆ ನೀತಿ ಜಾನುವಾರು ಅಭಿವೃದ್ಧಿಗಾಗಿ ಸಮಗ್ರ ನೀತಿ ಕರ್ನಾಟಕ ಮೇವು ಭದ್ರತೆ ನೀತಿ, ಕರ್ನಾಟಕ ಸಮಗ್ರ ಕುರಿ ಮತ್ತುಮೇಕೆ ಬೆಳವಣಿಗೆ ನೀತಿ ಹಾಗೂ ನಗರೀಕರಣ ನೀತಿ
- ಕೌಶಲ್ಯಾಭಿವೃದ್ಧಿ -ಮಹಿಳೆಯರಿಗೆ ಆದ್ಯತೆ
- ಗ್ರಾಮಪಂಚಾಯತಿ ಮಟ್ಟದಲ್ಲಿ ರೈತರ ಉತ್ಪಾದಕ ಸಂಘಗಳು ನೂ ತನ ಮಾದರಿಯಲ್ಲಿಸ್ಥಾಪಿಸುವುದು
- ಸ್ಮಾರ್ಟ ಸಿಟಿ ರೀತಿಯಲ್ಲಿ ಸ್ಪಾಂಜ್ ಸಿಟಿ ಪರಿಕಲ್ಪನೆ ಬೆಳಸಬೇಕು.
- ನೀರಾವರಿ ಆಯೋಗ ಸ್ಥಾಪಿಸುವುದು.
ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.