ಸಮಾಜ ಕಲ್ಯಾಣ ಇಲಾಖೆಯಿಂದ 'ಐರಾವತ' ಟ್ಯಾಕ್ಸಿ ಯೋಜನೆ
ಬೆಂಗಳೂರು, ಸೆಪ್ಟೆಂಬರ್ 26 : ಸಮಾಜ ಕಲ್ಯಾಣ ಇಲಾಖೆ ಎಸ್ಸಿ/ಎಸ್ಟಿ ಪಂಗಡದ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸಲು ಹೊಸ ಯೋಜನೆಯನ್ನು ಜಾರಿಗೆ ತರಲಿದೆ. ಈ ಯೋಜನೆ ಅನ್ವಯ ರಾಜ್ಯದ ಮೂರು ನಗರದಲ್ಲಿ ಹೊಸ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತದೆ.
225 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ 'ಐರಾವತ' ಎಂಬ ಯೋಜನೆ ಜಾರಿಗೆ ತರಲಿದೆ. ಯೋಜನೆ ಅನ್ವಯ 4,500 ಕಾರುಗಳನ್ನು ಖರೀದಿ ಮಾಡಲಾಗುತ್ತಿದ್ದು, ಮೂರು ನಗರದಲ್ಲಿ ಟ್ಯಾಕ್ಸಿಗಳು ಸಂಚಾರ ನಡೆಸಲಿವೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಿಂದೆಯೂ ಟ್ಯಾಕ್ಸಿ ಖರೀದಿಗೆ ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿತ್ತು. ಆದರೆ, ಅದರ ಅನುಷ್ಠಾನದ ಬಗ್ಗೆ ಹಲವಾರು ದೂರುಗಳಿದ್ದವು. ಆದ್ದರಿಂದ, ನೂತನ ಮಾದರಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಎಸ್ಸಿ/ಎಸ್ಟಿ ಪಂಗಡಕ್ಕೆ ಸೇರಿದ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸಲು 'ಐರಾವತ' ಯೋಜನೆ ಜಾರಿಗೆ ಬರಲಿದೆ. ಪ್ರತಿಷ್ಠಿತ ಊಬರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಪ್ರಾಯೋಗಿಕ ಯೋಜನೆ
ಸಮಾಜ ಕಲ್ಯಾಣ ಇಲಾಖೆ ಎಸ್ಸಿ/ಎಸ್ಟಿ ಪಂಗಡದ ವಿದ್ಯಾವಂತ ನಿರುದ್ಯೋಗಿ ಯುವ ಪೀಳಿಗೆಯ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮ ಶೀಲತೆಗಾಗಿ 'ಐರಾವತ' ಯೋಜನೆ ಜಾರಿಗೊಳಿಸುತ್ತಿದೆ. 225 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ಬರುತ್ತಿದ್ದು, 4,500 ಟ್ಯಾಕ್ಸಿಗಳನ್ನು ಕೊಳ್ಳಲು ಸಹಾಯಧನ ನೀಡಲಾಗುತ್ತದೆ.
ಟ್ಯಾಕ್ಸಿ ಪಡೆದು ಯುವಕರು ಆರ್ಥಿಕವಾಗಿ ಸದೃಢಗೊಳ್ಳಲು ಸಹಕಾರ ನೀಡಲಾಗುತ್ತದೆ.

ಮೂರು ನಗರದಲ್ಲಿ ಟ್ಯಾಕ್ಸಿ ಸೇವೆ
ಟ್ಯಾಕ್ಸಿ ಸೇವೆ ಒದಗಿಸುವ ಕುರಿತು ಊಬರ್ ಜೊತೆ ಇಲಾಖೆ ಒಪ್ಪಂದ ಮಾಡಿಕೊಳ್ಳಲಿದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ 'ಐರಾವತ' ಯೋಜನೆಯಡಿ ಟ್ಯಾಕ್ಸಿಗಳು ಸಂಚಾರ ನಡೆಸಲಿವೆ.
ಎಸ್ಸಿ/ಎಸ್ಟಿ ವರ್ಗದ ನಿರುದ್ಯೋಗಿ ಯುವಕರಿಗಾಗಿ ಮಾತ್ರ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಟ್ಯಾಕ್ಸಿ ಕೊಳ್ಳಲು 5 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಐದು ಲಕ್ಷಕ್ಕಿಂತ ಹೆಚ್ಚಿನ ಹಣದ ಟ್ಯಾಕ್ಸಿ (ವಾಹನ) ಗಳನ್ನು ಪಡೆದರೆ ಊಬರ್ ಕಂಪನಿ ಅದರ ಜವಾಬ್ದಾರಿ ವಹಿಸಿಕೊಳ್ಳಲಿದೆ.

ಅಕ್ಟೋಬರ್ 2ರಿಂದ ಅರ್ಜಿ
ಟ್ಯಾಕ್ಸಿ ಕೊಳ್ಳಲು ಸಹಾಯಧನ ಪಡೆಯಲು ಇಚ್ಛಿಸುವ ಯುವಕರು ಅಕ್ಟೋಬರ್ 2ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಪಾರದರ್ಶಕತೆ ಕಾಪಾಡಲು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಅರ್ಜಿ ಜೊತೆಗೆ ಆಧಾರ್ ಕಾರ್ಡ್ ನಂಬರ್ ಸಹ ನೀಡಬೇಕು. ಒಮ್ಮೆ ಫಲಾನುಭವಿ ಆದವರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.

ಸಹಾಯಧನ ಏರಿಕೆ
ಹಿಂದೆಯೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಟ್ಯಾಕ್ಸಿ ಖರೀದಿ ಯೋಜನೆ ಜಾರಿಯಲ್ಲಿತ್ತು. ಆದರೆ, ಅದರ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪಗಳಿತ್ತು. ಈಗ ಹೊಸ ಸ್ವರೂಪದಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ. ಟ್ಯಾಕ್ಸಿ ಕೊಳ್ಳಲು ಇದ್ದ ಸಹಾಯಧನವನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
|
ಪ್ರಿಯಾಂಕ್ ಖರ್ಗೆ ಟ್ವಿಟ್
ಐರಾವತ ಯೋಜನೆ ಕುರಿತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.












Click it and Unblock the Notifications