ಏರ್ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್ಡಿಕೆ ಪತ್ರ
ಬೆಂಗಳೂರು, ಆಗಸ್ಟ್ 13 : ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರವಾಗುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮಂಗಳವಾರ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಬೆಂಗಳೂರಿನಲ್ಲಿಯೇ ಏರ್ ಶೋ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಬೆಂಗಳೂರು ಏರ್ ಶೋ ನಡೆಸಲು ಉತ್ತಮವಾದ ಸ್ಥಳವಾಗಿದ್ದು, ಎಲ್ಲಾ ಸೌಕರ್ಯಗಳು ಇಲ್ಲಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಏರ್ ಶೋ ಸ್ಥಳಾಂತರದ ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!
11ನೇ ಎಡಿಷನ್ನ ಏರ್ ಶೋ ಫೆಬ್ರವರಿ 2017ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು. ವಿವಿಧ ದೇಶಗಳ 549 ಮತ್ತು ಭಾರತದ 51 ಕಂಪನಿಗಳು ಇದರಲ್ಲಿ ಪಾಲ್ಗೊಂಡಿದ್ದವು ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನಿಂದ ಏರ್ ಶೋ ಕಸಿಯಬೇಡಿ: ಹಸ್ತಾಕ್ಷರ ಅಭಿಯಾನ
ಬೆಂಗಳೂರಿಗೆ ಏರ್ ಶೋ ನಡೆಸಿದ ಅನುಭವವಿದೆ. ಉತ್ತಮವಾದ ವಾತಾವರಣವಿದ್ದು, ವಾಯುನೆಲೆಯೂ ಉತ್ತಮವಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
There is mounting pressure from all over the country against reported shifting of #AeroIndia from Bengaluru. #AeroIndia is a part of Brand Bengaluru. I request central govt to desist from making any such move. @narendramodi @nsitharaman @PMOIndia pic.twitter.com/E9WBMCHKXP
— CM of Karnataka (@CMofKarnataka) August 13, 2018
2017 ಫೆಬ್ರವರಿ 13ರಿಂದ 5 ದಿನಗಳ ಕಾಲ ಬೆಂಗಳೂರಿನಲ್ಲಿ ಏರ್ ಶೋ ನಡೆದಿತ್ತು. ಆದರೆ, ಮುಂದಿನ ಏರ್ ಶೋ ಎಲ್ಲಿ ನಡೆಸಲಾಗುತ್ತದೆ? ಎಂದು ಘೋಷಣೆ ಮಾಡಿರಲಿಲ್ಲ. ಈಗ ಲಕ್ನೋಗೆ ಏರ್ ಶೋ ಸ್ಥಳಾಂತರ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ.
ಉತ್ತರ ಪ್ರದೇಶದ ಲಕ್ನೋಗೆ ಏರ್ ಶೋ ಸ್ಥಳಾಂತರ ಮಾಡುವಂತೆ ಯೋಗಿ ಆದಿತ್ಯನಾಥ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಭಕ್ಷಿತಾ ತಲಾಬ್ ವಾಯುನೆಲೆಯಲ್ಲಿ ಏರ್ ಶೋ ನಡೆಸುವಂತೆ ಮನವಿಯಲ್ಲಿ ಅವರು ತಿಳಿಸಿದ್ದರು.