ಬೆಂಗಳೂರು-ಮೈಸೂರು ನಡುವೆ ಏರ್ ಇಂಡಿಯಾ ಹಾರಾಟ
ಬೆಂಗಳೂರು, ಮೇ 26 : ಬೆಂಗಳೂರು-ಮೈಸೂರು ನಡುವೆ ಸಂಚರಿಸುವವರಿಗೆ ಸಂತಸದ ಸುದ್ದಿ. ಎರಡೂ ನಗರಗಳ ನಡುವೆ ವಿಮಾನ ಸಂಚಾರವನ್ನು ಆರಂಭಿಸಲು ಏರ್ ಇಂಡಿಯಾ ಮುಂದಾಗಿದೆ. 2014ರ ಸೆಪ್ಟೆಂಬರ್ನಿಂದ ಬೆಂಗಳೂರು-ಮೈಸೂರು ನಡುವಿನ ವಿಮಾನ ಸಂಚಾರ ಸ್ಥಗಿತಗೊಂಡಿದೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ಬೆಂಗಳೂರು-ಮೈಸೂರು ನಡುವೆ ವಿಮಾನಯಾನ ಸೇವೆ ಆರಂಭಿಸಲಿದ್ದು, ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಹೇಳಿದರು. [ಮೈಸೂರಿಗರಿಗೆ ಮತ್ತೆ ಕೈ ಕೊಟ್ಟ ಸ್ಪೈಸ್ ಜೆಟ್]

ಬೆಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭಿಸುವ ಕುರಿತು ಕೇಂದ್ರ ಸರ್ಕಾರದ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಸರ್ಕಾರವೂ ಇದಕ್ಕೆ ಒಪ್ಪಿದ್ದು, ಶೀಘ್ರದಲ್ಲಿಯೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ತಿಳಿಸಿದರು. [ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ]
2014ರಲ್ಲಿ ಸ್ಥಗಿತಗೊಂಡಿತ್ತು : ಬೆಂಗಳೂರು-ಮೈಸೂರು ನಡುವಿನ ವಿಮಾನ ಸಂಚಾರ 2014 ಸೆಪ್ಟೆಂಬರ್ನಲ್ಲಿ ಸ್ಥಗಿತಗೊಂಡಿತ್ತು. ಉಭಯ ನಗರಗಳ ನಡುವೆ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ಸೆ.5ರಿಂದ ಸೇವೆಯನ್ನು ಸ್ಥಗಿತಗೊಳಿಸಿತ್ತು. [ಮಂಡಕಳ್ಳಿ ವಿಮಾನ ನಿಲ್ದಾಣದ ಬಗ್ಗೆ ಓದಿ]
ಮೈಸೂರಿನ ಮಂಡಕಳ್ಳಿಯಲ್ಲಿನ ವಿಮಾನ ನಿಲ್ದಾಣದಲ್ಲಿ 2010ರಲ್ಲಿ ವಿಮಾನ ಹಾರಾಟ ಆರಂಭವಾಗಿತ್ತು. ಮೊದಲು ಕಿಂಗ್ ಫಿಷರ್ ಮೈಸೂರು-ಬೆಂಗಳೂರು ವಿಮಾನ ಹಾರಾಟ ಪ್ರಾರಂಭಿಸಿತ್ತು. ಆದರೆ, ನಂತರ ಕಿಂಗ್ ಫಿಷರ್ ಸಂಸ್ಥೆ ನಷ್ಟ ಅನುಭವಿಸಿದ ನಂತರ ಹಾರಾಟ ನಿಲ್ಲಿಸಲಾಗಿತ್ತು. ಆಗ ಸ್ಪೈಸ್ ಜೆಟ್ ತನ್ನ ಸೇವೆಯನ್ನು ಆರಂಭಿಸಿತ್ತು.












Click it and Unblock the Notifications