Karnataka CM : ಸಿದ್ದು, ಡಿಕೆಶಿ ಮುಂದೆ ಬ್ಯಾಲೆಟ್ ಓಪನ್ ಮಾಡಲಿರುವ ಎಐಸಿಸಿ ವೀಕ್ಷಕರು
ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಈಗ ದೆಹಲಿ ಅಂಗಳ ತಲುಪಿದೆ. ಕಾಂಗ್ರೆಸ್ ಹೈ ಕಮಾಂಡ್ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ನಿರ್ಧರಿಸಲಿದೆ. ಶಾಸಕರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದು, ಅದರ ಆಧಾರದ ಮೇಲೆ ಮುಂದಿನ ಮುಖ್ಯಮಂತ್ರಿ ಎಂದು ನಿರ್ಧಾರ ಮಾಡಲಿದ್ದಾರೆ.
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಭಾನುವಾರ ರಾತ್ರಿ ನಡೆದ ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದೆ. ಗೌಪ್ಯ ಮತದಾನದ ಮೂಲಕ ಶಾಸಕರು ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಿದ್ದು, ಬ್ಯಾಲೆಟ್ ಅನ್ನು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಂದೆ ಎಐಸಿಸಿ ವೀಕ್ಷಕರು ಓಪನ್ ಮಾಡಲಿದ್ದಾರೆ.

ಸೋಮವಾರ ದೆಹಲಿಗೆ ಸಿದ್ದರಾಮಯ್ಯ ತೆರಳಿದ್ದು, ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಅನಾರೋಗ್ಯದ ನೆಪ ನೀಡಿ ದೆಹಲಿ ಭೇಟಿಯನ್ನು ತಪ್ಪಿಸಿಕೊಂಡಿದ್ದ ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಲಿದ್ದಾರೆ. ಇಬ್ಬರೂ ನಾಯಕರ ಜೊತೆ ಚರ್ಚೆ ಮಾಡಿ, ಒಮ್ಮತದ ತೀರ್ಮಾನ ಮಾಡಲು ದೆಹಲಿ ಹೈಕಮಾಂಡ್ ನಿರ್ಧರಿಸಿದೆ.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿ ಮಾಡಲಿದ್ದು ಮಾತುಕತೆ ನಡೆಸಲಿದ್ದಾರೆ. ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದೆ. ಈಗ ವೈಮನಸ್ಸು ಉಂಟಾದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎನ್ನುವ ಆತಂಕ ಹೈಕಮಾಂಡ್ಗೆ ಇದೆ.
ಶಾಸಕರ ಅಭಿಪ್ರಾಯದ ಮೇಲೆ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದರೆ ಸಿದ್ದರಾಮಯ್ಯ ಕೈ ಮೇಲಾಗಲಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಅಧಿಕಾರ ಹಂಚಿಕೆ ಮಾಡಲು ಹೈಕಮಾಂಡ್ ಸೂತ್ರವೊಂದನ್ನು ಮುಂದಿಟ್ಟಿದೆ. ಇಬ್ಬರೂ ನಾಯಕರಿಗೆ 2.5 ವರ್ಷ ಸಿಎಂ ಆಗಲು ಕೇಳಲಾಗಿದ್ದು, ಡಿಕೆಶಿ ಇದಕ್ಕೆ ಒಪ್ಪುತ್ತಾರಾ ಕಾದು ನೋಡಬೇಕಿದೆ.
ಸಿಎಂ ಆಯ್ಕೆ ಗೊಂದಲವನ್ನು ಇಂದೇ ಪರಿಹರಿಸುವ ಉದ್ದೇಶ ಹೈಕಮಾಂಡ್ನದ್ದಾಗಿದೆ. ಆದಷ್ಟು ಬೇಗ ಮುಖ್ಯಮಂತ್ರಿ ಆಯ್ಕೆ ಮಾಡಿದರೆ, ಸರ್ಕಾರ ರಚನೆ ಮಾಡಬಹುದಾಗಿದೆ. ಇನ್ನೂ ಸಚಿವರ ಪಟ್ಟಿ ಕೂಡ ದೊಡ್ಡದಾಗಿದ್ದು, ಇದನ್ನು ಗೊಂದಲ ಇಲ್ಲದೆ ಸರಿಪಡಿಸುವ ಜವಾಬ್ದಾರಿ ಕೂಡ ಹೈಕಮಾಂಡ್ ಮೇಲಿದೆ.
ಶಸ್ತ್ರತ್ಯಾಗ ಮಾಡಿದ್ರಾ ಡಿಕೆ ಶಿವಕುಮಾರ್?
ಇನ್ನು ಡಿಕೆ ಶಿವಕುಮಾರ್ ಸಿಎಂ ಸ್ಥಾನದ ಆಸೆಯನ್ನು ಕೈಬಿಟ್ರಾ ಎನ್ನುವ ಅನುಮಾನ ಕಾಡುತ್ತಿದೆ. ಸೋಮವಾರ ಡಿಕೆಶಿ ಮಾತುಗಳಲ್ಲಿ ಒಂದು ರೀತಿಯ ವೈರಾಗ್ಯ ಕಾಣುತ್ತಿತ್ತು, ಅಲ್ಲದೆ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದಿದ್ದ ಅವರು, ಅವರಿಗೆ ಆಲ್ ದ ಬೆಸ್ಟ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಅಂದ್ರಾ ಎನ್ನುವ ಅನುಮಾನ ಕಾಡುತ್ತಿದೆ.












Click it and Unblock the Notifications