ವ್ಯವಸಾಯ, ಕೈಗಾರಿಕೆ ದೇಶದ ಅಭಿವೃದ್ಧಿಯ ಕಣ್ಣುಗಳು: ವೆಂಕಯ್ಯ ನಾಯ್ಡು
ಬೆಂಗಳೂರು, ಸೆಪ್ಟೆಂಬರ್ 27: ದೇಶ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ವೈಜ್ಞಾನಿಕವಾದ ವ್ಯವಸಾಯ ಹಾಗೂ ವ್ಯವಸ್ಥಿತವಾದ ಕೈಗಾರಿಕರಣ ಆಗಬೇಕು. ಇವುಗಳು ಮನುಷ್ಯನಿಗೆ ಎರಡು ಕಣ್ಣುಗಳಿದ್ದಂತೆ. ದೇಶದ ಸರ್ವೋತ್ತಮ ಅಭಿವೃದ್ಧಿಗೆ ವ್ಯವಸಾಯ ಮತ್ತು ಕೈಗಾರಿಕೆಗಳು ಅತಿ ಮುಖ್ಯ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಮ್ಮ ನಾಗರಿಕತೆಗೆ ತುಂಬಾ ಇತಿಹಾಸವಿದೆ. ನೀವು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಬೇಡಿ ಎಂದು ಹೇಳುವುದಿಲ್ಲ. ವಿದೇಶದಿಂದ ಬಂದ ನಂತರ ನಮ್ಮ ನೆಲದಲ್ಲಿ ಉತ್ತಮವಾದ ಸಾಧನೆ ಮಾಡಿ ದೇಶದ ಅಭಿವೃದ್ಧಿಗೆ ಪಣ ತೊಡಬೇಕು," ಎಂದರು.

"ಯಾರು ದೇಶದ ಅಭಿವೃದ್ಧಿಗೆ ದುಡಿಯುತ್ತಾರೋ ಅವರು ದೊಡ್ಡ ವ್ಯಕ್ತಿ ಆಗುತ್ತಾರೆ. ಯಾವುದೇ ಒಂದು ಕೆಲಸ ಉತ್ತಮ ಫಲಿತಾಂಶ ನೀಡಬೇಕಾದರೆ ಮಾನವನ ಭಾಗವಹಿಸುವಿಕೆ ಬಹಳ ಮುಖ್ಯ. ನೀವು ಸದ್ಯ ವಿದ್ಯಾರ್ಥಿಗಳಾಗಿದ್ದೀರಾ ಮುಂದಿನ ದಿನಗಳಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸಿದಾಗ ದೇಶದ ಬಗ್ಗೆ ಪ್ರೀತಿ ಇಟ್ಟುಕೊಂಡು ತಂಡ ತಂಡವಾಗಿ ಕೆಲಸ ನಿರ್ವಹಿಸಿದರೆ ಉತ್ತಮ ಫಲಿತಾಂಶ ಬರುತ್ತದೆ," ಎಂದು ಅಭಿಪ್ರಾಯಪಟ್ಟರು.

"ವಿದ್ಯಾರ್ಥಿಗಳು ಕನಸು ಕಾಣಬೇಕು. ಗುರಿ ಇರಬೇಕು. ಆದರೆ ಕನಸು ಗುರಿ ಮಾತ್ರ ಇದ್ದರೆ ಸಾಧ್ಯವಾಗುವುದಿಲ್ಲ. ಅದಕ್ಕೆ ಪೂರಕವಾದ ಶ್ರಮ ಮತ್ತು ಬುದ್ಧಿವಂತಿಕೆ ಮುಖ್ಯ," ಎಂದು ಉಪರಾಷ್ಟ್ರಪತಿ ಕಿವಿಮಾತು ಹೇಳಿದರು.
ನಾನು ಒಬ್ಬ ಸಾಮಾನ್ಯ ವರ್ಗದ ರೈತ ಕುಟುಂಬದಿಂದ ಬಂದಂತ ವ್ಯಕ್ತಿ. ನನ್ನ ಶ್ರಮದಿಂದ ಇಂದು ನಿಮ್ಮ ಮುಂದೆ ಭಾರತ ದೇಶದ ಉಪರಾಷ್ಟ್ರಪತಿಯಾಗಿದ್ದೇನೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.













Click it and Unblock the Notifications