Breaking: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಇಳಿಕೆ, ಒಣ ಹವೆ ಸಾಧ್ಯತೆ?
ಬೆಂಗಳೂರು, ನವೆಂಬರ್ 25: ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಿಂಗಾರು ಮಳೆ ಕ್ಷೀಣಿಸುವ ಮುನ್ಸೂಚನೆ ನೀಡಿದ್ದು, ಶುಷ್ಕ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ಕರ್ನಾಟಕ ಹವಾಮಾನ ಕೇಂದ್ರದ ಮುನ್ಸೂಚನೆ ಪ್ರಕಾರ, ಮುಂದಿನ ಐದು ದಿನಗಳ ಪೈಕಿ ಎರಡರಿಂದ ಮೂರು ದಿನ ಕರಾವಳಿ ಭಾಗದ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಾತ್ರ ಹಗುರ ಮಳೆಯಾಗುವ ನಿರೀಕ್ಷೆ ಇದೆ. ನಂತರ ಮಳೆ ಮತ್ತಷ್ಟು ಇಳಿಕೆಯಾಗಲಿದ್ದು, ಬಿಸಿಲಿನ ತಾಪಮಾನ ಏರಿಕೆ ಆಗಲಿದೆ. ಇದರಿಂದ ಶುಷ್ಕ ವಾತಾವರಣ ನಿರ್ಮಾಣವಾಗಲಿದೆ.
ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ಸಂಚಾರ ವ್ಯವಸ್ಥೆ
ನವೆಂಬರ್ 28ರವರೆಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಒಂದೆರಡು ಕಡೆಗೆ ತುಂತುರು ಇಲ್ಲವೇ ಹಗುರ ಮಳೆ ಸುರಿಯುವ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡಿನ ಹಲವು ಪ್ರದೇಶಗಳಲ್ಲಿ ತುಂತುರು ಮಳೆ ಬೀಳಬಹುದು. ಶುಕ್ರವಾರವೇ ಅನೇಕ ಕಡೆಗಳಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಇನ್ನೂ ಐದನೇ ದಿನಕ್ಕೆ ಅನೇಕ ಕಡೆಗಳಲ್ಲಿ ಒಣ ಹವೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಡಾ.ಪ್ರಸಾದ್ ತಿಳಿಸಿದ್ದಾರೆ.
ತಮಿಳುನಾಡು ಕರಾವಳಿ ಭಾಗದಲ್ಲಿ ಗುರುವಾರ ಕಂಡು ಬಂದಿದ್ದ ಮೇಲ್ಮೈ ಸುಳಿಗಾಳಿಯು ಶುಕ್ರವಾರ ಕೇರಳದತ್ತ ಈಶಾನ್ಯ ಅರಬ್ಬಿ ಸಮುದ್ರ ಮಾರ್ಗವಾಗಿ ಹಾದು ಹೋಗಿದೆ. ಇದಲ್ಲದೇ ಬಂಗಾಳಕೊಲ್ಲಿಯ ಅಂಡಮಾನ್ ದ್ವೀಪ ಪ್ರದೇಶದಲ್ಲಿ 3.1ಕಿಲೋ ಮೀಟರ್ನಷ್ಟು ಮೇಲ್ಮೈ ಸುಳಿಗಾಳಿ ಹೊಸದಾಗಿ ನಿರ್ಮಾಣವಾಗಿದೆ. ಆದರೆ ಸದ್ಯಕ್ಕೆ ಈ ವೈಪರಿತ್ಯಗಳ ಪ್ರಭಾವ ಕರ್ನಾಟಕದ ಮೇಲೆ ಅಷ್ಟಾಗಿ ಬೀರುವುದಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರಿಗೆ ಏನಿದೆ ಮುನ್ಸೂಚನೆ?
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನವೆಂಬರ್ 27ರವರೆಗೆ ಹಗುರ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ಉಳಿದ ಬಡಾವಣೆಗಳಲ್ಲಿ ಬಿಸಿಲು ಕಂಡು ಬರಲಿದೆ. ಮಳೆ ಕಡಿಮೆಯಾಗಲಿದೆ. ಆದರೆ ಬೆಳಗ್ಗೆ ಮಂಜು ಮತ್ತು ಚಳಿ ಪ್ರಮಾಣ ಹೀಗೆ ಮುಂದುವರಿಯಲಿದೆ. ಸೋಮವಾರ (ನ. 28)ದ ವೇಳೆಗೆ ಬಹುತೇಕ ಕಡೆಗಳಲ್ಲಿ ಒಣಹವೆ ಕಂಡು ಬರಲಿದೆ. ಕಳೆದ 3-4ದಿನದ ಹಿಂದೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದ ತಾಪಮಾನ ಸಾಮಾನ್ಯ ಮಟ್ಟಕ್ಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಕನಿಷ್ಠ ತಾಪಮಾನ 18ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 25ರಿಂದ 28ರವರೆಗೆ ದಾಖಲಾಗಬಹುದು ಎಂದು ಮಳೆ ಮುನ್ಸೂಚನೆ ವರದಿ ತಿಳಿಸಿದೆ.